ಕುಂಟುತ್ತಲೇ 6 ಕಿಮೀ ಓಡಿ ರೈಲು ಅಪಘಾತ ತಪ್ಪಿಸಿದ ಉಡುಪಿಯ ಕೃಷ್ಣ ಪೂಜಾರಿ
Recommended Video

ಉಡುಪಿ, ಅಕ್ಟೋಬರ್ 30 : ಆತ 53 ವರ್ಷ ವಯಸ್ಸಿನ ದಿನಗೂಲಿ ನೌಕರ, ಕಾಲು ಊನ. ನರ ದೌರ್ಬಲ್ಯದಿಂದ ಆತ ಬಳಲುತ್ತಿದ್ದರಿಂದ ಬೆಳಗಿನ ಜಾವ ಬರಿಗಾಲಲ್ಲಿಯೇ ನಡೆಯಬೇಕೆಂದು ವೈದ್ಯರು ಶಿಫಾರಸು ಮಾಡಿದ್ದರು. ಆದರೆ, ಅವರು ಅಂದು ಬೆಳಿಗ್ಗೆ ಕಂಡಿದ್ದಾದರೂ ಏನು?
ರೈಲಿನ ಹಳಿಯಲ್ಲಿ ಬಿರುಕುಬಿಟ್ಟಿದೆ. ಅದನ್ನು ನೋಡುತ್ತಿದ್ದಂತೆ ಅವರ ಜಂಘಾಬಲವೇ ಉಡುಗಿ ಹೋಗಿದೆ. ಜನರಿಂದ ತುಂಬಿದ ರೈಲು ಬಂದರೇನು ಗತಿ? 53 ವರ್ಷದ ದಿನಗೂಲಿ ನೌಕರ ಕೃಷ್ಣ ಪೂಜಾರಿ ಧೃತಿಗೆಡಲಿಲ್ಲ, ಕರ್ತವ್ಯಪ್ರಜ್ಞೆಯನ್ನು ಮರೆಯಲಿಲ್ಲ.
ಕಾಲಿನ ನೋವನ್ನೂ ಮರೆತು, ತಾವು ಬರಿಗಾಲಿನಲ್ಲಿ ಇರುವುದನ್ನು ಕಡೆಗಣಿಸಿ, ಕ್ಷಣವೂ ತಡಮಾಡದೆ ಓಡಲು ಆರಂಭಿಸಿದರು. ಓಡಿದ್ದು ಅಷ್ಟಿಷ್ಟಲ್ಲ, ಬರೋಬ್ಬರಿ 6 ಕಿ.ಮೀ. ತಮಗೆಷ್ಟು ಸಾಧ್ಯವಾಗುತ್ತದೋ ಅಷ್ಟು ವೇಗವಾಗಿ, ರೈಲು ಹಳಿಗಳ ನಡುವಿನ ಕಲ್ಲುಗಳ ಮೇಲೆ, ನೋವನ್ನೂ ಧಿಕ್ಕರಿಸಿ ಓಡಿ ರೈಲ್ವೆ ಸಿಬ್ಬಂದಿಗೆ ಸುದ್ದಿ ತಿಳಿಸಿದರು ಎಂದು ದಿ ಲಾಜಿಕಲ್ ಇಂಡಿಯನ್ ಮತ್ತು ದಿ ನ್ಯೂಸ್ ಮಿನಿಟ್ ವರದಿ ಮಾಡಿವೆ.
ಅವರ ಕರ್ತವ್ಯಪ್ರಜ್ಞೆಯಿಂದಾಗಿ ಭಾರೀ ದುರಂತ ತಪ್ಪಿದೆ. ಗೋವಾದಿಂದ ಇನ್ನೇನು ಕೆಲವೇ ನಿಮಿಷಗಳಲ್ಲಿ ರೈಲು ಬರುವುದಿತ್ತು. ಆ ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ಧಾವಿಸಿ ನೋಡಿದಾಗ ಬೆಚ್ಚಿಬೀಳುವುದು ಬಾಕಿ. ಏಕೆಂದರೆ, ಕೃಷ್ಣ ಪೂಜಾರಿ ಅವರು ಕೆಲ ನಿಮಿಷಗಳ ಹಿಂದೆ ನೋಡಿದ್ದಕ್ಕಿಂತ ಬಿರುಕು ದೊಡ್ಡಗಾಗಿತ್ತು.
ಅಷ್ಟು ದೂರ ಓಡಿ ರೈಲು ದುರಂತವನ್ನು ತಪ್ಪಿಸಿದ್ದಕ್ಕೆ ರೈಲ್ವೆ ಸಿಬ್ಬಂದಿಯಿಂದ ಕೃಷ್ಣ ಪೂಜಾರಿ ಅವರಿಗೆ ಪ್ರಶಂಸೆಯ ಸುರಿಮಳೆ. ಆದರೆ, ಕೃಷ್ಣ ಪೂಜಾರಿ ಅವರಿಗೆ, ತಾವು 6 ಕಿ.ಮೀ. ಓಡಿ ದಣಿದಿದ್ದಕ್ಕಿಂತ, ಕಾಲು ನೋವನ್ನು ಇನ್ನೂ ಹೆಚ್ಚಿಸಿಕೊಂಡಿದ್ದಕ್ಕಿಂತ ರೈಲು ದುರಂತವನ್ನು ತಪ್ಪಿಸಿದ ಧನ್ಯತಾಭಾವ.

ಜಲ್ಲಿಕಲ್ಲುಗಳ ಮೇಲೆ ಅಡ್ಡಾಡಲು ಶಿಫಾರಸು
ಒಂದು ವರ್ಷದ ಹಿಂದಿನಿಂದಲೇ ಕೃಷ್ಣ ಪೂಜಾರಿ ಅವರ ಬಲಗಾಲಿನಲ್ಲಿ ನರ ದೌರ್ಬಲ್ಯ ಕಾಣಿಸಿಕೊಂಡಿತ್ತು. ಅದಕ್ಕೆ ಅವರು ಇಂಜೆಕ್ಷನ್ ಮತ್ತು ಔಷಧಿಗಳನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದ್ದರು. ಕಾಲಿನ ಸ್ನಾಯುಗಳನ್ನು ಸಡಿಲಗೊಳಿಸುವ ಉದ್ದೇಶದಿಂದ ಜಲ್ಲಿಕಲ್ಲುಗಳ ಮೇಲೆ ನಡೆಯಬೇಕೆಂದು ವೈದ್ಯರು ಸೂಚಿಸಿದ್ದರು. ಕೊರಂಗ್ರಪಾಡಿಯ ರೈಲ್ವೆ ಹಳಿಯ ಬಳಿಯೇ ಅವರು ನೆಲೆಸುತ್ತಿದ್ದರಿಂದ, ಮತ್ತು ರೈಲಿನ ಹೊರತಾಗಿ ಅಲ್ಲಿ ಯಾರೂ ಅಡ್ಡಾಡದಿರುವುದರಿಂದ ಅಲ್ಲಿಯೇ ಬೆಳಗಿನ ವಾಯು ವಿಹಾರಕ್ಕೆ ಬರುತ್ತಿದ್ದರು. ಆವಾಗಲೇ ರೈಲಿನ ಹಳಿಯಲ್ಲಿ ಬಿರುಕುಬಿಟ್ಟಿದ್ದನ್ನು ಅವರು ನೋಡಿದ್ದು.

ಕಾಲು ನೋವನ್ನೂ ಮರೆತು ಓಡಿದ್ದಾರೆ
ಕೊರಂಗ್ರಪಾಡಿಯ ಬ್ರಹ್ಮಸ್ಥಾನದ ಬಳಿ ಬೆಳಗಿನ 6.30ಕ್ಕೆ ನಡಿಗೆಯ ವ್ಯಾಯಾಮ ಮಾಡಲು ಬಂದಾಗಲೇ ಹಳಿಯಲ್ಲಿ ಬಿರುಕು ಬಿಟ್ಟಿರುವುದು ಗಮನಕ್ಕೆ ಬಂದಿದೆ. ಓಡಿ ಓಡಿ ರೈಲ್ವೆ ಸಿಬ್ಬಂದಿಗಳಿಗೆ ಈ ಬಗ್ಗೆ ತಿಳಿಸಿದ ನಂತರ, ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಲವತ್ತು ನಿಮಿಷಗಳಲ್ಲಿ ಕೃಷ್ಣ ಪೂಜಾರಿ ಮತ್ತು ರೈಲ್ವೆ ಅಧಿಕಾರಿಗಳು ಬಿರುಕುಬಿಟ್ಟ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೆ ಗೂಡ್ಸ್ ಗಾಡಿಯೊಂದು ಅದೇ ಲೈನ್ ನಲ್ಲಿ ಹಾದುಹೋಗಿದೆ. ಅದೃಷ್ಟವಶಾತ್, ಬಿರುಕು ಸಣ್ಣದಿದ್ದರಿಂದ ಅಪಾಯವೇನೂ ಸಂಭವಿಸಿಲ್ಲ. ಈ ವಿಷಯವನ್ನು ಎಲ್ಲ ಸ್ಟೇಷನ್ ಗಳಿಗೆ ರವಾನಿಸಲಾಗಿದೆ. ಆ ಹಾದಿಯಲ್ಲಿ ಬರುವ ಎಲ್ಲ ರೈಲುಗಳನ್ನು ನಿಧಾನ ಮಾಡಬೇಕೆಂದು ಸೂಚಿಸಲಾಗಿದೆ.

ನೋವಿದ್ದರೂ ಓಡಿದ್ದು ಹೇಗೆ?
ಕೊರಂಗ್ರಪಾಡಿಯಲ್ಲಿ ಗೋಬಿ ಮಂಚೂರಿ ಮಾಡಿ ಹೊಟ್ಟೆ ಹೊರೆಯುತ್ತಿರುವ ಕೃಷ್ಣ ಪೂಜಾರಿ ಅವರು, ಹೆಚ್ಚು ಕೆಲಸವಿಲ್ಲದಿದ್ದಾಗ ಕೂಲಿ ಕರ್ಮಿಯಾಗಿಯೂ ದುಡಿಯುತ್ತಾರೆ. ಒಂದು ವರ್ಷದ ಹಿಂದೆ ಅವರ ಕಾಲಲ್ಲಿ ನೋವು ಕಾಣಿಸಿಕೊಂಡಿದೆ. ಕಾಲು ನೋವಿದ್ದರೂ 6 ಕಿ.ಮೀ. ದೂರ ಓಡಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದಾಗ, ಅವರು 40 ವರ್ಷಗಳ ಹಿಂದೆ ನೆಲಮಂಗಲದಲ್ಲಿ ನೋಡಿದ ಒಂದು ರೈಲ್ವೆ ಅಪಘಾತದ ನೆನಪಿಗೆ ಜಾರಿದರು.

ರೈಲು ಅಪಘಾತದ ಆ ಕರಾಳ ನೆನಪು
ಶಿಕ್ಷಣವೆನ್ನುವುದು ದುಬಾರಿಯಾಗಿದ್ದ ಸಮಯದಲ್ಲಿ ನಮ್ಮ ಜೊತೆ ಮಾಣಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕಷ್ಟಪಟ್ಟು ಪದವಿ ಪೂರ್ತಿಗೊಳಿಸಿ ಊರಿಗೆ ಮರಳುತ್ತಿದ್ದ. ರೈಲು ವೇಗವಾಗಿ ಓಡುತ್ತಿರುವಾಗಲೇ ಇಳಿಯಲು ಯತ್ನಿಸಿದಾಗ ಆತನ ಬ್ಯಾಗು ಬಾಗಿಲಿಗೆ ಸಿಲುಕಿದ್ದರಿಂದ ಆತನೂ ರೈಲಿನ ಬಳಿ ಎಳೆಯಲ್ಪಟ್ಟ. ಬ್ಯಾಗನ್ನು ಆತ ಗಟ್ಟಿಯಾಗಿಯೇ ಹಿಡಿದಿದ್ದರಿಂದ ಆತನ ದೇಹವೂ ರೈಲಿನ ಗುಂಟ ಎಳೆದುಕೊಂಡು ಹೋಗಿದ್ದು ಮನಸ್ಸಿನಲ್ಲಿ ಇನ್ನೂ ಹಸಿಯಾಗಿಯೇ ಇದೆ. ಆ ದೃಶ್ಯವನ್ನು ಅಸಹಾಯಕತೆಯಿಂದ ನೋಡಬೇಕಾಯಿತು ಎಂದು ಅವರು ಆ ದುರ್ಘಟನೆಯ ನೆನಪಿನಂಗಳಕ್ಕೆ ಜಾರುತ್ತಾರೆ.

ಕೃಷ್ಣ ಪೂಜಾರಿಗೆ ಒಂದು ಸಲಾಂ
ಕೊರಂಗ್ರಪಾಡಿಯಲ್ಲಿ ರೈಲು ಬಿರುಕು ಬಿಟ್ಟಿದ್ದನ್ನು ನೋಡಿದಾಗ 40 ವರ್ಷಗಳ ಹಿಂದೆ ನಡೆದ ಘಟನೆ ನೆನಪಾಗಿದೆ. ಇಲ್ಲಿಯೂ ರೈಲು ಹಾದು ಅನಾಹುತ ಸಂಭವಿಸಿದ್ದರೆ ನಾನು ನನ್ನನ್ನೆಂದು ಕ್ಷಮಿಸುತ್ತಿರಲಿಲ್ಲ. ಮುಂದೆ ಸಂಭವಿಸಬಹುದಾದ ದುರ್ಷಟನೆಯೇ ನನ್ನನ್ನು ಓಡಲು ಪ್ರೇರೇಪಿಸಿತು. ನಾನು ಕಾಲಿನ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದೇನೆ, ಸಾಕಷ್ಟು ನೋವು ಅನುಭವಿಸುತ್ತಿದ್ದೇನೆ ಎಂಬುದು ಅಲ್ಲಿ ತಲುಪುವವರೆಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ಉಡುಪಿಯ ಕೃಷ್ಣನ ಪ್ರೇರಣೆಯಿಂದ ದೊಡ್ಡ ಅಪಘಾತವಾಗುವುದು ತಪ್ಪಿದ್ದೆಯಲ್ಲ ಅಷ್ಟು ಸಾಕು ಎಂದು ಅವರು ನಿಡುಸುಯ್ಯುತ್ತಾರೆ. ಕೃಷ್ಣ ಪೂಜಾರಿಗೆ ಒಂದು ಸಲಾಂ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications