ಉಡುಪಿಯಲ್ಲಿ ಮಳೆಯ ರುದ್ರನರ್ತನ, ಅಪಾಯಕ್ಕೆ ಸಿಲುಕಿದ್ದ ಜನರ ರಕ್ಷಣೆ
ಉಡುಪಿ, ಜುಲೈ 07 : ಉಡುಪಿ ಜಿಲ್ಲೆಯಾದ್ಯಂತ ಮಳೆಯ ರುದ್ರನರ್ತನ ಹೆಚ್ಚಾಗಿದ್ದು, ಕೊಳ ಮತ್ತು ಕೊಡಂಕೂರುನಲ್ಲಿ 70ಕ್ಕೂ ಹೆಚ್ಚು ಜನರನ್ನು ಶನಿವಾರ ಬೋಟ್ ಮೂಲಕ ಸ್ಥಳಾಂತರಿಸಿ, ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಗಿದೆ.
ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಶುಕ್ರವಾರ ರಾತ್ರಿಯಿಂದಲೂ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕೆಲ ಶಾಲಾ-ಕಾಲೇಜುಗಳಿಗೆ ರಜಾ ನೀಡಲಾಗಿದೆ. ಸ್ಥಳೀಯ ಪರಿಸ್ಥಿತಿ ನೋಡಿಕೊಂಡು ರಜಾ ಘೋಷಣೆ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳು ಆಯಾಯ ಬಿಇಓಗಳಿಗೆ ನೀಡಿದ್ದಾರೆ.
ಕರ್ನಾಟಕ ಕರಾವಳಿಯುದ್ದಕ್ಕೂ ಮಳೆಯ ಆರ್ಭಟ, ಕೆಲವೆಡೆ ಪ್ರವಾಹ
ತಗ್ಗುಪ್ರದೇಶಗಳಲ್ಲಿ ನೆರೆ ನೀರು ಆವರಿಸಿಕೊಂಡಿದೆ. ಶಿರ್ವ, ಮಜೂರು ಭಾಗದಲ್ಲಿ ತಗ್ಗುಪ್ರದೇಶದ ಮನೆಗಳಿಗೆ ನೆರೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಉದ್ಯಾವರದಲ್ಲಿ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಘಟನೆ ಸಂದರ್ಭ ಮನೆಯಲ್ಲಿ ಯಾರು ಇಲ್ಲದೇ ಇದ್ದುದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ. ಇನ್ನು ಒಂದು ದಿನಗಳ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಮಳೆಯ ಆರ್ಭಟ ಮುಂದುವರಿದಿರುವಂತೆಯೇ ನೆರೆಯ ಪ್ರಮಾಣವೂ ಹೆಚ್ಚುತ್ತಿದೆ. ಕೊಳ ಮತ್ತು ಕೊಡಂಕೂರು ಪರಿಸರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅಪಾಯದಲ್ಲಿದ್ದ ಜನರನ್ನು ದೋಣಿಗಳ ಮೂಲಕ ಸ್ಥಳಾಂತರಿಸಲಾಗಿದೆ. ಶಾಸಕ ರಘುಪತಿ ಭಟ್ ಸ್ಥಳದಲ್ಲಿ ಹಾಜರಿದ್ದು ಮುತುವರ್ಜಿ ವಹಿಸಿ ರಕ್ಷಣಾ ಕಾರ್ಯ ಪರಿಶೀಲಿಸುತ್ತಿದ್ದಾರೆ.
ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿಯಲ್ಲೂ ನೆರೆ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಮುಂದಿನ 48 ಗಂಟೆಗಳ ಕಾಲ ಉಡುಪಿ ಸೇರಿದಂತೆ ಕರ್ನಾಟಕದ ಕರಾವಳಿಯುದ್ದಕ್ಕೂ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮೀನುಗಾರರು ಯಾವುದೇ ಕಾರಣಕ್ಕೂ ಮೀನುಗಾರಿಕೆಯ ಸಾಹಸಕ್ಕೆ ಕೈಹಾಕದಂತೆಯೂ ಎಚ್ಚರಿಕೆ ನೀಡಲಾಗಿದೆ.