2047ಕ್ಕೆ ಭಾರತ ಪ್ರಪಂಚದ ನಂಬರ್ 1 ರಾಷ್ಟ್ರ ಆಗಲಿದೆ: ಉಡುಪಿಯಲ್ಲಿ ರಾಜನಾಥ್ ಸಿಂಗ್ ಭವಿಷ್ಯ
ಮಂಗಳೂರು, ನವೆಂಬರ್, 18: ಕಾಲು ಕೆರೆದುಕೊಂಡು ನಾವು ಯಾರ ಜೊತೆಯೂ ಗಲಾಟೆ ಶುರು ಮಾಡುವುದಿಲ್ಲ. ಭಾರತದ ತಂಟೆಗೆ ಬಂದರೆ ತಕ್ಕ ಉತ್ತರ ನೀಡುತ್ತೇವೆ. ಇಡೀ ಪ್ರಪಂಚ ಭಾರತದ ಮಾತು ಕೇಳುವ ಕಾಲ ಬಂದಿದೆ ಅಂತಾ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಡುಪಿಯಲ್ಲಿ ಹೇಳಿದ್ದಾರೆ.
ಉಡುಪಿಯ ಮಣಿಪಾಲ ಮಾಹೆ ವಿಶ್ವ ವಿದ್ಯಾನಿಲಯದ ಮೂವತ್ತನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಬಳಿಕ ಮಾತನಾಡಿದ ರಾಜನಾಥ್ ಸಿಂಗ್, "ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ನಾಯಕತ್ವ ವಹಿಸಿದೆ. ಕಾಲು ಕೆರೆದುಕೊಂಡು ನಾವು ಯಾರ ಜೊತೆಯೂ ತಗಾದೆ ಶುರು ಮಾಡುವುದಿಲ್ಲ. ಭಾರತದ ತಂಟೆಗೆ ಬಂದರೆ ತಕ್ಕ ಉತ್ತರ ನೀಡುತ್ತೇವೆ. ಇಡೀ ಪ್ರಪಂಚ ಭಾರತದ ಮಾತು ಕೇಳುವ ಕಾಲ ಬಂದಿದೆ. ಐದು ವರ್ಷದಲ್ಲಿ ವಿಶ್ವದ ಮೂರನೇ ಆರ್ಥಿಕ ದೇಶವಾಗಿ ಭಾರತ ಸದೃಢವಾಗಿ ನಿಲ್ಲಲಿದೆ. ಭಾರತ 2047ಕ್ಕೆ ಪ್ರಪಂಚ ಮೊದಲ ಸ್ಥಾನದಲ್ಲಿ ನಿಲ್ಲಲಿದೆ," ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭವಿಷ್ಯ ನುಡಿದರು.
ಸತೀಶ್ ಜಾರಕಿಹೊಳಿಯಿಂದ ಸಮಾಜದಲ್ಲಿ ಹುಳಿ ಹಿಂಡುವ ಕೆಲಸ: ಸಿಎಂ ಬಸವರಾಜ ಬೊಮ್ಮಾಯಿ
ಗ್ಲೋಬಲ್ ಸಿಟಿಜನ್ ನಿರ್ಮಿಸಲು ಎನ್ಇಪಿ ಜಾರಿ
ದೇಶವನ್ನು ಐದು ಟ್ರಿಲಿಯನ್ ಆರ್ಥಿಕ ರಾಷ್ಟ್ರ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ದೇಶದ ಯುವ ಜನಾಂಗ ಇದಕ್ಕೆ ಕೊಡುಗೆ ನೀಡುತ್ತಿದೆ. ಗ್ಲೋಬಲ್ ಸಿಟಿಜನ್ ನಿರ್ಮಿಸಲು ಎನ್ಇಪಿ ಜಾರಿಗೆ ತಂದಿದ್ದೇವೆ. ಮಾಹೆ ವಿಶ್ವವಿದ್ಯಾಲಯ ಸತ್ಯ ನಾಡೆಳ್ಳಾ ಮೈಕ್ರೋಸಾಫ್ಟ್ನ ನೇತೃತ್ವ ವಹಿಸಿದ್ದಾರೆ. ಮೈಕ್ರೋಸಾಫ್ಟ್ ಮೀರಿಸುವಂತಹ ಕಂಪನಿ ಭಾರತದಲ್ಲಿ ಸ್ಥಾಪನೆ ಆಗಬೇಕು. ಅಂತಾರಾಷ್ಟ್ರೀಯ ಕಂಪನಿ ಸಿಇಒಗಳು ಭಾರತದ ಮೂಲದವರು ಎಂಬುವುದು ನಮ್ಮ ಹೆಗ್ಗಳಿಕೆ ಎಂದು ರಾಜನಾಥ ಸಿಂಗ್ ಹೇಳಿದರು.
ಅಡಿಕೆಗೆ ಚುಕ್ಕೆ ರೋಗ: ಔಷಧಿಗಾಗಿ ₹10 ಕೋಟಿ ಬಿಡುಗಡೆ- ಸಿಎಂ ಬೊಮ್ಮಾಯಿ
ವಿದ್ಯಾರ್ಥಿಗಳಿಗೆ ರಾಜನಾಥ್ ಸಿಂಗ್ ಕಿವಿಮಾತು
ವಿದ್ಯಾರ್ಥಿಗಳಲ್ಲಿ ಜ್ಞಾನದ ಜೊತೆ ಬುದ್ದಿವಂತಿಕೆಯೂ ಅಗತ್ಯವಾಗಿದೆ. "ರಾಮನಿಗಿಂತ ರಾವಣ ಜ್ಞಾನಿಯಾಗಿದ್ದ, ವಿವೇಕ ಇರುವುದರಿಂದ ಜನ ರಾಮನನ್ನು ಪೂಜಿಸುತ್ತಾರೆ. ಸಂಸ್ಕೃತಿ ಮತ್ತು ಸಂಪ್ರದಾಯ ಇಲ್ಲದ ನಾಗರಿಕ ಜೀವನಕ್ಕೆ ಅರ್ಥ ಇಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ಹಲವಾರು ವರ್ಷಗಳಿಂದ ಸಾಧನೆ ಮಾಡಿಕೊಂಡು ಬಂದಿದೆ. ಈ ಬಗೆಗಿನ ನಮ್ಮ ಅಭಿಮಾನವನ್ನು ಕೆಲವರು ಹೆಚ್ಚುಗಾರಿಕೆ ಎಂದು ಟೀಕಿಸುತ್ತಾರೆ. ಇತಿಹಾಸವನ್ನು ತಿಳಿದುಕೊಳ್ಳದ ವ್ಯಕ್ತಿಗಳು ಇಂತಹ ಟೀಕೆಗಳನ್ನು ಮಾಡುತ್ತಾರೆ. ಭಾರತೀಯರು ಕೊಟ್ಟ ಶೂನ್ಯ ಇರದ ಗಣಿತವನ್ನು ಊಹಿಸಲು ಸಾಧ್ಯವಿಲ್ಲ. ಪೈಥಾಗೋರಸನ ಪ್ರಮೇಯವನ್ನು ಬೋದಾಯನ ಋಷಿ 300 ವರ್ಷಗಳ ಹಿಂದೆಯೇ ಹೇಳಿದ್ದರು. ಭಾರತದ ಆರ್ಥಿಕ ಸದೃಢತೆ ಗುಣಮಟ್ಟದ ಮಾನವ ಸಂಪನ್ಮೂಲಗಳಲ್ಲಿ ಇದೆ ಎಂದು ತಿಳಿಸಿದರು.
3 ದಿನಗಳ ಕಾಲ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ
ಇನ್ನು ಎಂಐಟಿ ಕ್ಯಾಂಪಸ್ನಲ್ಲಿ ನೂತನವಾಗಿ ನಿರ್ಮಿಸಿದ ಆರ್ಕಿಟೆಕ್ಚರ್ ಕಟ್ಟಡ ಉದ್ಘಾಟನೆಯನ್ನು ರಾಜನಾಥ ಸಿಂಗ್ ಮಾಡಿದ್ದಾರೆ. ಮೂರು ದಿನಗಳಲ್ಲಿ 5,062 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನವಾಗಲಿದೆ. 208 ಜನ ವಿದ್ಯಾರ್ಥಿಗಳಿಗೆ ಪಿಎಚ್ಡಿ ಪ್ರಧಾನವಾಗಲಿದೆ. ಇಂದು ಐದು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ರಾಜನಾಥ್ ಸಿಂಗ್ ಗೌರವಿಸಿದ್ದು, ವಿದ್ಯಾರ್ಥಿಗಳಿಗೆ ಅವರು ಕೆಲವು ಕಿವಿಮಾತುಗಳನ್ನು ಹೇಳಿ ಗಮನ ಸೆಳೆದರು.
ವಿದ್ಯಾರ್ಥಿಗಳು, ಜನರ ಅಭಿಪ್ರಾಯ ಏನು?
ಸಾಮಾನ್ಯವಾಗಿ ದೇಶದಲ್ಲಿ ರಾಜಕೀಯ ಪಕ್ಷಗಳ ನಡುವೆ ಕೆಸರೆರೆಚಾಟಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಆಡಳಿತ ಪಕ್ಷ, ವಿಪಕ್ಷಗಳ ನಡುವೆ ವಾಗ್ವಾದಳು ಆಗುತ್ತಲೇ ಇರುತ್ತವೆ. ವಿಧಾನಸಭೆ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ಹಾಗೆಯೇ ವಾಕ್ಸಮರಗಳು ಕೂಡ ಹೆಚ್ಚುತ್ತಲೇ ಇವೆ. ತಮ್ಮ ಆಡಳಿತ ಅವಧಿಯಲ್ಲಿ ಮಾಡಿರುವ ಸಾಧನೆಗಳನ್ನು ಜನರ ಮುಂದೆ ಇಡುತ್ತಾ ಹೋಗುತ್ತಾರೆ. ಮತ್ತೊಂದೆಡೆ ಏನು ಸಾಧನೆ ಮಾಡದಿದ್ದರೂ ಕೂಡ ತಮ್ಮ ಬೇಳೆ ಬೇಯಿಸಿಕೊಳ್ಳಲು ಬೇರೆ ಪಕ್ಷದವರ ವಿರುದ್ಧ ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಲೇ ಇರುತ್ತಾರೆ. ಇಂತಹ ವಿಚಾರಗಳನ್ನು ಸಾಮಾನ್ಯವಾಗಿ ರಾಜಕಾರಣಿಗಳು ತಮ್ಮ ವೇದಿಕೆಗಳಲ್ಲಿ ಮಾತ್ರ ಇಟ್ಟುಕೊಳ್ಳುವುದು ಸೂಕ್ತವಾಗಿರುತ್ತದೆ ಎನ್ನುವುದು ಜನರ ಅಭಿಪ್ರಾಯವಾಗಿದೆ. ಶಿಕ್ಷಣ ಸಂಸ್ಥೆಗಳಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ರಾಜಕೀಯ ವಿಚಾರಗಳು ಹಬ್ಬುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಯಕ್ಷಪ್ರಶ್ನೆ ಆಗಿದೆ.