ಉಡುಪಿ: ಅದಾನಿ ಗ್ರೂಪ್ಗೆ 52 ಕೋಟಿ ದಂಡ
ಉಡುಪಿ, ಜೂ. 4: ಪರಿಸರಕ್ಕೆ ಹಾನಿ ಮಾಡಿದ ಆರೋಪದ ಮೇಲೆ ಉಡುಪಿಯಲ್ಲಿರುವ ಗೌತಮ್ ಅದಾನಿಗೆ ಸೇರಿದ ಯುಪಿಸಿಎಲ್ಗೆ ಚೆನ್ನೈನ ಹಸಿರು ದಕ್ಷಿಣ ವಲಯದ ಪೀಠವು 52 ಕೋಟಿ ರುಪಾಯಿ ದಂಡ ವಿಧಿಸಿದೆ.
ಉಡುಪಿಯ ಪಡುಬಿದ್ರೆ ಸಮೀಪದ ಎಲ್ಲೂರು ಗ್ರಾಮದಲ್ಲಿರುವ ಗೌತಮ್ ಅದಾನಿ ಒಡೆತನದ ಕಲ್ಲಿದ್ದಲ್ಲುಆಧಾರಿತ ಉಷ್ಣ ವಿದ್ಯುತ್ ಸ್ಥಾವರದಿಂದ ಸುಮಾರು 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪರಿಸರಕ್ಕೆ ಹಾನಿಯಾಗಿರುವುದು ದೃಢವಾದ ಹಿನ್ನೆಲೆಯಲ್ಲಿ ಹಸಿರು ಪೀಠ ಈ ದಂಡ ವಿಧಿಸಿದೆ.
ಎಲ್ಲೂರಿನ (ಯುಪಿಸಿಎಲ್) ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಕಾರ್ಖಾನೆಯಿಂದ ಸುತ್ತಮುತ್ತಲಿನ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪಾರಿಣಾಮ ಉಂಟಾಗಿದೆ ಎಂದು ಜನ ಜಾಗೃತಿ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ಪೀಠ ತೀರ್ಪು ನೀಡಿದ್ದು, 52,02,50,000 ರುಪಾಯಿ ದಂಡ ಕಟ್ಟುವಂತೆ ತಿಳಿಸಿದೆ.

ನ್ಯಾಯಲಯದಲ್ಲಿ ಈ ಪ್ರಕರಣ 2005ರಿಂದಲೂ ವಿಚಾರಣೆಯಲ್ಲಿ ಇತ್ತು. ದೀರ್ಘ ವಿಚಾರಣೆ ಮಾಡಿದ ನಂತರ ಹಸಿರು ಪೀಠ ತೀರ್ಪು ನೀಡಿತು. ಕಂಪೆನಿಯಿಂದ 10 ಕಿಮೀಯಲ್ಲಿ ಹಾನಿಯಾಗಿರುವುದು ಕಂಡು ಬಂದಿದ್ದು, ಸದರಿ ಪರಿಹಾರದ ನಷ್ಟ ಭರಿಸುವಂತೆ ಅದು ಸೂಚಿಸಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆಗೆ ನಿರ್ದೇಶನ ನೀಡಿದ್ದು, ಕಾರ್ಖಾನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಂಟಾಗಿರುವ ಬೆಳೆ ಹಾನಿ ಸಮೀಕ್ಷೆ ನಡೆಸಿ ಬೆಳೆ ಹಾನಿಗೊಳಲಾಗಿರುವ ರೈತರಿಗೆ ನಷ್ಟ ಪರಿಹಾರ ನೀಡುವಂತೆ ಸೂಚನೆ ನೀಡಿದೆ.
ಪರಿಹಾರ ಹಣದ ಶೇ. 50ರಷ್ಟು ಹಣವನ್ನು ಪರಿಸರದ ಮೂಲಸೌಕರ್ಯ ಸುಧಾರಣೆಗೆ ಬಳಸಬೇಕು. ಮುಖ್ಯವಾಗಿ ನೀರು ಪೂರೈಕೆ, ಚರಂಡಿ, ಎಸ್ಟಿಪಿ, ಘನತ್ಯಾಜ್ಯ ವಿಲೇವಾರಿ, ಆರೋಗ್ಯ, ಸೌಲಭ್ಯ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಬೇಕು. ಮಧ್ಯಂತರ ಆದೇಶದ ಅನ್ವಯ ಯುಪಿಸಿಎಲ್ ಈಗಾಗಲೇ 5 ಕೋಟಿ ನಿಡಿದೆ. ಉಳಿದ ಹಣ ಮುಂದಿನ ಮೂರು ತಿಂಗಳಲ್ಲಿ ಪಾವತಿಸಬೇಕು ಎಂದು ಎನ್ಜಿಟಿ ಹೇಳಿದೆ.

ಕಲ್ಲಿದ್ದಲ್ಲು ಘಟಕಗಳಿಂದ 2010ರಿಂದ 2020ರವರೆಗೆ ಅವಧಿಯಲ್ಲಿ ಕಾರ್ಖಾನೆ ಸುತ್ತಮುತ್ತಲು ಜನರ ಆರೋಗ್ಯದ ಮೇಲೆ ಉಂಟಾಗಿರುವ ಗಂಭೀರ ಪರಿಣಾಮಗಳ ಕುರಿತು ಪರಿಶೀಲನೆ ನಡೆಸಿ ಈಚೆಗೆ ತಜ್ಞರ ಸಮಿತಿ ವರದಿ ಸಲ್ಲಿಸಿತ್ತು. ಕಾರ್ಖಾನೆ ನಿರ್ದಿಷ್ಟಪ್ರದೇಶದ ವ್ಯಾಪ್ತಿಯಲ್ಲಿ ಜನರಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಳವಾಗಿರುವ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications