ಮಲ್ಪೆಯ ಮೀನುಗಾರಿಕಾ ಬೋಟ್ ಮುಳುಗಡೆ:7 ಮೀನುಗಾರರ ರಕ್ಷಣೆ
ಉಡುಪಿ, ಏಪ್ರಿಲ್ 10: ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಮೀನುಗಾರರ ನಾಪತ್ತೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ.
ಮಲ್ಪೆಯ ಬಂದರಿನ ಮೀನುಗಾರಿಕಾ ದೋಣಿಯೊಂದು ಮಹಾರಾಷ್ಟ್ರದ ದೇವಗಡ ಸಮೀಪದ ಆಳ ಸಮುದ್ರದಲ್ಲಿ ಅಪಘಾತಕ್ಕೀಡಾಗಿದೆ. ಈ ಅವಘಡದಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ.
ಪಡುತೋನ್ಸೆ ಬೆಂಗ್ರೆ ಹೂಡೆಯ ದಿನೇಶ್ ತಿಂಗಳಾಯ ಎಂಬುವವರಿಗೆ ಸೇರಿದ ಶಿವರಕ್ಷ ಹೆಸರಿನ ಆಳಸಮುದ್ರ ಬೋಟ್ ಅಪಘಾತಕ್ಕೀಡಾಗಿದ್ದು, ಬೋಟ್ ನಲ್ಲಿದ್ದ ಭಟ್ಕಳದ ಮೀನುಗಾರರಾದ ಸುನೀಲ್ ಮಂಜುನಾಥ್, ಸುರೇಶ್ ಮಂಜುನಾಥ್, ಜಗನ್ನಾಥ ರಾಮ, ಪ್ರಶಾಂತ್ ಮೂಡಗಿ, ಗಜೇಂದ್ರ ಪಾಂಡುರಂಗ, ಕೃಷ್ಣ ಮೊಗೇರ, ಲೋಹಿತ್ ಧರ್ಮ ಎಂಬುವವರನ್ನು ರಕ್ಷಿಸಲಾಗಿದೆ.

ಏಪ್ರಿಲ್ 06ರಂದು ರಾತ್ರಿ ಮಲ್ಪೆ ಬಂದರಿನಿಂದ ಹೊರಟ ಶಿವರಕ್ಷ ಮೀನುಗಾರಿಕಾ ಬೋಟ್ ಮಹಾರಾಷ್ಟ್ರದ ರತ್ನಗಿರಿ ಸಮೀಪ ಸುಮಾರು 42 ನಾಟಿಕಲ್ ಮೈಲ್ಸ್ ದೂರದಲ್ಲಿ ಮೀನುಗಾರಿಕೆ ನಡೆಸುತಿತ್ತು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಬೋಟಿನ ಕೆಳಭಾಗಕ್ಕೆ ಯಾವುದೋ ವಸ್ತು ಡಿಕ್ಕಿ ಹೊಡೆದು ನೀರು ಬೋಟಿನೊಳಗೆ ಬರಲು ಆರಂಭಿಸಿತ್ತು. ಕೂಡಲೇ ಬೋಟಿನಲ್ಲಿದ್ದ ಮೀನುಗಾರರು ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇತರ ಬೋಟಿನವರಿಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಮೀಪದಲ್ಲಿದ್ದ ಶಿವತೇಜಸ್ ಹೆಸರಿನ ಬೋಟ್ ನ ಮೀನುಗಾರರು ಮುಳುಗುತ್ತಿದ್ದ ಶಿವರಕ್ಷ ಬೋಟಿನಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ. ಈ ಮಧ್ಯೆ ದೇವಗಡ ಸಮೀಪ ಬೋಟನ್ನು ಎಳೆದು ತರುತ್ತಿದ್ದಾಗ ಶಿವರಕ್ಷ ಬೋಟ್ ಸಂಪೂರ್ಣ ಮುಳುಗಡೆಗೊಂಡಿತು ಎಂದು ಹೇಳಲಾಗಿದೆ.












Click it and Unblock the Notifications