ಉಡುಪಿ; ಟೋಲ್ ವಿನಾಯಿತಿಗೆ ಮನವಿ, ಹೋರಾಟದ ಎಚ್ಚರಿಕೆ
ಉಡುಪಿ, ಫೆಬ್ರವರಿ 11: ಹೆಜಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ನವಯುಗ್ ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಲಾಗಿದೆ. ಟೋಲ್ ಶುಲ್ಕ ಸಂಗ್ರಹ ಆರಂಭಿಸಿದರೆ ಹೋರಾಟ ಮಾಡುವ ಎಚ್ಚರಿಕೆ ನೀಡಲಾಗಿದೆ.
ಇಲ್ಲಿಯ ತನಕ ಟೋಲ್ ಗೇಟ್ನಲ್ಲಿ ಸ್ಥಳೀಯರಿಗೆ ದೊರೆಯುತ್ತಿದ್ದ ವಿನಾಯಿತಿಯು ರದ್ದುಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹೆಜಮಾಡಿ ನಾಗರಿಕರ ಕ್ರಿಯಾ ಸಮಿತಿಯು ಕಾಪು ತಾಲೂಕಿನ ಹೆಜಮಾಡಿ ಟೋಲ್ಗೆ ಮೆರವಣಿಗೆ ಮೂಲಕ ತೆರಳಿ ಸಂಪೂರ್ಣ ವಿನಾಯಿತಿ ಕೊಡಬೇಕು ಎಂದು ಮನವಿ ಮಾಡಿತು.
ಈ ಹಿಂದೆ ಗ್ರಾಮಸ್ಥರಿಗೆ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಸಂಸ್ಥೆ ನವಯುಗ್ ಹಲವು ಆಶ್ವಾಸನೆಗಳನ್ನು ನೀಡಿತ್ತು. ಇವುಗಳನ್ನು ಈಡೇರಿಸಬೇಕು ಎಂದು ಗ್ರಾಮಸ್ಥರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಟೋಲ್ನಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ, ಉದ್ಯೋಗವಕಾಶ, ಸರ್ವಿಸ್ ರಸ್ತೆ, ದಾರಿದೀಪ, ಚರಂಡಿ ವ್ಯವಸ್ಥೆ, ಬಸ್ಸು ತಂಗುದಾಣ ನಿರ್ಮಾಣ ಸಹಿತ ವಿವಿಧ ಬೇಡಿಕೆಗಳನ್ನು ಪ್ರಾರಂಭದಲ್ಲಿಯೇ ಸ್ಥಳೀಯರು ಮುಂದಿಟ್ಟಿದ್ದರು.
15 ದಿನದೊಳಗೆ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆಯನ್ನು ನೀಡಿದ್ದಾರೆ.
ನವಯುಗ್ ಟೋಲ್ ಮ್ಯಾನೇಜರ್ ಶಿವಪ್ರಸಾದ್ ಶೆಟ್ಟಿ ಮಾತನಾಡಿ, "ಸರ್ಕಾರದನ ನೂತನ ನಿಯಮದ ಪ್ರಕಾರ ಫೆಬ್ರವರಿ 15ರಿಂದ ದೇಶಾದ್ಯಂತ ಫಾಸ್ಟ್ ಟ್ಯಾಗ್ ಕಡ್ಡಾಯವಾಗಲಿದೆ. ಈ ಸಂದರ್ಭ ಯಾವುದೇ ವಾಹನಗಳಿಗೆ ರಿಯಾಯಿತಿ ಅಸಾಧ್ಯ. ಆದರೆ ಹೆಜಮಾಡಿ ಟೋಲ್ನಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡುವ ಕುರಿತು ಕಂಪನಿ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಲಾಗುತ್ತದೆ" ಎಂದರು.
ಕ್ರಿಯಾ ಸಮಿತಿಯ ಕಾರ್ಯದರ್ಶಿ ಸನಾ ಇಬ್ರಾಹಿಮ್, ಸದಸ್ಯರಾದ ಶೇಖಬ್ಬ ಕೋಟೆ, ರೋಲ್ಫಿ ಡಿಕೋಸ್ತಾ, ಪ್ರಣೇಶ್ ಹೆಜ್ಮಾಡಿ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications