ಬಿಜೆಪಿ ಸೇರುವ ಬಗ್ಗೆ ಪ್ರಮೋದ್ ಮಧ್ವರಾಜ್ ಹೇಳಿದ್ದೇನು?
ಉಡುಪಿ, ಮಾರ್ಚ್ 29 : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. 'ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ. ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇನೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಪ್ರಮೋದ್ ಮಧ್ವರಾಜ್ ಅವರು, 'ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ. ನಾನು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ' ಎಂದರು.
'ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಮೋಸ ಮಾಡಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅತಿದೊಡ್ಡ ಗೆಲುವು ನನ್ನದಾಗುತ್ತೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಯಾರೇ ಪ್ರತಿಸ್ಪರ್ಧಿ ಆದರೂ ನಾನು ಚಿಂತೆ ಮಾಡುವುದಿಲ್ಲ' ಎಂದು ಹೇಳಿದರು.

'ನಾನು ದೆಹಲಿಗೆ ತೆರಳಿದ್ದು ಆಸ್ಕರ್ ಫೆರ್ನಾಂಡಿಸ್ ಅವರನ್ನು ಭೇಟಿಮಾಡಲು. ನಾನು ದೆಹಲಿಯಲ್ಲಿ ಬಿಜೆಪಿ ವರಿಷ್ಟರನ್ನು ಭೇಟಿ ಮಾಡಿದೆ ಎನ್ನುವ ಸುದ್ದಿ ಕೇವಲ ಸುಳ್ಳು' ಎಂದು ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸಿದರು.
'ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ . ಅದೇ ರೀತಿ ಲೋಕಸಭಾ ಚುನಾವಣೆಯ ಬಳಿಕ ಕೇಂದ್ರದಲ್ಲಿ ರಾಹುಲ್ ಸರ್ಕಾರ ಬರುವುದು ಖಚಿತ' ಎಂದು ಅವರು ಭವಿಷ್ಯ ನುಡಿದರು.
'ಆರ್ಟಿಐ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವುದು ಖಚಿತ. ಅವರು ನನಗೆ ಗಡುವು ಕೊಡಲು ಅಬ್ರಾಹಂ ಯಾರು?. ದೆಹಲಿಯ ಹಣಕಾಸು ಇಲಾಖೆಯಿಂದ ಕಡತ ಬಂದ ತಕ್ಷಣ ಕೇಸ್ ದಾಖಲಿಸುತ್ತೇನೆ' ಎಂದು ಹೇಳಿದರು.












Click it and Unblock the Notifications