32 ಗಂಟೆಗಳ ಬಳಿಕ ಬೆಳಗಾವಿಗೆ ಸಂತೋಷ್ ಮೃತದೇಹ ರವಾನೆ
ಉಡುಪಿ, ಏಪ್ರಿಲ್ 13; ಸುಧೀರ್ಘ 32 ಗಂಟೆಗಳ ಗೊಂದಲ, ಆಕ್ರೋಶದ ಬಳಿಕ ಗುತ್ತಿಗೆದಾರ ಸಂತೋಷ್ ಮೃತದೇಹವನ್ನು ಕೊನೆಗೂ ಉಡುಪಿಯಿಂದ ಬೆಳಗಾವಿಯ ಹಿಂಡಲಗಾ ಗ್ರಾಮಕ್ಕೆ ರವಾನೆ ಮಾಡಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸಂತೋಷ್ ಪಾಟೀಲ್ ಕುಟುಂಬಸ್ಥರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದುಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.
ಪೊಲೀಸ್ ಉನ್ನತ ಅಧಿಕಾರಿಗಳು ಕೊಟ್ಟ ಭರವಸೆಯ ಹಿನ್ನಲೆಯಲ್ಲಿ ಸಂತೋಷ್ ಸಂಬಂಧಿಕರು ಮೃತದೇಹದ ರವಾನೆಗೆ ಒಪ್ಪಿಗೆ ಸೂಚಿಸಿದರು. ಉಡುಪಿ ಪೊಲೀಸರ ಭದ್ರತೆಯೊಂದಿಗೆ ಮೃತದೇಹವನ್ನು ಬುಧವಾರ ರಾತ್ರಿ ಉಡುಪಿಯಿಂದ ಹಿಂಡಲಗಾದತ್ತ ತೆಗೆದುಕೊಂಡು ಹೋಗಲಾಗಿದೆ.

ಬುಧವಾರ ಬೆಳಗ್ಗಿನಿಂದಲೂ ಸಂತೋಷ್ ಸಂಬಂಧಿಕರು ಸಚಿವ ಕೆ. ಎಸ್. ಈಶ್ವರಪ್ಪ ಸಹಿತ ಆರೋಪಿಗಳ ಬಂಧನಕ್ಕೆ ಪಟ್ಟು ಹಿಡಿದಿದ್ದರು. ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಉಡುಪಿಯ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಪಕ್ಕದ ಶಾಂಭವಿ ಲಾಡ್ಜ್ ನಿಂದ ಮೃತದೇಹ ಹೊರತೆಗೆಯಲು ಬಿಡೋದಿಲ್ಲ ಅಂತಾ ಪಟ್ಟು ಹಿಡಿದಿದ್ದರು.
ಪೊಲೀಸರ ಮನವಿಯಂತೇ ಸುಧೀರ್ಘ ಪಂಚನಾಮೆಯ ಬಳಿಕ ಸಂತೋಷ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಮಂಗಳೂರಿನಿಂದ ಎರಡು ಎಫ್ಎಸ್ಎಲ್ ಅಧಿಕಾರಿಗಳ ತಂಡ ಈ ಪಂಚನಾಮೆಯನ್ನು ಮಾಡಿದೆ. ಸಂತೋಷ್ ಮೃತದೇಹದ ಬಾಯಲ್ಲಿ ನೊರೆ ಹೊರಬಂದಿರೋದು ಮತ್ತು ಡಸ್ಟ್ ಬಿನ್ನಲ್ಲಿ ಜ್ಯೂಸ್ ಬಾಟಲ್ ಜೊತೆಗೆ ವಿಷದ ಬಾಟಲಿ ಇರುವುದು ಕೂಡಾ ಪತ್ತೆಯಾಗಿತ್ತು.
ಬುಧವಾರ ರಾತ್ರಿ 9 ಗಂಟೆಯ ವೇಳೆಗೆ ಸಂತೋಷ್ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು ಬಳಿಕ ಸಂತೋಷ್ ಮೃತದೇಹವನ್ನು ಬೆಳಗಾವಿಗೆ ಕೊಂಡೊಯ್ಯಲಾಗಿದೆ. ಉಡುಪಿ ಪೊಲೀಸರು ಬೆಳಗಾವಿ ತನಕ ತೆರಳಲಿದ್ದು, ಪೊಲೀಸ್ ಭದ್ರತೆಯಲ್ಲಿ ಶವ ಕಳಿಸಿಕೊಡಲಾಗಿದೆ.

ಈ ಸಂಧರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಂತೋಷ್ ಪಾಟೀಲ್ ಸಹೋದರ ಸಂಬಂಧಿ ಪ್ರಶಾಂತ್ ಪಾಟೀಲ್, "ವರಿಷ್ಠರಿಂದ ನಮಗೆ ನ್ಯಾಯ ಒದಗಿಸಿಕೊಡುವ ಭರವಸೆ ಸಿಕ್ಕಿದೆ. ಪೊಲೀಸ್ ಅಧಿಕಾರಿಗಳಿಂದ ಭರವಸೆ ಸಿಕ್ಕ ನಂತರ ಮೃತದೇಹ ಪಡೆದಿದ್ದೇವೆ. ಪ್ರಕರಣದ ಆರೋಪಿಗಳಿಗೆ ಸೂಕ್ತ ಶಿಕ್ಷೆ ಆಗಬೇಕು. ಹಿರಿಯ ಪೊಲೀಸ್ ಅಧಿಕಾರಿಗಳು ನ್ಯಾಯ ಒದಗಿಸುವ ಆಶ್ವಾಸನೆ ಕೊಟ್ಟಿದ್ದಾರೆ" ಎಂದರು.
"ಮುಂದಿನ ನಡೆ ಬಗ್ಗೆ ಬೆಳಗಾವಿಗೆ ಹೋದ ನಂತರ ತೀರ್ಮಾನ ಮಾಡುತ್ತೇವೆ. ಅಂತ್ಯ ಸಂಸ್ಕಾರದ ಬಗ್ಗೆ ಈಗಲೇ ಯಾವುದೇ ನಿರ್ಧಾರಕ್ಕೆ ಬಂದಿಲ್ಲ" ಎಂದು ಮಣಿಪಾಲದಲ್ಲಿ ಕೆಎಂಸಿ ಆಸ್ಪತ್ರೆಯಲ್ಲಿ ಪ್ರಶಾಂತ್ ಪಾಟೀಲ್ ಹೇಳಿದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾತನಾಡಿ, "ತನಿಖೆ ಆಗುತ್ತಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಪ್ರಕರಣದ ತನಿಖೆ ನಡೆಸುತ್ತೇವೆ. ಶವದ ಮರಣೋತ್ತರ ಪರೀಕ್ಷೆ ಪೂರೈಸಿದ್ದೇವೆ. ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದೇವೆ" ಎಂದರು.
"ಕುಟುಂಬದವರು ಶವವನ್ನು ಬೆಳಗಾವಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ಬೆಳಗಾವಿವರೆಗೂ ತೆರಳಲಿದ್ದಾರೆ. ರಾತ್ರಿ ಮತ್ತು ಮಳೆಯ ವಾತಾವರಣ ಇರುವುದರಿಂದ ಪೊಲೀಸ್ ಭದ್ರತೆಯಲ್ಲಿ ಕಳುಹಿಸಲಾಗುತ್ತಿದೆ. ಸೂಕ್ತ ತನಿಖೆ ಮಾಡುವುದಾಗಿ ಕುಟುಂಬಕ್ಕೆ ಹೇಳಿದ್ದೇವೆ" ಎಂದು ತಿಳಿಸಿದರು.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications