ಉಡುಪಿಯಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಉದ್ಘಾಟಿಸಿದ ಅನುರಾಗ್ ಠಾಕೂರ್
ಉಡುಪಿ, ಡಿಸೆಂಬರ್ 25: ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಉಡುಪಿಯ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರವನ್ನು ಉದ್ಘಾಟಿಸಿದ್ದಾರೆ.
ಈ ಕ್ರೀಡಾ ವಿಜ್ಞಾನ ಕೇಂದ್ರವು ಕ್ರೀಡಾ ವಿಜ್ಞಾನಿಗಳು ಮತ್ತು ಕ್ರೀಡಾಪಟುಗಳನ್ನು ಒಟ್ಟುಗೂಡಿಸುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಕ್ರೀಡಾ ವಿಜ್ಞಾನ ಕೇಂದ್ರಗಳು ಬರಲಿವೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಉದ್ಘಾಟನೆ ಸಂದರ್ಭದಲ್ಲಿ ಹೇಳಿದರು.
ಹಿಂದೂ-ಮುಸ್ಲಿಂ ಮತ್ತು ಬಿಜೆಪಿ ಬಗ್ಗೆ ಹೀಗೆ ಹೇಳೋದಾ ರಾಹುಲ್ ಗಾಂಧಿ?
ಆಟಗಳನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರಕ್ಕೆ ಎಲ್ಲಾ ಸಹಾಯವನ್ನು ಒದಗಿಸಲಾಗುವುದು ಎಂದು ಅನುರಾಗ್ ಠಾಕೂರ್ ಭರವಸೆ ನೀಡಿದರು. ಕಾರ್ಯಕ್ರಮದ ನಂತರ ಆಟಗಾರರೊಂದಿಗೆ ಹೆಚ್ಚು ಸಮಯ ಕಳೆಯುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಿಂದಲೂ ಅವರ ನಿರೀಕ್ಷೆಗಳನ್ನು ತಿಳಿಯಲು ಅವರೊಂದಿಗೆ ಸಂವಾದ ನಡೆಸಿದರು. ತಮ್ಮ ಮಕ್ಕಳನ್ನು ಕ್ರೀಡಾ ಪಟುಗಳಾಗುವಂತೆ ಪ್ರೋತ್ಸಾಹಿಸುವ ಜವಾಬ್ದಾರಿ ಕೇವಲ ಸರ್ಕಾರದ ಪ್ರಯತ್ನ ಮಾತ್ರವಲ್ಲ ಪಾಲಕರಿಗೂ ಇದೆ ಎಂದು ತಿಳಿಸಿದರು.
ಎಫ್ಎಂ ರೇಡಿಯೋ ಕೇಂದ್ರ ಆರಂಭಿಸಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಮಾನ್ಯ ಸಚಿವರು, ಮುಂದಿನ ನಾಲ್ಕು ತಿಂಗಳಲ್ಲಿ ಇದೇ ಆರ್ಥಿಕ ವರ್ಷದಲ್ಲಿ ಎಫ್ಎಂ ಕೇಂದ್ರದ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸುವುದಾಗಿ ಭರವಸೆ ನೀಡುವುದಾಗಿ ಹೇಳಿದರು. ರಾಜ್ಯಾದ್ಯಂತ ವಿಜ್ಞಾನ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎರಡು ವರ್ಷಗಳಲ್ಲಿ ಅನೇಕ ಕ್ರೀಡಾಪಟುಗಳು ಸಿದ್ಧರಾಗುತ್ತಾರೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಈ ಆರ್ಥಿಕ ವರ್ಷದಲ್ಲಿ ಬ್ರಹ್ಮಾವರದಲ್ಲಿ ಎಫ್ಎಂ ಕೇಂದ್ರವನ್ನು ಸ್ಥಾಪಿಸುವ ಭರವಸೆ ನೀಡಿದ ಸಚಿವರಿಗೆ ಅವರು ಧನ್ಯವಾದ ಹೇಳಿದರು. ಈ ರೀತಿಯ ಕ್ರೀಡಾ ಮತ್ತು ವಿಜ್ಞಾನ ಕೇಂದ್ರಗಳನ್ನು ಉತ್ತರ ಕರ್ನಾಟಕದಲ್ಲಿ ಪ್ರಾರಂಭಿಸಬೇಕು ಎಂದು ಕರ್ನಾಟಕ ಯುವ ಸಬಲೀಕರಣ ಸಚಿವರು ಹೇಳಿದರು. ಉಡುಪಿ ಶಾಸಕ ರಘುಪತಿ ಭಟ್ ಉಡುಪಿ ಡಿಸಿ ಕೂರ್ಮಾ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಒಟ್ಟು 8 ಜಿಲ್ಲೆಗಳಿಗೆ ತಲಾ ಒಂದರಂತೆ ಇನ್ನೂ 6ರಿಂದ 7 ಕ್ರೀಡಾ ವಿಜ್ಞಾನ ಕೇಂದ್ರಗಳನ್ನು ಮಂಜೂರು ಮಾಡುವಂತೆ ರಾಜ್ಯ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣ ಗೌಡ ಅವರು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಸಚಿವ ಅನುರಾಗ್ಸಿಂಗ್ ಠಾಕೂರ್, ಭಾರತದ ಕ್ರೀಡಾ ಪ್ರಾಧಿಕಾರಿದೊಂದಿಗೆ ಸಮಾಲೋಚಿಸಿ ಈ ಬಗ್ಗೆ ನಿರ್ಧರಿಸುವುದಾಗಿಯೂ ತಿಳಿಸಿದರು.