ಕುಂದಾಪುರ; ಹಿಜಾಬ್ ಪ್ರತಿಭಟನೆಗೆ ಹೈದಾರಾಬಾದ್ನಿಂದ ಬಂದ ಯುವಕರು
ಉಡುಪಿ, ಫೆಬ್ರವರಿ 07; ಉಡುಪಿಯ ಹಿಜಾಬ್ ವಿವಾದ ಇಡೀ ದೇಶದಲ್ಲಿ ದೊಡ್ಡ ಬೆಳವಣಿಗೆಗೆ ನಾಂದಿಯಾಗಿದೆ. ಸಮವಸ್ತ್ರದ ಜೊತೆಗೆ ಹಿಜಾಬ್ ಬೇಕು, ಬೇಡ ಎನ್ನುವ ಚರ್ಚೆ ಜೋರಾಗಿದೆ. ಉಡುಪಿಯ ಬಳಿಕ ರಾಷ್ಟ್ರದ ಗಮನ ಸೆಳೆದ ಕುಂದಾಪುರ ಕಾಲೇಜಿನ ಹಿಜಾಬ್ ಧಾರಿ ವಿದ್ಯಾರ್ಥಿನಿಯರ ಸಹಾಯಕ್ಕೆ ಈಗ ಹೈದಾರಾಬಾದ್ನ ಸಂಘಟನೆಯೊಂದು ಮುಂದೆ ಬಂದಿದೆ.
ಹೈದರಾಬಾದ್ನ ಯೂತ್ ಕರೇಜ್ನ ಸಂಘಟಕರು ಕುಂದಾಪುರಕ್ಕೆ ಬಂದಿದ್ದು, ವಿದ್ಯಾರ್ಥಿನಿಯರ ಹೋರಾಟಕ್ಕೆ ಸಹಾಯ ಮಾಡುವುದಾಗಿ ಮುಂದೆ ಬಂದಿದ್ದಾರೆ. ವಿದ್ಯಾರ್ಥಿನಿಯರನ್ನು ಭೇಟಿ ಮಾಡಿ ಮುಂದಿನ ಹೋರಾಟಕ್ಕೆ ಸಹಾಯ ಮಾಡುತ್ತೇವೆ ಎಂದು ಧೈರ್ಯ ತುಂಬಿದ್ದಾರೆ.
ಈ ವೇಳೆ ಮಾತನಾಡಿದ ಹೈದರಾಬಾದ್ನ ಯೂತ್ ಕರೇಜ್ ಸಂಘಟನೆಯ ಮುಖಂಡ ಸಲ್ಮಾನ್ ಖಾನ್, "ಭಾರತದಲ್ಲಿ ನಡೆಯುತ್ತಿರೋ ಬೆಳವಣಿಗೆ ಸಹಿಸಲು ಆಗುತ್ತಿಲ್ಲ. 2014ರ ಮೊದಲು ಅಭಿವೃದ್ಧಿ ರಾಜಕೀಯ ನಡೆಯುತ್ತಿತ್ತು. ಬಳಿಕ ಏಕಾಏಕಿ ರಾಜಕೀಯ ಕೊಳಕಾಗಿದೆ. ಅಲ್ಪಸಂಖ್ಯಾತರ ಮೇಲೆ ವಿಷ ಉಗುಳಲಾಗುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಹಿಜಾಬ್ ಧರಿಸುವ ಹೆಸರಲ್ಲಿ ವಿದ್ಯಾರ್ಥಿಗಳ ನಡುವೆ ವಿಭಜನೆ ಮಾಡಲಾಗುತ್ತಿದೆ. ಹಿಜಾಬ್ ಅನ್ನೋದು ಗೌರವವಾಗಿದೆ. ಅದನ್ನೇ ಯುವತಿಯರಿಂದ ದೂರ ಮಾಡಿದರೆ ಅವರು ಸಹಿಸಲ್ಲ. ನಮ್ಮ ತಂಗಿಯರು ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ಸರ್ಕಾರ ವಿದ್ಯಾರ್ಥಿನಿಯ ಒತ್ತಾಯಕ್ಕೆ ತಲೆಬಾಗುತ್ತದೆ. ತಲೆಬಾಗಲೇಬೇಕು. ಭಾರತದಲ್ಲಿ ಸಮವಸ್ತ್ರ, ಶಿಸ್ತು ಈಗ ಯಾಕೆ ನೆನಪಿಗೆ ಬಂತು. ಸರ್ಕಾರಿ ಶಾಲೆ ಗಾಂಧೀಜಿ ಸಮಯದಿಂದ ನಡೆದುಕೊಂಡು ಬರುತ್ತಿದೆ. ಈಗ ಈ ಹಿಜಾಬ್ ಯಾಕೆ ನೆನಪಿಗೆ ಬಂತು. ಕೊರೋನಾದಿಂದ ರಕ್ಷಣೆ ಮಾಡಲು ಮಾಸ್ಕ್ ಹಾಕಿಕೊಳ್ಳುತ್ತೇವೆ. ಹಾಗೆ ಹಿಜಾಬ್ ಕೂಡ ನಮ್ಮ ಸಂಪೂರ್ಣ ರಕ್ಷಣೆಗೆ" ಎಂದು ಸಲ್ಮಾನ್ ಖಾನ್ ಹೇಳಿದರು.
"ಹಿಜಾಬ್ ಧಾರ್ಮಿಕತೆ ನಿಲ್ಲಿಸಲು ಆಗಲ್ಲ. ಅದನ್ನು ತಡೆದರೆ ನಮ್ಮ ಭಾವನೆಗೆ ಧಕ್ಕೆ ಆಗುತ್ತದೆ. ಪಂಜಾಬ್ನಲ್ಲಿ ಸರ್ದಾರ್ ಪಗಡಿ ಹಾಕಿದರೆ, ಹಿಂದೂ ತಿಲಕ ಇಟ್ಟರೆ, ಕ್ರೈಸ್ತ ಶಿಲುಬೆ ಹಾಕಿದರೆ ಮುಸಲ್ಮಾನರಿಗೆ ಸಮಸ್ಯೆ ಇಲ್ಲ. ಆದರೆ ಮುಸ್ಲಿಂ ಹಿಜಾಬ್ ಹಾಕಿದರೆ ಸಮಸ್ಯೆ ಯಾಕೆ?. ನಮ್ಮ ನಿಯತ್ತಿನಲ್ಲಿ ಎಲ್ಲಾ ಇದೆ. ಇಸ್ಲಾಂ ನಿಯಮ ಪಾಲನೆ ಮಾಡಿದರೆ ಸಫಲತೆ ಸಿಗುತ್ತದೆ. ಪಾಲಿಸದಿದ್ದರೆ ಮರಣದ ಬಳಿಕ ನೀವೇ ಉತ್ತರಿಸಬೇಕು. ಜೀವನ ಪರ್ಯಂತ ಇಸ್ಲಾಂ ಧರ್ಮ ಪಾಲನೆ ಮಾಡಿದರೆ ಮರಣದ ಬಳಿಕ ಸಫಲರಾಗಬಹುದು" ಎಂದರು.
ಇನ್ನು ಕುಂದಾಪುರದ ವಿದ್ಯಾರ್ಥಿನಿಯರ ಹೋರಾಟದ ಕುರಿತು ಮಾತನಾಡಿದ ಸಲ್ಮಾನ್ ಖಾನ್, "ಕುಂದಾಪುರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ್ದೇನೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಕಾನೂನಾತ್ಮಕ ಬೆಂಬಲ ಕೂಡಾ ಇದೆ. ಹೈದರಾಬಾದ್ನಿಂದ ಇಲ್ಲಿಗೆ ಬಂದಿದ್ದೇನೆ. ಭಾರತದ ಮೂಲೆ ಮೂಲೆಗೂ ತಲುಪುತ್ತೇವೆ. ಸಂವಿಧಾನದ ಮೇಲೆ ನಂಬಿಕೆ ಇದೆ. ಹೈಕೋರ್ಟ್ನಲ್ಲಿ ನ್ಯಾಯ ಸಿಗದಿದ್ದರೆ ಸುಪ್ರೀಂ ಕೋರ್ಟ್ಗೂ ಹೋಗುತ್ತೇವೆ" ಎಂದು ತಿಳಿಸಿದರು.
ಕುಂದಾಪುರದ 22 ವಿದ್ಯಾರ್ಥಿನಿಯರು ಹಿಜಾಬ್ಗಾಗಿ ಪ್ರತಿಭಟನೆ ಮಾಡುತ್ತಿದ್ದು, ಮಂಗಳವಾರವೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. ನ್ಯಾಯಾಲಯದ ತೀರ್ಪು ವಿರೋಧವಾಗಿ ಬಂದರೂ ಹಿಜಾಬ್ ಬಿಡುವುದಿಲ್ಲ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.












Click it and Unblock the Notifications