ಕೊರೊನಾಕ್ಕಿಂತ ಕುಡಿಯೋದಕ್ಕೆ ಹೋಗ್ತಿದೆ ಪ್ರಾಣ: ಉಡುಪಿ ಯಾಕೆ ಫಸ್ಟ್?
ಉಡುಪಿ, ಮಾರ್ಚ್ 31: ಕೊರೊನಾ ಕಾರಣದಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಒಂದೆಡೆ ಜನ ನೀರು, ಆಹಾರ ಸಿಗದೇ ಪರದಾಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಮತ್ತೊಂದೆಡೆ ಕುಡಿಯಲು ಮದ್ಯ ಸಿಗತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳೂ ನಡೆಯುತ್ತಿವೆ.
ಉಡುಪಿ ಜಿಲ್ಲೆಯಾದ್ಯಂತ ಬಾರ್, ವೈನ್ಸ್ ಶಾಪ್ ಗಳನ್ನು ಸಂಪೂರ್ಣ ಲಾಕೌಟ್ ಮಾಡಲಾಗಿದ್ದರಿಂದ, ಕುಡಿಯಲು ಮದ್ಯ ಸಿಗದ ಕಾರಣ ಮತ್ತೊಬ್ಬ ಮದ್ಯ ವ್ಯಸನಿ ಸಾವನ್ನಪ್ಪಿದ್ದಾನೆ.
ಈ ಮೂಲಕ ಮದ್ಯ ಸಿಗದೆ ಸತ್ತವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಉಡುಪಿ ಜಿಲ್ಲೆ ಕಾಪುವಿನಲ್ಲಿ ಘಟನೆ ನಡೆದಿದ್ದು, ಪಾಂಡು ಪೂಜಾರಿ (68) ಕುರ್ಕಾಲು ಗ್ರಾಮ ನಿವಾಸಿಯಾಗಿದ್ದಾನೆ. ನೇಣುಬಿಗಿದು ಮದ್ಯ ವ್ಯಸನಿ ಪಾಂಡು ಪೂಜಾರಿ ಸಾವಿಗೆ ಶರಣಾಗಿದ್ದಾನೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೊನಾಕ್ಕಿಂತ ಚಿಂತೆಗೀಡು ಮಾಡಿದ ಮದ್ಯ ವ್ಯಸನಿಗಳು
ಕುಡಿಯಲು ಮದ್ಯ ಸಿಗದ ಕಾರಣ ಮತ್ತೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮದ್ಯ ವ್ಯಸನಿ ಯುವಕನನ್ನು ಸಮಾಜ ಸೇವಕ ನಿತ್ಯಾನಂದ ವಳಕಾಡು ರಕ್ಷಿಸಿದ್ದಾರೆ. ತಮಿಳುನಾಡು ಮೂಲದ ಧರ್ಮಪುರಿ ನಿವಾಸಿ ಧನಪಾಲ್ ಎಂಬ ಯುವಕನೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಯುವಕನನ್ನು ಪುನರ್ವಸತಿ ಕೇಂದ್ರಕ್ಕೆ ಸಮಾಜ ಸೇವಕ ನಿತ್ಯಾನಂದ ರವಾನಿಸಿದ್ದಾರೆ. ಉಡುಪಿ ನಗರದಲ್ಲಿ ಧನಪಾಲ್ ಮದ್ಯವಿಲ್ಲದೆ ಒದ್ದಾಡುತ್ತಿದ್ದ ಎನ್ನಲಾಗಿದೆ. ಕೊರೊನಾ ವೈರಸ್ ತಗುಲಿ ಸಾವನ್ನಪ್ಪಿದ್ದಕ್ಕಿಂತ ರಾಜ್ಯದಲ್ಲಿ ಮದ್ಯ ವ್ಯಸನಿಗಳೇ ಹೆಚ್ಚು ಜನ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.

ಒಮ್ಮೆಲೆ ಮದ್ಯ ಪೂರೈಕೆ ಬಂದ್ ಆದ ಹಿನ್ನೆಲೆ ಈ ನಿರ್ಧಾರ
ಮದ್ಯ ವ್ಯಸನಿಗಳ ಸಾವಿನ ಸಂಖ್ಯೆಯಲ್ಲಿ ಉಡುಪಿ ಜಿಲ್ಲೆಯು ರಾಜ್ಯದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಕಾರಣವನ್ನು ಜಿಲ್ಲಾಡಳಿತಕ್ಕೆ ಕೇಳಿದರೆ, ಇದರ ಬಗ್ಗೆ ಅಧ್ಯಯನ ಮಾಡಬೇಕೆಂದು ಹೇಳುತ್ತಾರೆ.
ಕೆಲವರು ಮದ್ಯ ವ್ಯಸನ ಚಟಕ್ಕೆ ಅಂಟಿಕೊಂಡಿರುತ್ತಾರೆ. ಅವರಿಗೆ ಪ್ರತಿದಿನ ಆಲ್ಕೋಹಾಲ್ ಬೇಕೆ ಬೇಕು. ಇಲ್ಲವೆಂದರೆ ಅವರ ದೇಹ ನಿಯಂತ್ರಣ ತಪ್ಪಿರುತ್ತದೆ ಎನ್ನಬಹುದು. ಹೀಗಾಗಿ ಒಮ್ಮೆಲೆ ಮದ್ಯ ಪೂರೈಕೆ ಬಂದ್ ಆದ ಹಿನ್ನೆಲೆಯಲ್ಲಿ ಮದ್ಯ ವ್ಯಸನಿಗಳು ಚಡಪಡಿಸಿದ್ದಾರೆ. ಕೊನೆಗೆ ಎಲ್ಲೂ ಮದ್ಯ ಸಿಗದಿದ್ದಾಗ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ.

ಲಾಕ್ ಡೌನ್ ಆದ ಸಂದರ್ಭದಲ್ಲಿ ಬಾರ್ ಬಂದ್
ಬಾರ್ ಗಳಲ್ಲಿ ಹೆಚ್ಚು ಜನರು ಸೇರುತ್ತಾರೆ ಎನ್ನುವ ಸಲುವಾಗಿ ಲಾಕ್ ಡೌನ್ ಆದ ಸಂದರ್ಭದಲ್ಲಿ ಮದ್ಯ ಪೂರೈಕೆ ಮತ್ತು ಮಾರಾಟವನ್ನು ಬಂದ್ ಮಾಡಲಾಯಿತು. ಮದ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಉಡುಪಿ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯನ್ನು ಗಮನಿಸಿದ ಜಿಲ್ಲಾಡಳಿತ ಇದೀಗ ಕೌನ್ಸಿಲಿಂಗ್ ಮಾಡಲು ಸಿದ್ಧವಿರುವುದಾಗಿ ತಿಳಿಸಿದೆ. "ಮನೋವೈದ್ಯ ಡಾ. ಪಿವಿ ಭಂಡಾರಿ ಜೊತೆ ಈ ಕುರಿತು ಮಾತನಾಡಿದ್ದೇವೆ. ಜಿಲ್ಲಾಡಳಿತದ ಬಳಿ ಕೌನ್ಸಿಲಿಂಗ್ ವಿಭಾಗ ಇದೆ. ಮಾಹಿತಿ ಸಿಕ್ಕರೆ ಸಾರ್ವಜನಿಕರು ನಮ್ಮ ಗಮನಕ್ಕೆ ತನ್ನಿ' ಎಂದು ಮನವಿ ಮಾಡಲಾಗಿದೆ.

ಮಾನಸಿಕ ಖಿನ್ನತೆಗೆ ಒಳಗಾಗುವ ಮದ್ಯ ವ್ಯಸನಿಗಳು
ಅತಿಯಾದ ಮದ್ಯಪಾನ ಸೇವನೆ ಚಟ ಇರುವ ಇವರಿಗೆ ಬಂದ್ ನಿಂದಾಗಿ ಮದ್ಯ ಸಿಗ್ತಾ ಇರಲಿಲ್ಲ. ಒಂದೆರಡು ದಿನವಾಗಿದ್ದರೆ ಅದನ್ನು ಸಹಿಸಿಕೊಳ್ಳುತ್ತಿದ್ದರೋ ಏನೋ, ಆದರೆ ನಿರಂತರ ಒಂದು ವಾರ ಮದ್ಯ ಪೂರೈಕೆ ಇಲ್ಲದ್ದರಿಂದ ಇವರು ಸಹಜವಾಗಿಯೇ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಕೆಲವರಿಗೆ ಕುಡಿಯದೇ ಇದ್ದರೆ ಕೈ ನಡುಕ ಬರುವುದೂ ಇದೆ. ಇಂಥವರು ಹೆಚ್ಚು ಸಮಯ ಇದನ್ನು ತಡೆದುಕೊಳ್ಳುವ ಶಕ್ತಿ ಹೊಂದಿರಲಾರರು. ಯಾವುದೇ ಜವಾಬ್ದಾರಿ ಇಲ್ಲದ ಇಂತಹ ವ್ಯಕ್ತಿಗಳು ಕುಡಿತವೇ ಜೀವನದ ಸರ್ವಸ್ವ ಎಂದು ತಿಳಿದುಕೊಂಡವರು. ಅದೇ ಇಲ್ಲದ ಮೇಲೆ ಇವರಿಗೆ ಜೀವವೇನೂ ಅದಕ್ಕಿಂತ ದೊಡ್ಡದು ಎನಿಸುವುದಿಲ್ಲ. ಕೊನೆಗೆ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುತ್ತಾರೆ.












Click it and Unblock the Notifications