'ಆರೋಗ್ಯ ಶನಿವಾರ' ಉಡುಪಿ ಶಾಲೆಗಳಲ್ಲಿ ವಿನೂತನ ಕಾರ್ಯಕ್ರಮ
ಉಡುಪಿ, ಜುಲೈ 23; ಶಾಲಾ ಮಕ್ಕಳಿಗೆ ಆರೋಗ್ಯ ಸುರಕ್ಷತೆ ಬಗ್ಗೆ ತಿಳಿಸುವ ವಿನೂತನ, ಬಹುಶ: ರಾಜ್ಯದಲ್ಲೇ ಪ್ರಥಮವಾದ 'ಆರೋಗ್ಯ ಶನಿವಾರ' ಎಂಬ ಕಾರ್ಯಕ್ರಮ ಉಡುಪಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆರಂಭಿಸಲಾಗಿದೆ. ಇದರಿಂದ ಉತ್ತಮ ಫಲಿತಾಂಶ ಸಹ ಕಂಡು ಬರುತ್ತಿದೆ.
ಮಲೇರಿಯಾ, ಡೆಂಗ್ಯೂ, ಜ್ವರ, ನೆಗಡಿ ಕಾಯಿಲೆಗಳು ಯಾವಾಗ ಬರುತ್ತವೆ?. ಈ ರೋಗಗಳು ಏಕೆ ಬರುತ್ತವೆ?, ಯಾವುದರಿಂದ ಬರುತ್ತದೆ?, ಅವುಗಳ ಲಕ್ಷಣಗಳೇನು?, ಈ ರೋಗಗಳು ಬಾರದಂತೆ ಏನು ಮಾಡಬೇಕು?, ಆರೋಗ್ಯವನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು? ಎಂದು ಈ ಕಾರ್ಯಕ್ರಮದಡಿ ಮಕ್ಕಳಿಗೆ ಮಾಹಿತಿ ನೀಡಲಾಗುತ್ತಿದೆ.

ಜೂನ್ ತಿಂಗಳಿನಿಂದ 'ಆರೋಗ್ಯ ಶನಿವಾರ' ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ 1098 ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ಖಾಸಗಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಾಡಲಾಗುತ್ತಿದೆ. ಸುಮಾರು 1.61 ಲಕ್ಷ ಮಕ್ಕಳಿಗೆ ಪ್ರತಿ ಶನಿವಾರ ಬೇಸಿಗೆ, ಮಳೆಗಾಲ, ಚಳಿಗಾಲದಲ್ಲಿ ಕಂಡು ಬರುವ ಕಾಯಿಲೆಗಳ ಬಗ್ಗೆ ಮತ್ತು ಅವುಗಳು ಬಾರದಂತೆ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಆರೋಗ್ಯ ಕಾಳಜಿ ಮೂಡಿಸುವುದು; ಈ ಕಾರ್ಯಕ್ರಮದ ಮೂಲಕ ಶನಿವಾರ ಬೆಳಗ್ಗೆ ಎಲ್ಲಾ ಶಾಲಾ ಕೊಠಡಿಯಲ್ಲಿ ಆರೋಗ್ಯ ಅರಿವು ವಿಷಯಗಳ ಬಗ್ಗೆ ತರಬೇತಿ ಪಡೆದಿರುವ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಕಾಯಿಲೆಗಳ ಬಗ್ಗೆ ಸಂಪೂರ್ಣ ಅರಿವು ಮೂಡಿಸುತ್ತಿದ್ದಾರೆ. ಶಾಲೆಗೆ ಸಮೀಪವಿರುವ ಆರೋಗ್ಯ ಕೇಂದ್ರದ ಸಿಬ್ಬಂದಿ ಮೂಲಕ ಸಹ ಮಾಹಿತಿ ನೀಡಿ, ಮಕ್ಕಳ ಆರೋಗ್ಯದ ಸುರಕ್ಷತೆಗೆ ಹಾಗೂ ಮಕ್ಕಳ ಮೂಲಕ ಅವರ ಪೋಷಕರಿಗೂ ಕೂಡಾ ಆರೋಗ್ಯ ಕಾಳಜಿಯ ಬಗ್ಗೆ ಅರಿವು ಮೂಡಿಸಿ, ಆರೋಗ್ಯಯುತ ಸಮುದಾಯ ನಿರ್ಮಾಣಗೊಳ್ಳಲು ಸಹಕರಿಸುತ್ತಿದ್ದಾರೆ.
ಮಲೇರಿಯ, ಡೆಂಗ್ಯೂ ಸೇರಿದಂತೆ ಹಲವು ಕಾಯಿಲೆಗಳು ಸೊಳ್ಳೆಗಳ ಮೂಲಕ ಹಾಗೂ ಅನೈರ್ಮಲ್ಯದ ಮೂಲಕ ಹರಡಲಿದ್ದು, ಇದನ್ನು ತಡೆಯಲು ಶಾಲೆ ಮತ್ತು ಮನೆಯ ಪರಿಸರದಲ್ಲಿ ಕೊಳಚೆ ನೀರು ನಿಲ್ಲದಂತೆ ಹಾಗೂ ಸ್ವಚ್ಛತೆಯನ್ನು ಕಾಪಾಡುವುದರಿಂದ ಕಾಯಿಲೆಗಳು ಹರಡದಂತೆ ನಿಯಂತ್ರಿಸಬಹುದು ಎಂಬ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಅಲ್ಲದೇ ದೈನಂದಿನ ಚಟುವಟಿಕೆಯಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು, ಪ್ರಥಮ ಚಿಕಿತ್ಸೆ ವಿಧಾನಗಳು ಸೇರಿದಂತೆ ಹಲವು ಆರೋಗ್ಯ ಸಂಬoಧಿತ ವಿಷಯಗಳ ಬಗ್ಗೆ ಮಕ್ಕಳಿಗೆ ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ತಿಳಿಸುವ ಮೂಲಕ ಈ ಸಂದೇಶಗಳು ಅವರ ಮನೆಗಳಿಗೂ ತಲುಪುವಂತೆ ಮಾಡಲಾಗುತ್ತಿದೆ.
ಉಡುಪಿಯ ಡಿಡಿಪಿಐ ಕೆ. ಗಣಪತಿ ಮಾತನಾಡಿ, "ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿ ಶಾಲೆಗೆ ಗೈರು ಹಾಜರಾಗುವುದರಿಂದ ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ದೈಹಿಕ ಬೆಳವಣಿಗೆಗೆ ತೊಂದರೆಯಾಗುತ್ತದೆ. ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಲು ಮತ್ತು ಅವರನ್ನು ಆಸ್ಪತ್ರೆಯಿಂದ ದೂರ ಉಳಿಸುವ ಉದ್ದೇಶದಿಂದ ಪ್ರತಿ ಶನಿವಾರ ಆರೋಗ್ಯ ಸಂಬಂಧಿತ ಅರಿವು ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಆಯೋಜಿಸಲಾಗುತ್ತಿದೆ. ಇದರಿಂದಾಗಿ ಮಕ್ಕಳಿಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತದೆ. ಮಕ್ಕಳು ತಮಗೆ ದೊರೆತ ಈ ಮಾಹಿತಿಯನ್ನು ಮನೆಯಲ್ಲಿ ಹಂಚಿಕೊಳ್ಳುವುದರಿಂದ ಇಡೀ ಸಮುದಾಯಕ್ಕೆ ಆರೋಗ್ಯ ಮಾಹಿತಿ ತಲುಪುತ್ತಿದೆ. ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನದಂತೆ ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ" ಎಂದು ಹೇಳಿದರು.
ಈಗ ಮಳೆಗಾಲದ ಸಮಯ ಆಗಿರುವುದರಿಂದ ಹವಾಮಾನ ಇಲಾಖೆಯ ಮಾಹಿತಿ ಆಧರಿಸಿ, ಮಕ್ಕಳು ವಾಸಿಸುವ ಪ್ರದೇಶದಲ್ಲಿ ಬೀಳಬಹುದಾದ ಮಳೆಯ ಪ್ರಮಾಣ, ಅಪಾಯಕಾರಿಯಾಗಿ ತುಂಬಿ ಹರಿಯುತ್ತಿರುವ ಹಳ್ಳ ಮತ್ತು ತೋಡುಗಳನ್ನು ದಾಟದಂತೆ ಹಾಗೂ ಅನಿವಾರ್ಯವಾಗಿ ದಾಟಬೇಕಾದ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಪರ್ಯಾಯ ರಸ್ತೆ ಬಳಸುವ ಬಗ್ಗೆ, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಸಹ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ.
ಜಿಲ್ಲೆಯ ಬಹುತೇಕ ಪ್ರೌಢಶಾಲೆಗಳಲ್ಲಿ ಎಲ್ಇಡಿ ವ್ಯವಸ್ಥೆ ಇದ್ದು , ಉಡುಪಿ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದಲ್ಲಿರುವ ಸ್ಟುಡಿಯೋ ಮೂಲಕ ವೈದ್ಯರಿಂದ ಹಾಗೂ ವಿಷಯ ತಜ್ಞರಿಂದ ವಿದ್ಯಾರ್ಥಿಗಳಿಗೆ ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮಗಳ ನೇರ ಪ್ರದರ್ಶನಕ್ಕೆ ಕೂಡಾ ವ್ಯವಸ್ಥೆ ಮಾಡಲಾಗಿದೆ.
ಈ ಕಾರ್ಯಕ್ರಮದ ಲೈವ್ ಲಿಂಕ್ ಅನ್ನು ಎಲ್ಲಾ ಶಾಲೆಗಳ ಮುಖ್ಯೋಪಧ್ಯಾಯರಿಗೆ ಕಳುಹಿಸಿ, ಲ್ಯಾಪ್ ಟಾಪ್ ಮೂಲಕ ಶಾಲೆಯಲ್ಲಿ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಸಂಬಂದಿತ ಯೂಟ್ಯೂಬ್ ವೀಡಿಯೋಗಳ ಮೂಲಕ ಸಹ ಅರಿವು ಮೂಡಿಸಿ, ಯಾವುದೇ ಹಂತದಲ್ಲೂ ಮಕ್ಕಳು ಈ ಕಾರ್ಯಕ್ರಮದಿಂದ ವಂಚಿತರಾಗದoತೆ ನೋಡಿಕೊಳ್ಳಲಾಗುತ್ತಿದೆ.












Click it and Unblock the Notifications