ಖಿನ್ನತೆಗೆ ಒಳಗಾಗಿ ಉಡುಪಿಯಲ್ಲಿ ಸಹಾಯಕ ಪಾದ್ರಿ ಆತ್ಮಹತ್ಯೆ
ಉಡುಪಿ, ಅಕ್ಟೋಬರ್ 12: ಖಿನ್ನತೆಯಿಂದಾಗಿ ಉಡುಪಿಯ ಶಿರ್ವ ಡೋನ್ ಬಾಸ್ಕೊ ಶಾಲೆಯ ಪ್ರಾಂಶುಪಾಲ ಮಹೇಶ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ತಮ್ಮ ಶಾಲೆಯ ಕ್ಯಾಬಿನ್ ಒಳಗೆ ಶುಕ್ರವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಸಹಾಯಕ ಪಾದ್ರಿಯೂ ಆಗಿದ್ದ ಮಹೇಶ್ ಅವರಿಗೆ ಮೂವತ್ತಾರು ವರ್ಷ ವಯಸ್ಸಾಗಿತ್ತು. ಉಡುಪಿ ಧರ್ಮಪ್ರಾಂತ್ಯ ಉದಯದ ಬಳಿಕ ಮೊದಲ ಧರ್ಮಗುರು ಆಗಿದ್ದ ಮಹೇಶ್ ಡಿಸೋಜಾ ಮೂಲತಃ ಮೂಡಬೆಳ್ಳೆಯವರು.
ಆರು ವರ್ಷಗಳ ಹಿಂದೆ, ಅಂದರೆ 2013ರಲ್ಲಿ ಅವರು ಗುರು ದೀಕ್ಷೆ ಪಡೆದಿದ್ದರು. ಮಾನಸಿಕ ಖಿನ್ನತೆಯಿಂದ ಬಳಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಶಂಕೆ ವ್ಯಕ್ತಪಡಿಸಿದ್ದಾರೆ. ಶಿರ್ವದ ಡಾನ್ ಬಾಸ್ಕೊ ಶಾಲೆ ಶಿರ್ವ ಆರೋಗ್ಯ ಮಾತಾ ಇಗರ್ಜಿ ಆಡಳಿತಕ್ಕೆ ಒಳಪಟ್ಟಿದೆ. ಶಾಲೆಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಮಹೇಶ್ ಡಿಸೋಜಾ ತಮ್ಮ ಶಿಸ್ತಿನ ಜೀವನದಿಂದ ವಿದ್ಯಾರ್ಥಿಗಳ ಮತ್ತು ಊರವರ ಮನಸ್ಸನ್ನು ಗೆದ್ದಿದ್ದರು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಶಿರ್ವ ಠಾಣೆ ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications