ಮಂಚಿಕೆರೆಯಲ್ಲಿ ಭೂಮಿ ಬಿರುಕು ಬಿಟ್ಟಿರುವುದು ಏಕೆ?
ಮಂಗಳೂರು, ಜೂನ್ 20: ಮಣಿಪಾಲದ ಮಂಚಿಕೆರೆಯಲ್ಲಿ ಭೂಮಿ ಬಾಯ್ತೆರೆದ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು, ವಿಜ್ಞಾನಿಗಳ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದೆ.
ಮಂಚಿಕೆರೆ ಪ್ರದೇಶವು ಕೆಂಪುಕಲ್ಲಿನ ಶಿಲಾ ಪದರದಿಂದ ಆವೃತವಾಗಿದ್ದು, ಭೂತಳದಲ್ಲಿ ಉಷ್ಣಾಂಶ ಹೆಚ್ಚಿ ನಿರ್ವಾತ ಪ್ರದೇಶ ಉಂಟಾಗಿರುವ ಸಾಧ್ಯತೆ ಇದೆ. ಮಳೆ ಬಂದಾಗ ಈ ನಿರ್ವಾತ ಪ್ರದೇಶದಲ್ಲಿರುವ ಜೌಗುಮಣ್ಣು ಕೊಚ್ಚಿಹೋಗಿ ಕಲ್ಲಿನ ಶಿಲಾ ಪದರ ಕುಸಿದಿರುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಈ ಬಿರುಕುಗಳಿಂದ ತಕ್ಷಣಕ್ಕೆ ಅಪಾಯವಿಲ್ಲವಾದರೂ, ಡೇಂಜರ್ ಝೋನ್ ನಲ್ಲಿ ಬರುವ ಮನೆಗಳು ಸ್ಥಳಾಂತರಗೊಂಡರೆ ಉತ್ತಮ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಭೂಮಿ ಬಿರುಕು ಬಿಟ್ಟ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಅಧಿಕಾರಿ ಹಾಗೂ ವಿಜ್ಞಾನಿಗಳ ತಂಡ ನಾಳೆ ಉಡುಪಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಿದೆ. ಅಲ್ಲದೇ ಈ ಪ್ರದೇಶದಲ್ಲಾಗುವ ಭೌಗೋಳಿಕ ಬದಲಾವಣೆಗಳ ಮೇಲೆ ನಿರಂತರ ಗಮನ ಹರಿಸಲಾಗುವುದೆಂದು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಈವರೆಗೆ ಭೂಕಂಪವಾಗಿಲ್ಲ. ಆದರೂ ನೂರಾರು ಮೀಟರ್ ಉದ್ದಕ್ಕೂ ಭೂಮಿ ಬಿರುಕುಬಿಟ್ಟಿದೆ. 20 ಅಡಿಗೂ ಹೆಚ್ಚು ಆಳದ ಬಿರುಕು ಕುತೂಹಲದ ಜೊತೆಗೆ ಆತಂಕಕ್ಕೂ ಕಾರಣವಾಗಿದೆ. ಕಳೆದ ಮೂರು ದಿನಗಳಲ್ಲಿ ಈ ಬಿರುಕು ವಿಸ್ತಾರಗೊಂಡಿದ್ದು ಸಮೀಪದ ಒಂದು ಮನೆಗೆ ಹಾನಿಯಾಗಿದೆ. ಬಾವಿಯ ಆವರಣ ಗೋಡೆಯೂ ಸೀಳಾಗಿದೆ. ಈ ಭಾಗದಲ್ಲಿ ಈ ರೀತಿಯ ಬಿರುಕು ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. 2014ರಲ್ಲೂ ಇದೇ ಮಾದರಿಯಲ್ಲಿ ಭೂಮಿ ಬಾಯ್ತೆರೆದಿತ್ತು. ಈ ಬಾರಿ ಹಳೆಯ ಬಿರುಕುಗಳು ಮತ್ತಷ್ಟು ವಿಸ್ತಾರಗೊಂಡಿದೆ, ಜೊತೆಗೆ ಹೊಸ ಬಿರುಕುಗಳು ಉಂಟಾಗಿವೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications