ಉಡುಪಿ: ಶೀರೂರು ಶ್ರೀ ಸಾವಿನ ತನಿಖೆ ಚುರುಕು
ಉಡುಪಿ, ಜುಲೈ.20: ಗುರುವಾರ ಮೃತಪಟ್ಟ ಶೀರೂರು ಶ್ರೀ ಸಾವಿನ ಬಗ್ಗೆ ಎದ್ದಿರುವ ಅನುಮಾನಗಳ ಕುರಿತು ಇಂದು ಶುಕ್ರವಾರ ತನಿಖೆ ಪ್ರಾರಂಭವಾಗಲಿದೆ. ಸ್ವಾಮೀಜಿ ಸಾವಿನ ಬಗ್ಗೆ ಎದ್ದಿರುವ ಊಹಾಪೋಹಗಳ ತನಿಖೆಗಾಗಿ ಜಿಲ್ಲೆಯ ದಕ್ಷ ಅಧಿಕಾರಿಗಳ ತಂಡವನ್ನು ಎಸ್ಪಿ ನಿಂಬರ್ಗಿ ರಚನೆ ಮಾಡಿದ್ದಾರೆ.
ಗುರುವಾರ ಸ್ವಾಮೀಜಿ ಮೃತಪಟ್ಟ ಬಳಿಕ ಹಿರಿಯಡ್ಕ ಠಾಣೆಯಲ್ಲಿ ಶೀರೂರು ಶ್ರೀ ಸಹೋದರ ಲಾತವ್ಯ ಆಚಾರ್ಯ ಎಂಬುವರು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ಕೂಡ ನಡೆದಿತ್ತು. ಹೀಗಾಗಿ ಎಫ್ ಐಆರ್ ದಾಖಲಿಸಿರುವ ಪೊಲೀಸರು ಇವತ್ತು ತನಿಖೆ ಪ್ರಾರಂಭಿಸಿದ್ದಾರೆ.
ಶೀರೂರು ಸ್ವಾಮೀಜಿ ಸಾವಿಗೂ ಮುನ್ನ ಹಾಗೂ ನಂತರದ 10 ಘಟನಾವಳಿ
ಸ್ವಾಮೀಜಿಯ ಮರಣೋತ್ತರ ಪರೀಕ್ಷೆಯ ವರದಿ ಇನ್ನಷ್ಟೇ ಬರಲಿದ್ದು, ಪೊಲೀಸರ ತನಿಖೆಗೆ ಇದು ಮಹತ್ವದ ದಿಕ್ಕು ತೋರಿಸಲಿದೆ. ಈಗಾಗಲೇ ಶೀರೂರು ಮೂಲಮಠದಲ್ಲಿ ಠಿಕಾಣಿ ಹೂಡಿರುವ ಪೊಲೀಸರ ತಂಡ ಅಲ್ಲಿ ಪರಿಶೀಲನೆ ನಡೆಸುತ್ತಿದೆ.
ಮೂಲಮಠವನ್ನ ಗುರುವಾರವೇ ಸುಪರ್ದಿಗೆ ತೆಗೆದುಕೊಂಡಿರುವ ಪೊಲೀಸರು ಅಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ್ದಾರೆ. ಪ್ರತಿಯೊಂದು ವಸ್ತುಗಳನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಧರ್ಮದೈವ ಕೊಡಮಣಿತ್ತಾಯನ ಉಗ್ರಕೋಪಕ್ಕೆ ಗುರಿಯಾದರೇ ಶೀರೂರು ಶ್ರೀ?
ಜೊತೆಗೆ ಪೊಲೀಸರ ತಂಡ ಮಠದ ಸಿಬ್ಬಂದಿ ಮತ್ತು ಸ್ವಾಮೀಜಿಗೆ ಆತ್ಮೀಯರಾದವರಲ್ಲಿ ಮಾಹಿತಿ ಕಲೆ ಹಾಕುತ್ತಿದೆ. ಸ್ವಾಮೀಜಿಯ ಸಹೋದರ ಇದೊಂದು ಅಸ್ವಾಭಾವಿಕ ಸಾವು. ಸಾವಿನ ಹಿಂದೆ ಕೆಲವು ಸಂಶಯಗಳಿವೆ. ಹೀಗಾಗಿ ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ದೂರು ನೀಡಿದ್ದರು.