ಚಿತ್ರಗಳಲ್ಲಿ: ಲಾಬೂರಾಮ್ ಕುಟುಂಬದ ದುರಂತ
ಕಾರ್ಕಳ, ಏ.3: ಉಡುಪಿ ಜಿಲ್ಲೆ ಕಾರ್ಕಳ ಸಮೀಪ ಬುಧವಾರ ಸಂಭವಿಸಿದ ಅಪಘಾತದಲ್ಲಿ ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ಲಾಬೂರಾಮ್ ಅವರ ಪತ್ನಿ ಗಾಯತ್ರಿ ಸಾವನ್ನಪ್ಪಿದ ಸುದ್ದಿ ಓದಿರುತ್ತೀರಿ. ಈ ದುರ್ಘಟನೆಯಲ್ಲಿ ಗಾಯಗೊಂಡಿದ್ದ ಲಾಬೂರಾಮ್ ಅವರ ಪುತ್ರಿಯೊಬ್ಬರ ದೇಹಾರೋಗ್ಯ ಗಂಭೀರವಾಗಿದೆ ಎಂದು ಮಣಿಪಾಲ್ ಆಸ್ಪತ್ರೆ ಮೂಲಗಳು ಹೇಳಿವೆ.
ಕಾರ್ಕಳ ತಾಲೂಕಿನ ನೀರಬೈಲೂರು ಗ್ರಾಮದ ಸಮೀಪ ಇವರು ಪ್ರಯಾಣಿಸುತ್ತಿದ್ದ ಬೊಲೆರೋ ವಾಹನಕ್ಕೆ ಸರ್ಕಾರಿ ಕೆಎಸ್ಸಾರ್ಟಿಸಿ ಬಸ್ ನಡುವೆ ಡಿಕ್ಕಿ ಹೊಡೆದಿದೆ. ಈ ಅವಘಡದಲ್ಲಿ ಪೊಲೀಸ್ ಪೇದೆ ಕಮ್ ಚಾಲಕ ನಟರಾಜ್ ಸ್ಥಳದಲ್ಲೇ ಮೃತಪಟ್ಟಿದ್ದರು. ಡಿಸಿಪಿ ಲಾಬೂರಾಮ್ ಪತ್ನಿ ಗಾಯತ್ರಿ ಅವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯಲ್ಲಿ ಸಾವನ್ನಪ್ಪಿದ್ದರು. ಮೃತದೇಹವನ್ನು ಗಮನಿಸಿದರೆ ಗಾಯತ್ರಿ ಅವರ ದೇಹದ ಮೇಲೆ ಹೆಚ್ಚಿನ ಗಾಯದ ಗುರುತು ಕಂಡು ಬಂದಿಲ್ಲ. ಅಪಘಾತದ ಆಘಾತದಿಂದ ಗಾಯತ್ರಿಯವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಗಾಯಗೊಂಡಿರುವ ಡಿಸಿಪಿ ಲಾಬೂ ರಾಮ್ ಅವರ ಇಬ್ಬರು ಪುತ್ರಿಯರು, ಕಾನ್ಸ್ ಟೇಬಲ್ ರಮೇಶ್ ದೇಸಾಯಿ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಾಬೂರಾಮ್ ಅವರ ಪುತ್ರಿ ಹರಿತಾ ಅವರ ದೇಹಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಬೊಲೆರೋ ವಾಹನದ ಚಿತ್ರಗಳನ್ನು ನೋಡಿ. [ಚಿತ್ರಗಳು: ಐಸಾಕ್ ರಿಚರ್ಡ್]

ಡಿಸಿಪಿ ಲಾಬೂ ರಾಮ್ ಅವರ ಇಬ್ಬರು ಪುತ್ರಿಯರು
ಗಾಯಗೊಂಡಿರುವ ಪೈಕಿ ಡಿಸಿಪಿ ಲಾಬೂ ರಾಮ್ ಅವರ ಇಬ್ಬರು ಪುತ್ರಿಯರಿದ್ದಾರೆ. ಪುನೀತಾ/ಸುನೀತಾ ಸುಮಾರು 15 ವರ್ಷ, ಹರಿತಾ ಸುಮಾರು 8 ವರ್ಷ ವಯಸ್ಸು. ಕಾನ್ಸ್ ಟೇಬಲ್ ರಮೇಶ್ ದೇಸಾಯಿ ಸೇರಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿದ್ದ ಗಾಯತ್ರಿ(35) ಅವರು ಪೊಲೀಸ್ ಮೂಲಗಳ ಪ್ರಕಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾಜಸ್ಥಾನ ಮೂಲದ ಲಾಬೂರಾಮ್
ಬೆಂಗಳೂರಿನ ಪಶ್ಚಿಮ ವಲಯ ಡಿಸಿಪಿ(ಕ್ರೈಂ) ಆಗಿರುವ ರಾಜಸ್ಥಾನ ಮೂಲದ ಲಾಬೂರಾಮ್ ಅವರು ಈ ಮುಂಚೆ ಮಾರ್ಚ್ 2011 ರಿಂದ ಜನವರಿ 2012ರ ತನಕ ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿ ಆಗಿ ಕಾರ್ಯ ನಿರ್ವಹಿಸಿದ್ದರು. ನಂತರ ಕಾರ್ಕಳದ ಎಸಿಪಿಯಾಗಿ ಕೂಡಾ ಕರ್ತವ್ಯ ನಿರ್ವಹಿಸಿದ್ದರು.

ಕಾರ್ಕಳ ಪೊಲೀಸರಿಂದ ದೂರು ದಾಖಲು
ಕಾರ್ಕಳ: 02.04.2014 ರಂದು 1:30 ಗಂಟೆಗೆ ಕಾರ್ಕಳ ತಾಲೂಕು ನೀರೆ ಗ್ರಾಮದ ನೀರೆ ಜಡ್ಡು ಎಂಬಲ್ಲಿ ಆರೋಪಿ ksrctc ಬಸ್ ಚಾಲಕ ಪ್ಯಾಟ್ರಿಕ್ ಎಂಬಾತನು ಕೆ.ಎಸ್.ಆರ್.ಟಿ.ಸಿ ಬಸ್ ನಂಬ್ರ ಕೆಎ-18 ಎಫ್ 577 ನೇದನ್ನು ಉಡುಪಿ ಕಡೆಯಿಂದ ಕಾರ್ಕಳದ ಕಡೆಗೆ ರಾಜ್ಯ ಹೆದ್ದಾರಿಯಲ್ಲಿ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಪ್ರದೀಪ ಪೂಜಾರಿ (25) ತಂದೆ ದಿವಂಗತ ಕೋಚು ಪೂಜಾರಿ ವಾಸ: ನೀರೆ ಮುಲ್ಯಾಕ್ಯಾರ್ ನೀರೆ ಗ್ರಾಮ ಕಾರ್ಕಳ ತಾಲೂಕು ಎಂಬವರ ದ್ವಿಚಕ್ರ ವಾಹನವನ್ನು ಒವರ್ ಟೇಕ್ ಮಾಡಿ ಕಾರ್ಕಳದ ಕಡೆಯಿಂದ ಉಡುಪಿ ಕಡೆಗೆ ಬರುತಿದ್ದ ಬೊಲೆರೋ ವಾಹನ ನಂಬ್ರ ಕೆಎ-02 ಜಿ 1106 ನೇದಕ್ಕೆ ಡಿಕ್ಕಿ ಹೊಡೆದುದರ ಪರಿಣಾಮ ಬೊಲೇರೋ ವಾಹನದಲ್ಲಿ ಪ್ರಯಾಣಿಸುತಿದ್ದ ಶ್ರೀಮತಿ ಗಾಯತ್ರಿ (35) ಎಂಬವರು ಸ್ಥಳದಲೇ ಮೃತಪಟ್ಟಿದ್ದು,
ಕುಮಾರಿ ಹರಿತಾ, ಪುನೀತಾ, ನಟರಾಜ್ ಮತ್ತು ರಮೇಶ್ ಎಂಬವರು ಗಾಯಗೊಂಡಿರುತ್ತಾರೆ. ಗಾಯಗೊಂಡವರನ್ನು ಹಾಗೂ ಮೃತೆ ಶ್ರೀಮತಿ ಗಾಯತ್ರಿಯವನ್ನು ಮಣಿಪಾಲ ಕೆ.ಎಂ.ಸಿ ಆಸ್ವತ್ರೆಗೆ ಸಾಗಿಸಿದ್ದು ಮಣಿಪಾಲ ಕೆ.ಎಂ.ಸಿ ಆಸ್ವತ್ರೆಯಲ್ಲಿ ಗಂಭೀರ ಗಾಯಗೊಂಡ ನಟರಾಜ ಇವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

ದ್ವಿಚಕ್ರವಾಹನ ಸವಾರನಿಂದಲೇ ದೂರು
ದ್ವಿಚಕ್ರವಾಹನ ಸವಾರ ಪ್ರದೀಪ ಪೂಜಾರಿ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 89/14 ಕಲಂ 279,337,338,304(ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.












Click it and Unblock the Notifications