ಅಂಬೇಡ್ಕರ್ಗೆ ಅವಮಾನ ಮಾಡಿದ ಬಿಇಓ; ಅಮಾನತಿಗೆ ಆಗ್ರಹ
ಉಡುಪಿ, ಏಪ್ರಿಲ್ 26; ಬ್ರಹ್ಮಾವರದ ಶಿಕ್ಷಣಾಧಿಕಾರಿ ಓ. ಆರ್. ಪ್ರಕಾಶ್ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯಿದೆ ಅನ್ವಯ ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಈ ಕೂಡಲೇ ಅವರನ್ನು ಅಮಾನತು ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಓ. ಆರ್. ಪ್ರಕಾಶ್ ಸಾಮಾಜಿಕ ಜಾಲತಾಣಗಳಲ್ಲಿ "ಫ್ರೌಡ್ ಟು ಬಿ ಎ ಬ್ರಾಹ್ಮಿಣ್" ಎಂಬ ತಲೆ ಬರಹದಡಿಯಲ್ಲಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ರವರಿಗೆ ಅವಮಾನಿಸುವ ಉದ್ದೇಶದಿಂದ ಮತ್ತು ಬ್ರಾಹ್ಮಣ್ಯವನ್ನು ಅತ್ಯುನ್ನತ ಎಂದು ತೋರ್ಪಡಿಸುವ ಉದ್ದೇಶದಿಂದ, ಸಂವಿಧಾನವನ್ನು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಬರೆದರು, ಸಂವಿಧಾನ ಕರುಡು ಸಮಿತಿಯ ಅಧ್ಯಕ್ಷರು ಕೂಡ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರೇ ಆಗಿದ್ದರು ಎಂದು ಲೇಖನವನ್ನು ಬರೆದಿದ್ದರು.
ಬ್ರಹ್ಮಾವರ ವಲಯದ ಕನ್ನಡ ಶಿಕ್ಷಕರ ಗ್ರೂಪ್ನಲ್ಲಿಯೂ ಅದನ್ನು ಹಾಕಿದ್ದರು. ಈ ಲೇಖನ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿತ್ತು. ಈ ಲೇಖನಕ್ಕೆ ದಲಿತ ಸಂಘಟನೆಗಳು ವಿರೋಧ ವ್ಯಕ್ತ ಪಡಿಸಿದ್ದವು.

ಸುಂದರ ಮಾಸ್ತರ್ ಅವರು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಕೇಸು ದಾಖಲಿಸಿ. ಒಬ್ಬ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಸರಕಾರಿ ನೌಕರ ಉದ್ದೇಶ ಪೂರ್ವಕವಾಗಿ ಬ್ರಾಹ್ಮಣ ಸಮುದಾಯವನ್ನು ಎತ್ತಿ ಹಿಡಿಯುವ ಮತ್ತು ಪರಿಶಿಷ್ಟ ಜಾತಿಯಲ್ಲಿ ಜನಿಸಿದ ಅಂಬೇಡ್ಕರ್ರನ್ನು ತುಚ್ಛೀಕರಿಸುವ ಏಕೈಕ ಉದ್ದೇಶದಿಂದ ಈ ಲೇಖನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು ಖಂಡನೀಯ ಎಂದು ಹೇಳಿದ್ದರು.
ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಓ. ಆರ್. ಪ್ರಕಾಶ್ ಅವರನ್ನು ಅಮಾನತು ಮಾಡಬೇಕು. ಅಮಾನತು ಮಾಡದೇ ಹೋದರೆ ದಲಿತ ಸಂಘರ್ಷ ಸಮಿತಿ ತನ್ನ ಹೋರಾಟವನ್ನು ಆರಂಭಿಸುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.












Click it and Unblock the Notifications