ಯಕ್ಷರಂಗದ ರಾಜಕುಮಾರ ಚಿಟ್ಟಾಣಿ ಅಂತಿಮ ದರ್ಶನ ಪಡೆದ ಅಭಿಮಾನಿಗಳು
ಉಡುಪಿ, ಅಕ್ಟೋಬರ್ 4: ಕರಾವಳಿಯ ಜನಪದ ಕಲೆ ಯಕ್ಷಗಾನದಲ್ಲಿ'ಚಿಟ್ಟಾಣಿ ಯುಗ' ಅಂತ್ಯವಾಗಿದೆ. ದಕ್ಷಿಣ-ಉತ್ತರ ಕನ್ನಡ ಮಾತ್ರವಲ್ಲ ದೇಶ-ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಡಾ.ರಾಜ್ ಕುಮಾರ್ ಪ್ರೇರಣೆಯಂತೆ, ಚಿಟ್ಟಾಣಿಯವರ ಕಣ್ಣನ್ನು ದಾನ ಮಾಡಲಾಗಿದ್ದು, ಅವರ ಅಂತಿಮ ಸಂಸ್ಕಾರ ಇಂದು ಉತ್ತರ ಕನ್ನಡ ಜಿಲ್ಲೆಯ ಸ್ವಗ್ರಾಮ ಹೆರಂಗಡಿ ಗ್ರಾಮದ ಗುಡ್ಡೆಕೆರಿಯಲ್ಲಿ ನಡೆಯಲಿದೆ.

ದೇಹದಲ್ಲಿ ಚೇತನ ಇರುವವರೆಗೂ ವೇಷ ಮಾಡುವ ಪಣತೊಟ್ಟಿದ್ದ ಚಿಟ್ಟಾಣಿ ಅಜ್ಜಯ್ಯ 84ಇಳಿವಯಸ್ಸಿನಲ್ಲೂ ಬಣ್ಣ ಹಚ್ಚಿ ಕುಣಿದಿದ್ದರು. ಸೆಪ್ಟಂಬರ್ 22 ರಂದು ನವರಾತ್ರಿಯ ಐದನೇ ದಿನ ಶಂತನು ಪಾತ್ರ ಧರಿಸಿ ಸಂಪೂರ್ಣ ಜೀವಪುಡಿ ಆಗುವಂತೆ ಕುಣಿದು ದಣಿದಿದ್ದರು. ಅದೇ ಕೊನೆ ಮನೆಯಿಂದ ಹೊರಟವರು ಮತ್ತೆ ಯಾವುದೇ ಚಿಕಿತ್ಸೆಗೆ ಸ್ಪಂದಿಸಿಲ್ಲ.
ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಅಕ್ಟೋಬರ್ 3ರ ರಾತ್ರಿ 9.30 ಕ್ಕೆ ಕೊನೆಯುಸಿರೆಳೆದಿದ್ದಾರೆ. ಒಂದು ವಾರಗಳಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅವರ ಸಾವನ್ನು ಅರಗಿಸಿಕೊಳ್ಳಲು ಲಕ್ಷಾಂತರ ಅಭಿಮಾನಿಗಳಿಗೆ ಇನ್ನೂ ಸಾಧ್ಯವಾಗಿಲ್ಲ.

ಯಕ್ಷಗಾನದಲ್ಲಿ ಚಿಟ್ಟಾಣಿ ಘರಾನಾ ಹುಟ್ಟು ಹಾಕಿದ್ದ ರಾಮಚಂದ್ರ ಹೆಗಡೆ ಜೀವ ಪ್ರಸಂಗದ ಮಂಗಳ ಗೀತೆ ಹಾಡಿ ಹೋಗಿದ್ದಾರೆ.
ಅಂತಿಮ ದರ್ಶನ
ಇಂದು ಬೆಳಿಗ್ಗೆಯಿಂದಲೇ ಉಡುಪಿಯ ಮಣಿಪಾಲದಲ್ಲಿ ಅಭಿಮಾನಿಗಳು ಚಿಟ್ಟಾಣಿ ಯವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇನ್ನು ಚಿಟ್ಟಾಣಿ ಅವರ ದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯುವ ಮಾರ್ಗ ಮಧ್ಯೆಯೂ ಅಭಿಮಾನಿಗಳ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಸಾಲಿಗ್ರಾಮ, ಕುಂದಾಪುರ, ಬೈಂದೂರು, ಹೊನ್ನಾವರ, ಬಾಸ್ಕೆರಿ, ಕವಲಕ್ಕಿಯಲ್ಲಿ ಚಿಟ್ಟಾಣಿಯವರ ಅಂತಿಮ ದರ್ಶನ ಪಡೆಯಬಹುದಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೆರಂಗಡಿ ಗ್ರಾಮದ ಗುಡ್ಡೆಕೆರಿಯಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಅವರ ಮಕ್ಕಳು ತಿಳಿಸಿದ್ದಾರೆ.

ಡಾ. ರಾಜ್ ಕುಮಾರ್ ಮತ್ತು ಚಿಟ್ಟಾಣಿಯವರು ಪರಸ್ಪರ ಅಭಿಮಾನಿಗಳಾಗಿದ್ದರು. ಡಾ.ರಾಜ್ ಪ್ರೇರಣೆಯಂತೆ ಚಿಟ್ಟಾಣಿಯವರ ಕಣ್ಣುಗಳನ್ನು ದಾನ ಮಾಡಲಾಗಿದ್ದು, ಚಿಟ್ಟಾಣಿಯವರ ಅಂತಿಮ ಆಸೆಯನ್ನೂ ತೀರಿಸಲಾಗಿದೆ.
ಕಟ್ಟುಪಾಡು ಮೀರಿ ಶಂತನು ಪಾತ್ರದಲ್ಲಿ ಸುದೀರ್ಘ ಕುಣಿದು, ಬಯಸಿಯೇ ಸಾವನ್ನು ಬರಮಾಡಿಕೊಂಡ ಇಚ್ಛಾಮರಣಿಯಂತೆ ಚಿಟ್ಟಾಣಿ ತಮ್ಮ ಪ್ರಯಾಣ ಮುಗಿಸಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತಿಮ ಸಂಸ್ಕಾರ ನಡೆಯಲಿದೆ.












Click it and Unblock the Notifications