ಉಡುಪಿಯ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ವಿಶಿಷ್ಟ ರೀತಿಯಲ್ಲಿ ಗುಡ್ ಫ್ರೈಡೇ ಆಚರಣೆ
ಉಡುಪಿ, ಏಪ್ರಿಲ್ 19:ಯೇಸು ಕ್ರಿಸ್ತರು ಶಿಲುಬೆಗೇರಿ ಸಾವನಪ್ಪಿದ ದಿನವಾದ ಗುಡ್ ಫ್ರೈ ಡೇಯನ್ನು ಉಡುಪಿಯೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ಉಡುಪಿ ಸಮೀಪದ ಕೊಳಲಗಿರಿಯ ಸೇಕ್ರೆಡ್ ಹಾರ್ಟ್ ಚರ್ಚಿನಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದು ಎಲ್ಲರ ಗಮನ ಸೆಳೆಯಿತು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಚರ್ಚಿನ ಧರ್ಮಗುರು ಅನಿಲ್ ಪ್ರಕಾಶ್ ಡಿಸಿಲ್ವಾ ನೇತೃತ್ವದಲ್ಲಿ ಐಸಿವೈಎಮ್ ಸಂಘಟನೆಯ ಸಹಭಾಗಿತ್ವದೊಂದಿಗೆ ಒಟ್ಟು 50 ಮಂದಿ ಕಲಾವಿದರು ಏಸುಕ್ರಿಸ್ತರ ಮರಣದಂಡನೆಯ ಸನ್ನಿವೇಶವನ್ನು ಮನೋಜ್ಞ ನಟನೆ ಮೂಲಕ ಪ್ರಚುರಪಡಿಸಿದರು.
ಯೇಸು ಕ್ರಿಸ್ತರು ಮರಣದಂಡನೆಗೆ ಗುರಿಯಾಗುವಲ್ಲಿಂದ ಆರಂಭಿಸಿ ಶಿಲುಬೆ ಹೊತ್ತು ಕಲ್ವಾರಿ ಬೆಟ್ಟಕ್ಕೆ ಸಾಗಿ ಅಲ್ಲಿ ಶಿಲುಬೆಗೆ ಏರಿ ಮರಣವನ್ನಪ್ಪುವ ಘಟನೆಗಳನ್ನು ಅವಲೋಕಿಸಿ ಪ್ರಾರ್ಥಿಸುತ್ತಾ ಸಾಗುವ ಶಿಲುಬೆಯ ಹಾದಿಯ ಪ್ರಕ್ರಿಯೆಯನ್ನು ನಟನೆಯ ಮೂಲಕ ಮೈದಾನದಲ್ಲಿ ನಡೆಸಿಕೊಟ್ಟರು.

ಈ ಮೂಲಕ ಕ್ರೈಸ್ತ ಭಕ್ತಾದಿಗಳಿಗೆ ಯೇಸು ಶಿಲುಬೆಯ ಹಾದಿಯಲ್ಲಿ ಅನುಭವಿಸಿದ ಕಷ್ಟ ನೋವು, ಯಾತನೆ ಮರಣವನ್ನು ತೋರಿಸಿಕೊಡುವ ವಿಶಿಷ್ಟ ಪ್ರಯತ್ನ ಮಾಡಲಾಯಿತು. ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಬಲಿ ಪೂಜೆಯ ಬದಲು ಯೇಸುವಿನ ಶಿಲುಬೆಯ ಹಾದಿಯನ್ನು ಸಂಪೂರ್ಣವಾಗಿ ಪರಿಚಯಿಸುವ ಹೊಸ ಒಡಂಬಡಿಕೆಯ ಪವಿತ್ರ ಬೈಬಲಿನ ಪಠಣಗಳು ಕೂಡ ನಡೆದವು.
ಶಿಲುಬೆಯ ಹಾದಿಯಲ್ಲಿ ಯೇಸುವಿಗೆ ಮರಣ ದಂಡನೆಯನ್ನು ಹೇರಿದ ಬಳಿಕ ಯೇಸುಕ್ರಿಸ್ತರು ಭಾರವಾದ ಶಿಲುಬೆಯನ್ನು ಹೊತ್ತು ಮೂರು ಬಾರಿ ಬೀಳುವುದು, ಶಿಲುಬೆಯನ್ನು ಹೊತ್ತು ಸಾಗಲು ಕಷ್ಟವಾದಾಗ ಯೇಸುವಿನ ಸಹಾಯಕ್ಕೆ ಬಂದ ಸಿರೇನ್ ನಗರದ ಸಿಮಾಂವ್ ದೃಶ್ಯ, ಯೇಸು ಶಿಲುಬೆ ಹೊತ್ತು ಸಾಗುತ್ತಿದ್ದಾಗ ಅವರ ಆಯಾಸಭರಿತ ಮುಖವನ್ನು ಕರವಸ್ತ್ರದಲ್ಲಿ ಒರೆಸಲು ಬಂದ ವೆರೊನಿಕಾ, ಯೇಸುವನ್ನು ಶಿಲುಬೆಗೇರಿಸಿ ಮೊಳೆಯನ್ನು ಜಡಿಯುವ ದೃಶ್ಯಗಳು ನೈಜ ನಟನೆಯ ಮೂಲಕ ತೋರಿಸುವಾಗ ನೆರೆದಿದ್ದ ಭಕ್ತರ ಕಣ್ಣಾಲಿಗಳನ್ನು ಒದ್ದೆಯಾಗಿಸಿದವು.
ಸುಮಾರು 350ಕ್ಕೂ ಅಧಿಕ ಭಕ್ತಾದಿಗಳು ಉರಿಬಿಸಿಲಿನಲ್ಲಿ ದಣಿವಿನ ಅರಿವಿಲ್ಲದೆ ಭಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.












Click it and Unblock the Notifications