ಪೆರ್ಡೂರು ಡ್ರೈವರ್ ಅನಿಲ್ ಕೊಲೆ ಪ್ರಕರಣ: ಮಾಜಿ ಸಚಿವರ ಮೇಲೆ ಆರೋಪಗಳ ಸುರಿಮಳೆ
ಉಡುಪಿ, ಸೆಪ್ಟೆಂಬರ್.18: ಅಡುಗೆ ಎಣ್ಣೆ ಸಾಗಿಸುವ ಕಾರ್ಗೋ ವಾಹನದ ಡ್ರೈವರ್ ಅನಿಲ್ ಕೊಲೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಮಂಗಳೂರಿನಿಂದ ಬೆಂಗಳೂರಿಗೆ ಅಡುಗೆ ಎಣ್ಣೆ ಕೊಂಡೊಯ್ಯುತ್ತಿದ್ದ ಚಾಲಕ ಅನಿಲ್ ನಾಪತ್ತೆಯಾಗಿದ್ದ.
ಈ ನಾಪತ್ತೆ ಪ್ರಕರಣದ ಬಗ್ಗೆ ನಾನಾ ಊಹಾಪೋಹಗಳು ಹಬ್ಬಿತ್ತು. ಇದೀಗ ಆತನ ಶವ ಕೊಲೆಗೈದ ಸ್ಥಿತಿಯಲ್ಲಿ ಬೆಂಗಳೂರು ಹೊರವಲಯದ ರಾಮನಗರದ ಕುಂಬಳಗೋಡು ಎಂಬಲ್ಲಿ ಪತ್ತೆಯಾಗಿದೆ. ಈ ಕೊಲೆಯ ಹಿನ್ನೆಲೆಯಲ್ಲಿ ಮೃತನ ಮನೆಯವರು ಮಾಜಿ ಸಚಿವ ಅಭಯ ಚಂದ್ರ ಜೈನ್ ಮೇಲೆ ಆರೋಪಗಳ ಸುರಿಮಳೆ ಗೈದಿದ್ದಾರೆ.
ಅನಿಲ್ ಉಡುಪಿಯ ಪೆರ್ಡೂರು ಮೂಲದವನು. ಪೊಲೀಸ್ ಮಾಹಿತಿಯ ಪ್ರಕಾರ ಮೂವರು ದುಷ್ಕರ್ಮಿಗಳು ಈತನನ್ನು ಕೊಂದು ಶವವನ್ನು ತಮ್ಮ ಮನೆಯ ಪಕ್ಕದ್ದಲ್ಲೇ ಹೂತು ಹಾಕಿದ್ದರು. ಆರೇಳು ಲಕ್ಷ ಮೌಲ್ಯದ ಅಡುಗೆ ಎಣ್ಣೆಯನ್ನು ಮತ್ತು ಅನಿಲ್ ಬಳಿ ಇದ್ದ ಹಣವನ್ನು ದರೋಡೆ ಮಾಡಿ ಕೊಲೆಗೈದಿದ್ದರು.
ಇದೇ ಆರೋಪದಲ್ಲಿ ಇದೀಗ ಮೂವರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಮೃತ ಅನಿಲ್ ನ ಶವವನ್ನು ಮೇಲಕ್ಕೆತ್ತಿ ಉಡುಪಿ ಜಿಲ್ಲೆಯ ಪೆರ್ಡೂರಿಗೆ ತಂದು ಶವ ಸಂಸ್ಕಾರ ಮಾಡಲಾಗಿದೆ. ಆದರೆ ಪೆರ್ಡೂರನಲ್ಲಿರುವ ಅನಿಲ್ ಪೋಷಕರು ಮಾಜಿ ಸಚಿವ ಅಭಯಚಂದ್ರ ಜೈನ್ ಅವರನ್ನು ಈ ಸಾವಿಗೆ ಹೊಣೆಯಾಗಿಸಿದ್ದಾರೆ.
ಅಭಯಚಂದ್ರ ಜೈನ್ ರಿಗೆ ಸೇರಿದ ಸುಗಮ ಕಂಪೆನಿಯ ಮಹಾವೀರ ಟ್ರಾವೆಲ್ಸ್ ನಲ್ಲಿ ಅನಿಲ್ ಚಾಲಕನಾಗಿದ್ದ. ಈತ ಕಾಣೆಯಾದಾಗ ಟ್ರಾವೆಲ್ಸ್ ಮಾಲೀಕರು ಕನಿಷ್ಠ ದೂರು ಕೂಡ ನೀಡಿಲ್ಲ. ಸತ್ತಾಗ ಮನೆಗೆ ಭೇಟಿ ನೀಡುವ ಸೌಜನ್ಯವನ್ನೂ ತೋರಿಲ್ಲ. ಬದಲಾಗಿ ತಮ್ಮ ಮಗ ಅನಿಲ್, ಮಾಲು ಕದ್ದು ಪರಾರಿಯಾಗಿದ್ದಾನೆ ಎಂದು ತನಿಖೆಯ ದಿಕ್ಕುತಪ್ಪಿಸಿದ್ದಾರೆ.
ಇದೇ ಆರೋಪದಲ್ಲಿ ಆತನನ್ನು ಬಂಧಿಸಿ, ಲಾಕಪ್ ಡೆತ್ ಮಾಡಿಸಿರುವ ಸಾಧ್ಯತೆಯೂ ಇದೆ ಎಂದು ಅನಿಲ್ ತಂದೆ ಮತ್ತು ಬಂಧುಗಳು ಆರೋಪಿಸಿದ್ದಾರೆ. ಮುಂದೆ ಓದಿ...

ಪೊಲೀಸ್ ಮೂಲಗಳು ಹೇಳುವುದೇನು?
ಆರೋಪಿಗಳೆಲ್ಲರೂ ಈ ಹಿಂದೆ ಸುಗಮ ಕಂಪೆನಿಯಲ್ಲೇ ಚಾಲಕರಾಗಿದ್ದು, ಅನಿಲ್ ಗೂ ಪರಿಚಿತರಾಗಿದ್ದಾರೆ. ಅನಿಲ್ ಗೆ ಇವರ ಜೊತೆ ವ್ಯವಹಾರವಿದ್ದು, ಹಣದಾಸೆಗೆ ಕೊಲೆ ಮಾಡಿದ್ದಾರೆ ಎನ್ನುತ್ತವೆ ಪೊಲೀಸ್ ಮೂಲಗಳು.
ಅಗಸ್ಟ್ 28 ರಂದು 7 ಲಕ್ಷಕ್ಕೂ ಅಧಿಕ ಮೌಲ್ಯದ ಅಡುಗೆ ಅಯಿಲ್ ತುಂಬಿದ ಲಾರಿ ಹತ್ತಿ ಬೆಂಗಳೂರು ಹೊರಟಿದ್ದ. ಆದ್ರೆ ಆತ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆ ಹಾರ ದಾಟಿದ ಮೇಲೆ ಯಾರ ಸಂಪರ್ಕ ಸಿಗದೇ ಹೋಗಿದ್ದ.

ದೂರು ನೀಡಿದ್ದ ಪೋಷಕರು, ಕಂಪನಿ ಮಾಲೀಕರು
ಅನಿಲ್ ಸುಳಿವು ಸಿಗದೇ ಹೋದಾಗ ಕುಟುಂಬದ ಸದಸ್ಯರು ಹೆಬ್ರಿ ಠಾಣೆಗೆ ದೂರು ನೀಡಿದ್ದರೆ, ಅಡುಗೆ ಅಯಿಲ್ ಕಂಪೆನಿಯ ಮಾಲೀಕರು ಪಣಂಬೂರು ಠಾಣೆಗೆ ದೂರು ನೀಡಿದ್ದರು.ಇದೇ ದೂರಿನ ಆಧಾರದಲ್ಲಿ ಪಣಂಬೂರು ಪೊಲೀಸರು ತನಿಖೆ ನಡೆಸಿದ್ದಾರೆ. 20 ದಿನಗಳ ಬಳಿಕ ಅನಿಲ್ ಮೃತ ದೇಹ ರಾಮನಗರದ ಕುಂಬಳಗೋಡುವಿನಲ್ಲಿ ಪತ್ತೆಯಾಗಿದೆ.
ಜೊತೆಗೆ ಕೆಲಸ ಮಾಡುತ್ತಿದ್ದ ಡ್ರೈವರ್ ಹಾಗೂ ಆತನ ಸಂಬಂಧಿ ಗಳು ಸೇರಿ ಕೊಲೆ ನಡೆಸಿ ಪ್ಲಾಸ್ಟಿಕ್ ಸುತ್ತಿ ಹೂತು ಹಾಕಿದ್ದಾರೆ ಎನ್ನುವುದು ಪೊಲೀಸ್ ಮೂಲಗಳು ನೀಡುವ ಮಾಹಿತಿ.

ಇದು ಮನೆಯವರ ಆರೋಪ
ರಾಮನಗರದಲ್ಲಿ ಪತ್ತೆಯಾದ ಅನೀಲ್ ಮೃತ ದೇಹ ಮರಣೋತ್ತರ ಪರೀಕ್ಷೆ ಒಳಪಡಿಸಿದ ನಂತರ ಪಾರ್ಥಿವ ಶರೀರವನ್ನು ಮನೆಯವರಿಗೆ ಹಸ್ತಾಂತರ ಮಾಡಿದ್ದಾರೆ. 20 ದಿನದ ಬಳಿಕ ಮಗನ ಮೃತ ದೇಹಕ್ಕೆ ಅಂತಿಮ ವಿಧಿವಿಧಾನ ಜೊತೆ ಅಂತ್ಯ ಸಂಸ್ಕಾರ ನಡೆಸಿದ್ದಾರೆ.
ಆದ್ರೆ ಸಾವಿನ ಹಿಂದೆ ಮಹಾವೀರ ಟ್ರಾವೆಲ್ಸ್ ಮಾಲೀಕ ಮಾಜಿ ಸಚಿವ ಅಭಯ ಚಂದ್ರ ಜೈನ್ ಕೈವಾಡವಿದೆ ಎಂದು ಅನಿಲ್ ಮನೆ ಮಂದಿ ಆರೋಪಿಸಿದ್ದಾರೆ. ಮಗ ನಾಪತ್ತೆ ಯಾದಾಗ ಅಭಯ್ ಚಂದ್ರ ಜೈನ್ ದೂರು ನೀಡಬೇಕಿತ್ತು. ಆದರೆ ದೂರು ನೀಡಿಲ್ಲ. ಬದಲಾಗಿ ಮಗನನ್ನೇ ಕಳ್ಳನಂತೆ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ.
ಸಾವಿನ ನಂತರ ಮನೆಗೆ ಭೇಟಿ ಕೊಡುವ ಸೌಜನ್ಯವನ್ನೂ ಮಾಜಿ ಸಚಿವರು ತೋರಿಲ್ಲ. ಹಾಗಾಗಿ ಸಾವಿನ ಹಿಂದೆ ಅಭಯ ಕಾಣದ ಕೈ ಕೆಲಸ ಮಾಡಿದೆ. ಕೊಲೆಗಾರರ ರಕ್ಷಣೆಗೆ ಅಭಯ್ ಚಂದ್ರ ಜೈನ್ ಅಭಯ ನೀಡಿದ್ದಾರೆ ಮನೆ ಮಂದಿ ಆರೋಪಿಸಿದ್ದಾರೆ.

ನಿಗೂಢವಾದ ಕೊಲೆ ಪ್ರಕರಣ
ಕೊಲೆಗಾರರು ಹಣ ಹಾಗೂ ಅಯಿಲ್ ದೋಚುವಾಸೆ ಯಿಂದ ಕೊಲೆ ಮಾಡಿದರೆ? ಅಥವಾ ಮತ್ತೆನಾದ್ರೂ ಸಾವಿನ ಹಿಂದೆ ರಹಸ್ಯ ಅಡಗಿದೆಯೇ ಅನ್ನುವುದು ಮಾತ್ರ ನಿಗೂಢವಾಗಿದೆ. ಸರಿಯಾದ ದಿಕ್ಕಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದರೆ ಅನಿಲ್ ಕೊಲೆಯ ಸತ್ಯ ಹೊರಬರಬಹುದು.












Click it and Unblock the Notifications