ಬಾಬ್ರಿ ಮಸೀದಿ: ಉಮಾಭಾರತಿ ರಾಜೀನಾಮೆ ಅಗತ್ಯವಿಲ್ಲ: ಪೇಜಾವರಶ್ರೀ
ಉಡುಪಿ, ಏಪ್ರಿಲ್ 21 : ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧ ಸಂಚು ರೂಪಿಸಿರುವ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವೆ ಉಮಾಭಾರತಿ ರಾಜೀನಾಮೆ ನೀಡಬೇಕೆಂಬ ಕಾಂಗ್ರೆಸ್ ನಾಯಕರಿಗೆ ಉಡುಪಿಯ ಪೇಜಾವರಶ್ರೀ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಈ ಬಗ್ಗೆ ಒನ್ ಇಂಡಿಯಾ ಕನ್ನಡ ಜತೆ ಮಾತನಾಡಿರುವ ಪರ್ಯಾಯ ಪೇಜಾವರ ಶ್ರೀಗಳು, ಸುಪ್ರೀಂ ಕೋರ್ಟ್ ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸದ ಕ್ರಿಮಿನಲ್ ಸಂಚು ಪ್ರಕರಣಕ್ಕೆ ಮರುಜೀವ ನೀಡಿದ್ದರ ಹಿಂದೆ ಹೋರಾಟವಿದೆಯೇ, ಹೊರತು ಯಾವುದೇ ಭ್ರಷ್ಟಾಚಾರ, ಅವ್ಯವಹಾರವಿಲ್ಲ. ಹೀಗಾಗಿ ಈ ಹಂತದಲ್ಲಿ ರಾಜೀನಾಮೆ ಅನಗತ್ಯ ಎಂದು ಪ್ರತಿಕ್ರಿಯಿಸಿದರು.[ದಲಿತನಿಗೆ ವೈಷ್ಣವ ದೀಕ್ಷೆ ನೀಡಿದ ಪೇಜಾವರಶ್ರೀ]
ಈ ಬಗ್ಗೆ ರಾಜೀನಾಮೆ ನೀಡದಂತೆ ಉಮಾಭಾರತಿ ಅವರ ಜತೆ ದೂರವಾಣಿ ಮೂಲಕ ಮಾತನಾಡುವೆ. ಉಮಾಭಾರತಿ ಮೇಲಿನ ಆರೋಪ ಸಾಬೀತಾಗಿಲ್ಲ. ವಿಚಾರಣೆ ನಡೆದು ತೀರ್ಪು ಹೊರ ಬರಬೇಕಿದೆ.
ಭ್ರಷ್ಟಾಚಾರ ಎಸಗಿದ ಹಲವಾರು ಅಧಿಕಾರದಲ್ಲಿದ್ದರು. ಆದರೆ, ಸಚಿವೆ ಉಮಾಭಾರತಿ ತನ್ನ ಮೇಲಿನ ಆರೋಪ ಸಾಬೀತಾದರಷ್ಟೇ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಬರುತ್ತದೆ. ಆಸಂದರ್ಭ ಬರಲಾರದು ಎನ್ನುವ ವಿಶ್ವಾಸವನ್ನು ಪೇಜಾವರ ಶ್ರೀಪಾದರು ವ್ಯಕ್ತಪಡಿಸಿದರು.
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧ ಸಂಚು ರೂಪಿಸಿರುವ ಆರೋಪ ಹೊತ್ತಿರುವ ಕೇಂದ್ರ ಸಚಿವೆ ಉಮಾಭಾರತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಲೋಕಸಭೆಯ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.