ಮಾಡದ ತಪ್ಪಿಗೆ ಜೈಲು ಶಿಕ್ಷೆ : ಪ್ರಾಮಾಣಿಕತೆ ಪರೀಕ್ಷೆಗೆ ದೇವರಿಗೆ ಮೊರೆ
ಉಡುಪಿ, ಮಾರ್ಚ್ 24 : ತಾನು ನಿರಪರಾಧಿ ಎಂದು ಇಲ್ಲೊಬ್ಬ ವ್ಯಕ್ತಿ ದೇವರಿಗೆ ಉಯಿಲು ಕೊಟ್ಟಿದ್ದಾನೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಈ ಗಮನ ಸೆಳೆಯುವ ಘಟನೆ ನಡೆದಿದೆ.
ಕಳೆದ ಎರಡು ತಿಂಗಳ ಹಿಂದೆ ಪರಸ್ಪರ ಅನ್ಯ ಕೋಮಿನವರಿಗೆ ಸೇರಿದ ನಾಲ್ಕೈದು ಬೈಕುಗಳನ್ನು ಅದ್ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟಿದ್ದರು. ಈ ಪ್ರಕರಣದಲ್ಲಿ ಗಂಗೊಳ್ಳಿಯ ಗುರುರಾಜ್ ಖಾರ್ವಿ ಎಂಬಾತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಈತನ ಬಂಧನವಾದ ನಂತ್ರ, ಗುರುರಾಜ್ ನಿರಪರಾಧಿ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಮತ್ತು ಆತನ ಬಂಧುಗಳಿಂದ ಕೇಳಿಬಂದಿತ್ತು.
ಬಂಧಿತನಾದ ಕಾರಣ ಎರಡು ತಿಂಗಳ ಕಾಲ ಜೈಲಿನಲ್ಲಿದ್ದ ಗುರುರಾಜ ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದಿದ್ದ. ಜೈಲಿನಿಂದ ಹೊರ ಬಂದ ಮೇಲೆ ತಾನೇನು ತಪ್ಪು ಮಾಡಿಲ್ಲ ಎಂದು ಆತ ಎಲ್ಲರ ಬಳಿ ಹೇಳಿಕೊಂಡಿದ್ದ. ಆಗ ಆತನ ಸ್ನೇಹಿತರು ಹಾಗೂ ಊರಿನವರು ಈ ಬಗ್ಗೆ ದೇವರ ಮೊರೆಯಿಡಲು ಸೂಚಿಸಿದ್ದಾರೆ.
ನಾನು ನಿರಪರಾಧಿ ಎಂದು ಸಾಬೀತು ಮಾಡಲು ಗುರುರಾಜ್, ತನ್ನ ಸ್ನೇಹಿತರ ಜೊತೆ ಬರೋಬ್ಬರಿ 35 ಕಿಲೋಮೀಟರ್ ದೂರದ ದೇವಸ್ಥಾನಕ್ಕೆ ಪಾದಯಾತ್ರೆ ಮಾಡಿದ್ದಾನೆ. ಇವರ್ಯಾರೂ ಹರಕೆ ಹೊತ್ತು ಹೊರಟಿದ್ದಲ್ಲ. ದೇವರ ಬಳಿ ದೂರು ನೀಡಲು 35 ಕಿಲೋಮೀಟರ್ ದೂರದಲ್ಲಿರುವ ಮಾರಣಕಟ್ಟೆ ದೇವಸ್ಥಾನಕ್ಕೆ ತಲುಪಿದ್ದಾರೆ. ಇಲ್ಲಿನ ಬ್ರಹ್ಮಲಿಂಗೇಶ್ವರ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಮಾಡದ ತಪ್ಪಿಗೆ ಆರೋಪ ಬಂದಾಗ ಅದೆಷ್ಟೋ ಮಂದಿ ಇಲ್ಲಿ ಬಂದು ದೂರು ನೀಡಿ ತಮ್ಮ ನಿರಪರಾಧಿತ್ವವನ್ನು ತೋರಿಸಿದವರಿದ್ದಾರೆ. ಗುರುರಾಜ್ ಕೂಡ ತನ್ನ ಬಳಗದವರ ಜೊತೆ ಇಲ್ಲಿಗೆ ಬಂದು, ಈ ಮೂಲಕ ತನ್ನ ಪ್ರಾಮಾಣಿಕತೆ ಪರೀಕ್ಷೆಗೆ ಒಡ್ಡಿದ್ದಾನೆ ಎಂದು ಆತನ ಸ್ನೇಹಿತರು ಹೇಳುತ್ತಾರೆ. ಈತನ ವಾದಕ್ಕೆ ಸ್ಥಳೀಯ ಬಿಜೆಪಿ ಬೆಂಬಲ ನೀಡಿದೆ. ತನ್ನ ಮೇಲೆ ಹಾಕಿರುವ ಆರೋಪ ಕೇವಲ ರಾಜಕೀಯ ಕುತಂತ್ರ ಎಂದು ಗುರುರಾಜ್ ತಿಳಿಸಿದ್ದಾನೆ.