ಕೊರಗರ ಡಿಜೆ ಪಾರ್ಟಿ ಮೇಲೆ ಪೊಲೀಸ್ ದಾಳಿ; ತನಿಖೆಗೆ ಸಿಓಡಿಗೆ
ಉಡುಪಿ, ಜನವರಿ 02; ಉಡುಪಿಯ ಕೋಟದಲ್ಲಿ ನಡೆದ ಕೊರಗರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ, ಪೊಲೀಸರ ಡಬಲ್ ಗೇಮ್ ನೇರವಾಗಿ ಸರಕಾರಕ್ಕೆ ಬಿಸಿ ಮುಟ್ಟಿಸಿದೆ. ನೊಂದ ಕುಟುಂಬವನ್ನು ಸಂತೈಸುವುದಕ್ಕೆ ಸ್ವತಃ ಗೃಹ ಸಚಿವರು ಶನಿವಾರ ಕೊರಗರ ಕಾಲೋನಿಗೆ ಭೇಟಿ ನೀಡಿದ್ದರು. ಪ್ರಕರಣದ ತನಿಖೆಯನ್ನು ಸಿಓಡಿಗೆ ಒಪ್ಪಿಸುವುದಾಗಿ ಹೇಳಿದ ಗೃಹಸಚಿವ ಆರಗ ಜ್ಞಾನೆಂದ್ರ, ವಿವಾದ ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ.
ಮದುವೆಯ ಮೆಹಂದಿ ಸಮಾರಂಭದ ಸಂಭ್ರಮದಲ್ಲಿದ್ದ ಅಮಾಯಕರ ಮೇಲೆ ಕೋಟ ಪೊಲೀಸರು ದೌರ್ಜನ್ಯ ಮೆರೆದಿದ್ದರು. ಹಲ್ಲೆ ನಡೆಸಿ ಮೂರುದಿನದ ನಂತರ, ಸಂತ್ರಸ್ತ ಕುಟುಂಬದ ಮೇಲೆ ಪ್ರತಿದೂರು ದಾಖಲಿಸಿದ್ದರು. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನೊಂದ ಕುಟುಂಬವನ್ನು ಸಂತೈಸಿ ಹೋದ ಬೆನ್ನಲ್ಲೇ, ಪೊಲೀಸರು ದಾಖಲಿಸಿದ್ದ ಪ್ರತಿದೂರು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಆಕ್ರೋಶದ ಬಿಸಿ ಸ್ವತಃ ಗೃಹಸಚಿವರಿಗೂ ತಟ್ಟಿತ್ತು. ಹಾಗಾಗಿ ಗೃಹಸಚಿವ ಆರಗ ಜ್ಞಾನೆಂದ್ರ ನೇರವಾಗಿ ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮದ ಕೊರಗರ ಕಾಲೋನಿಗೆ ಭೇಟಿ ನೀಡಿದ್ದರು. ಇಲಾಖೆಯಿಂದ ಆಗಿರುವ ತಪ್ಪನ್ನು ಗೃಹ ಸಚಿವರು ಒಪ್ಪಿಕೊಂಡರು.

ಸಂತ್ರಸ್ತ ಕುಟುಂಬವನ್ನು ಸಮಾಧಾನಪಡಿಸಲು ಪ್ರಕರಣವನ್ನು ಸಿಓಡಿಗೆ ನೀಡುವುದಾಗಿ ಭರವಸೆ ನೀಡಿದರು. ಜೊತೆಗೆ ದೌರ್ಜನ್ಯಕ್ಕೆ ಒಳಗಾದ 6 ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರದ ಭರವಸೆ ನೀಡಿದರು. ಸ್ಥಳದಲ್ಲೇ ತಲಾ 50 ಸಾವಿರ ರೂಪಾಯಿಯ ಚೆಕ್ ಹಸ್ತಾಂತರಿಸಿದರು. ಈ ಪ್ರಕರಣದಲ್ಲಿ ಯಾವ ಸಂತ್ರಸ್ತರೂ ಬಂಧನಕ್ಕೆ ಒಳಗಾಗದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆ.
ದೌರ್ಜನ್ಯಕ್ಕೊಳಗಾದ ಕುಟುಂಬದ ಜೊತೆ ಮಾತನಾಡುವ ವೇಳೆ ಗೃಹ ಸಚಿವರು, "ತನ್ನ ಇಲಾಖೆಯೊಳಗಿನ ಹುಳುಕುಗಳನ್ನು ಬಿಚ್ಚು ಮಾತಿನ ಮೂಲಕ ಹೊರಗೆಡವಿದರು. ಪೊಲೀಸರು ದಾಖಲಿಸಿರುವುದು ಸುಳ್ಳು ದೂರು ಎಂದು ಎಲ್ಲರಿಗೂ ಗೊತ್ತಾಗುತ್ತದೆ. ರೌಡಿಗಳನ್ನು ಕಂಟ್ರೋಲ್ ಮಾಡಲು ಪೊಲೀಸರನ್ನು ನೇಮಕ ಮಾಡುತ್ತೇವೆ. ಆದರೆ ಪೊಲೀಸರೇ ರೌಡಿಗಳಂತೆ ವರ್ತಿಸಿದರೆ ಏನು ಮಾಡುವುದು? ಕೋಟ ಠಾಣಾ ಎಸ್ಸೈ ಸಂತೋಷ್ ಇಲಾಖೆಯಲ್ಲಿ ಮುಂದುವರಿಯಲು ಫಿಟ್ಟೋ ಅಥವಾ ಅನ್ ಫಿಟ್ಟೋ ಡಿಸೈಡ್ ಮಾಡುತ್ತೇವೆ" ಎಂದು ಗುಡುಗಿದರು.
ಸದ್ಯ ಪೊಲೀಸರು ದಾಖಲಿಸಿರುವ ಪ್ರತಿ ದೂರಿನಿಂದ ಸಂತ್ರಸ್ತ ಕೊರಗ ಕುಟುಂಬಗಳು ಕಂಗಾಲಾಗಿವೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಸಚಿವರು ತಮ್ಮ ಮನೆಗೆ ಭೇಟಿ ನೀಡಿ ಹೋದ ಕೆಲವೇ ಗಂಟೆಗಳಲ್ಲಿ ತಮ್ಮ ವಿರುದ್ಧವೇ ಎಫ್ಐಆರ್ ದಾಖಲಾಗಿರುವುದರಿಂದ ಈ ಕುಟುಂಬಗಳು ಆತಂಕಕ್ಕೀಡಾಗಿವೆ.
ಯಾವುದೇ ಸಚಿವರು ಬಂದು ಏನೇ ಮಾಡಿದರು ಇವರಲ್ಲಿ ಭರವಸೆ ಮೂಡುತ್ತಿಲ್ಲ. ತಮ್ಮ ಮೇಲೆ ದಾಖಲಿಸಿರುವ ಪ್ರಕರಣ ವಾಪಸ್ಸು ಪಡೆಯದ ಹೊರತು ಇವರಿಗೆ ನೆಮ್ಮದಿ ಇಲ್ಲ. ಒಂದು ವೇಳೆ ಮತ್ತೆ ಪ್ರಕರಣ ತೀವ್ರತೆ ಪಡೆದುಕೊಂಡರೆ ಉಗ್ರ ಹೋರಾಟ ನಡೆಸುವುದಾಗಿ ಸ್ವತಃ ಮದುಮಗ ರಾಜೇಶ್ ತಿಳಿಸಿದ್ದಾರೆ.
ಗೃಹಸಚಿವರ ಈ ಸೌಹಾರ್ದ ಭೇಟಿ ಅನೇಕ ಕಾರಣಗಳಿಗೆ ಗಮನ ಸೆಳೆದಿತ್ತು. ತನ್ನ ಇಲಾಖೆಯ ಸಿಬ್ಬಂದಿ ಮಾಡಿದ ತಪ್ಪಿಗೆ ಗೃಹಸಚಿವರೇ ಬಂದು ಸಾಂತ್ವನ ಹೇಳಿದ್ದು, ವಿಶೇಷವಾಗಿತ್ತು. ಸಚಿವರು ಕೊಟ್ಟ ಮಾತು ಉಳಿಸಿಕೊಂಡರೆ ಕರಾವಳಿಯ ಕಟ್ಟಕಡೆಯ ಈ ಕೊರಗ ಸಮುದಾಯಕ್ಕೆ ವ್ಯವಸ್ಥೆಯ ಮೇಲೆ ಭರವಸೆ ನಂಬಿಕೆ ಉಳಿಯಬಹುದು.
ಗೃಹ ಸಚಿವರ ಭೇಟಿ; ಡಿಸೆಂಬರ್ 30ರಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿಯಾಗಿದ್ದರು. ಕೋಟದ ಕೊರಗ ಸಮುದಾಯದವರ ಮದುವೆ ಮನೆಯೊಂದಕ್ಕೆ ತೆರಳಿ ಅಮಾನವೀಯ ನಡವಳಿಕೆ ತೋರಿಸಿದ ಪೊಲೀಸ್ ಪಿಎಸ್ಐ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದದರು.
ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಉಪ ನಿರೀಕ್ಷಕ ಬಿ. ಪಿ. ಸಂತೋಷ್ ಅಮಾನತುಗೊಳಿಸಲಾಗಿದೆ. ಕೋಟಾ ಪೊಲೀಸ್ ಠಾಣೆಯ ಐವರು ಸಿಬ್ಬಂದಿಗಳನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ.












Click it and Unblock the Notifications