ಪಂಚಾಯತಿ ನಿರ್ಣಯ ಪ್ರಶ್ನಿಸಿದ್ದಕ್ಕೆ ಜಾತಿ ನಿಂದನೆ ಕೇಸ್!
ಉಡುಪಿ, ಮಾರ್ಚ್ 17; ಉಡುಪಿಯ ತೆಂಕನಿಡಿಯೂರು ಗ್ರಾಮ ಪಂಚಾಯತಿಯಲ್ಲಿ ಪಂಚಾಯತಿ ದ್ವಾರವನ್ನು ಬದಲಿಸುವ ಬಗ್ಗೆ ಆಡಳಿತ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ, ಪ್ರತಿಭಟನೆಗಳು ನಡೆದಿದ್ದವು.
ಈಗ ಪಂಚಾಯತಿ ಅಧ್ಯಕ್ಷರು ಕಾಂಗ್ರೆಸ್ ಸದಸ್ಯರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವ ಮೂಲಕ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪಂಚಾಯತಿ ಆಡಳಿತ ಬಿಜೆಪಿಗೆ ಸಿಕ್ಕಿದೆ.
ಗ್ರಾಮ ಪಂಚಾಯತಿ ಮುಖ್ಯದ್ವಾರವನ್ನು ಬದಲಿಸಿ ಬೇರೆ ಕಡೆ ಸ್ಥಳಾಂತರಿಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದೆ ಏಕಾಏಕಿ ಬದಲಿಸಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ನಾವು ಸ್ಪಷ್ಟನೆ ಕೇಳಿದರೂ ಆಡಳಿತ ಪಕ್ಷದಿಂದ ಯಾವುದೇ ಸೂಕ್ತ ಉತ್ತರ ಸಿಕ್ಕಿರಲಿಲ್ಲ ಎಂಬುದು ಕಾಂಗ್ರೆಸ್ ಆರೋಪ.

ಈ ವಿಷಯದ ಬಗ್ಗೆ ಪಂಚಾಯತಿಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಯನ್ನು ಮಾಡಿದ್ದರು. ವಿರೋಧ ಪಕ್ಷದ ಸದಸ್ಯರ ಗಮನಕ್ಕೆ ತಾರದೆ ಮುಖ್ಯದ್ವಾರ ಬದಲಿಸಿದರ ಔಚಿತ್ಯವನ್ನು ಪ್ರಶ್ನಿಸಿದ್ದಕ್ಕೆ ನಮ್ಮ ವಿರುದ್ಧ ಜಾತಿ ನಿಂದನೆ ಕೇಸು ದಾಖಲಿಸಿರುವುದು ಅತ್ಯಂತ ಖಂಡನೀಯ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
ಪಂಚಾಯತಿ ಅಧ್ಯಕ್ಷರು ಎಸ್ಟಿ ಸಮುದಾಯಕ್ಕೆ ಸೇರಿದವರಾಗಿದ್ದು ಇದು ಬಹಳ ಸಂತೋಷದ ವಿಷಯ. ನಾವು ಅವರಿಗೆ ಕೊಡುವ ಗೌರವವನ್ನು ಕೊಡುತ್ತೇವೆ. ಆದರೆ ಪಂಚಾಯತಿ ಆಂತರಿಕ ವಿಷಯದ ಬಗ್ಗೆ ವಿರೋಧ ಪಕ್ಷದ ಸದಸ್ಯರು ಮಾತನಾಡಿದ್ದಕ್ಕೆ ಈ ರೀತಿ ಕೇಸ್ ಹಾಕಿರುವುದನ್ನು ನಾವು ಖಂಡಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಅಧ್ಯಕ್ಷರು ಸ್ಪಷ್ಟೀಕರಣ ನೀಡಬೇಕು, ಕೇವಲ ಐದು ಮಂದಿ ಗ್ರಾಮ ಪಂಚಾಯತಿ ಸದಸ್ಯರ ವಿರುದ್ಧ ಮಾತ್ರ ಅಲ್ಲದೆ, ಕೆಲವು ಗ್ರಾಮಸ್ಥರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈ ನಿರ್ಧಾರದ ವಿರುದ್ಧ ನಾವು ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ತೆಂಕನಿಡಿಯೂರು ಪಂಚಾಯತ್ ಕಾಂಗ್ರೆಸ್ ಸದಸ್ಯರು ಹೇಳಿದ್ದಾರೆ.












Click it and Unblock the Notifications