ಪಂಚಭೂತಗಳಲ್ಲಿ ಲೀನವಾದ ಖಡಕ್ ಅಧಿಕಾರಿ ಮಧುಕರ್ ಶೆಟ್ಟಿ
ಉಡುಪಿ, ಡಿಸೆಂಬರ್ 30: ರಾಜ್ಯ ಕಂಡ ಅಪರೂಪದ ಖಡಕ್ ಅಧಿಕಾರಿ, ಭ್ರಷ್ಟರಿಗೆ ಸಿಂಹಸ್ವಪ್ನ ಎನಿಸಿದ್ದ ಐಪಿಎಸ್ ಅಧಿಕಾರಿ ಡಾ . ಮಧುಕರ್ ಶೆಟ್ಟಿ ಇಂದು ಹುಟ್ಟೂರು ಯಡಾಡಿಯಲ್ಲಿ ಪಂಚಭೂತಗಳಲ್ಲಿ ಲೀನವಾದರು. ಇಂದು ಹುಟ್ಟೂರಿನಲ್ಲಿ ಸಾವಿರಾರು ಜನ ಹಿತೈಷಿಗಳು ,ಸಹೋದ್ಯೋಗಿಗಳು ,ಊರವರು,ಅಭಿಮಾನಿ ಗಳು ಅವರಿಗೆ ಅಂತಿಮ ಗೌರವ ಸಲ್ಲಿಸಿದರು.
ಮುಂಜಾನೆಯಿಂದಲೇ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಾಡಿಯತ್ತ ಮಧುಕರ್ ಶೆಟ್ಟಿಯವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂತು.
ಐಪಿಎಸ್ ಅಧಿಕಾರಿ ಡಾ ಮಧುಕರ್ ಶೆಟ್ಟಿ ಇನ್ನು ಬರೀ ನೆನಪು. ಮೊನ್ನೆ ರಾತ್ರಿ (ಡಿಸೆಂಬರ್ 28 )ಹೈದರಾಬಾದ್ ನಲ್ಲಿ ಕೊನೆಯಸಿರೆಳೆದ ಡಾ ಮಧುಕರ್ ಶೆಟ್ಟಿ ಅವರಿಗೆ ಸಕಲ ಸರಕಾರಿ ಗೌರವಗಳೊಂದಿಗೆ ಇಂದು ಹುಟ್ಟೂರಿನಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಾಡಿ ಗ್ರಾಮ ಮಧುಕರ್ ಅವರ ಹುಟ್ಟೂರು. ಈ ಹಳ್ಳಿಯಲ್ಲಿ ಹುಟ್ಟಿ ರಾಜ್ಯದುದ್ದಗಲಕ್ಕೂ ತನ್ನ ಪ್ರಾಮಾಣಿಕ ಸೇವೆಯಿಂದ ಮಧುಕರ್ ಶೆಟ್ಟಿ ಮನೆಮಾತಾದವರು . ನಿನ್ನೆ ತಡರಾತ್ರಿ ಮಧುಕರ್ ಶೆಟ್ಟಿಯವರ ಪಾರ್ಥೀವ ಶರೀರವನ್ನು ಮಂಗಳೂರಿನಿಂದ ಸ್ವಗ್ರಾಮ ಯಡಾಡಿಗೆ ತರಲಾಗಿತ್ತು.
ಆ ಕ್ಷಣದಿಂದ ಶುರುವಾದ ಜನಸಾಗರ ಚಿತೆಗೆ ಅಗ್ನಿಸ್ಪರ್ಶ ಮಾಡುವವರೆಗೂ ಬೆಳೆಯುತ್ತಲೇ ಇತ್ತು. ಸಚಿವ ಯುಟಿ ಖಾದರ್ , ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಸಹಿತ ಕರಾವಳಿಯ ಜನಪ್ರತಿನಿಧಿಗಳು ಅಂತಿಮ ಸಂಸ್ಕಾದವರೆಗೂ ಮಾರ್ಗದರ್ಶನ ನೀಡುತ್ತಿದ್ದರು.

ಸರ್ಕಾರಿ ಗೌರವ
ಐಜಿಪಿ ಸ್ಟೀಫನ್ ರವೀಂದ್ರ ,ಮಧುಸೂಧನ್ ರೆಡ್ಡಿ ,ಐಜಿಪಿ ಜಿ.ಎಸ್ ರಾವ್ ,ಡಿಜಪಿ ಎನ್ ಪಿಎ ಬರ್ಮನ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಸರಕಾರಿ ಗೌರವಕ್ಕೆ ವ್ಯವಸ್ಥೆ ಮಾಡಿದ್ದರು. ಅಂತಿಮ ಗೌರವ ನೀಡಲು ಬಂದ ಪ್ರತಿಯೊಬ್ಬರಿಗೂ ಅವಕಾಶ ನೀಡಿದ ಬಳಿಕ ಸಹೋದರ ಮುರಳಿ ಶೆಟ್ಟಿ ಚಿತೆಗೆ ಅಗ್ನಿ ಸ್ಪರ್ಶ ನೀಡುವುದರೊಂದಿಗೆ ಮಧುಕರ್ ಶೆಟ್ಟಿ ಆತ್ಮ ಪಂಚಭೂತಗಳಲ್ಲಿ ಲೀನವಾಯಿತು.

ಪ್ರೀತಿ, ಅಭಿಮಾನ
ಯಡಾಡಿಯ ಫಾರ್ಮ್ ಹೌಸಿನಲ್ಲಿ ಮಧುಕರ್ ಶೆಟ್ಟಿಯವರ ತಂದೆ , ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿ ಮತ್ತು ತಾಯಿಯ ಸಮಾಧಿಯೂ ಇದೆ. ತಂದೆತಾಯಿಯ ಸಮಾಧಿ ಬಳಿಯಲ್ಲೇ ಮಧುಕರ್ ಶೆಟ್ಟಿಯವರ ಚಿತೆಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಬೆಳಗ್ಗೆ ಅಂತಿಮ ದರ್ಶನಕ್ಕೆ ಬಂದ ಜನಸಾಗರ ಚಿತೆಗೆ ಅಗ್ನಿ ಸ್ಪರ್ಶ ಮಾಡುವವರೆಗೂ ಇದ್ದು ಅವರ ಮೇಲಿನ ಪ್ರೀತಿ ಅಭಿಮಾನವನ್ನು ಪ್ರಕಟಿಸಿತು.

ಮನ ಮಿಡಿಯುವಂತಿತ್ತು
ಸಾವಿರಾರು ಜನ ಮೃತರಿಗೆ ಕಂಬನಿ ಮಿಡಿದ ದೃಶ್ಯ ಮನಕಲುಕುವಂತಿತ್ತು. ಅವರು ಈ ಹಿಂದೆ ಕರ್ತವ್ಯದಲ್ಲಿದ್ದಾಗ ಜೊತೆಯಾಗಿದ್ದ ಸಹೋದ್ಯೋಗಿಗಳ, ಮತ್ತವರ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. ಅದರಲ್ಲೂ ಮುಖ್ಯವಾಗಿ ಚಿಕ್ಕಮಗಳೂರಿನ ಗುಪ್ತಶೆಟ್ಟಿ ಹಳ್ಳಿಯ ಜನ ಅಂತಿಮ ದರ್ಶನಗೈದ ದೃಶ್ಯ ಮನ ಮಿಡಿಯುವಂತಿತ್ತು.

ಗುಪ್ತಶೆಟ್ಟಿ ಹಳ್ಳಿ ಜನರು ಭಾಗಿ
ಗುಪ್ತಶೆಟ್ಟಿ ಹಳ್ಳಿಯ ಜನರಿಗೆ ಮಧುಕರ್ ಶೆಟ್ಟರು ಮಾಡಿದ ಉಪಕಾರವನ್ನು ಆ ಜನ ಮರೆಯುವಂತೆಯೇ ಇಲ್ಲ. ಹೀಗಾಗಿ ಅವರೂ ಕೂಡ ಅಂತಿಮ ದರ್ಶನದಲ್ಲಿ ಪಾಲ್ಗೊಂಡರು. ಇದೆಲ್ಲ ಮುಗಿದ ಬಳಿಕ ಹನ್ನೊಂದೂವರೆ ಸುಮಾರಿಗೆ ಪೊಲೀಸ್ ಇಲಾಖೆ ಮೃತರಿಗೆ ಸರ್ಕಾರಿ ಗೌರವ ನೀಡಿ ಬೀಳ್ಕೊಟ್ಟಿತು.












Click it and Unblock the Notifications