ವೃದ್ದೆಯ ಮಾನವೀಯತೆಯ ಪರಾಕಾಷ್ಠೆ: ಭಿಕ್ಷೆ ಎತ್ತಿ ಬಂದ ಲಕ್ಷ ರೂಪಾಯಿಯನ್ನು ಈಕೆ ಮಾಡಿದ್ದೇನು ಗೊತ್ತೇ?
ಉಡುಪಿ, ಫೆ 5: ಸ್ವತಃ ತನ್ನ ಕುಟುಂಬ ಬಡತನದಲ್ಲಿ ಇದ್ದರೂ, ಜಿಲ್ಲೆಯ ಹಲವು ಕಡೆ ಭಿಕ್ಷೆ ಎತ್ತುವ ಈ ಎಂಬತ್ತರ ವೃದ್ದೆ ಭಿಕ್ಷಾಟನೆಯಲ್ಲಿ ಬರುವ ದುಡ್ಡನ್ನು ಬಳಸಿಕೊಳ್ಳುವುದು ಮಾತ್ರ ಸಾಮಾಜಿಕ ಕೆಲಸಕ್ಕೆ.
ಈಕೆಯ ಹೆಸರು ಅಶ್ವಥಮ್ಮ, ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಬಳಿಯ ಕಂಚುಗೋಡು ಮೂಲದವರು. ಅಯ್ಯಪ್ಪನ ಪರಮಭಕ್ತೆ, ವರ್ಷ ಪೂರ್ತಿ, ಜಿಲ್ಲೆಯ ವಿವಿದೆಡೆ ಭಿಕ್ಷಾಟನೆ ಮಾಡಿ ಸಂಗ್ರಹಿಸುವ ಹಣವನ್ನು ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ದಾನವಾಗಿ ನೀಡುತ್ತಾ ಬರುತ್ತಿದ್ದಾರೆ.
ತನ್ನ ಸ್ವಂತ ಕುಟುಂಬ ಬಡತನದಲ್ಲಿದ್ದರೂ ಹಣವನ್ನು ಉಳಿತಾಯ ಮಾಡಿ ದಾನ ಮಾಡುವ ಇವರ ಕಾರ್ಯ ಮಾನವ ಕುಲಕ್ಕೆ ಮಾದರಿ. 'ಭಿಕ್ಷಾಟನೆ ಅಜ್ಜಿ'ಎಂದೇ ಪ್ರೀತಿಯಿಂದ ಕರೆಯಲ್ಪಡುವ ಇವರು ಇತ್ತೀಚೆಗೆ ಒಂದು ಲಕ್ಷ ರೂಪಾಯಿ ಹಣವನ್ನು ಅನ್ನದಾನಕ್ಕಾಗಿ ನೀಡಿದ್ದಾರೆ.

ಜಿಲ್ಲೆಯ ಇತಿಹಾಸ ಪ್ರಸಿದ್ದ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅಶ್ವಥಮ್ಮ, ಒಂದು ಲಕ್ಷ ರೂಪಾಯಿಯನ್ನು ಅನ್ನದಾನ ಸೇವೆಗಾಗಿ ನೀಡಿದ್ದಾರೆ. ದೇವಾಲಯದ ಅರ್ಚಕ ವೇದಮೂರ್ತಿ ಜನಾರ್ದನ ಅಡಿಗ ಮತ್ತು ವ್ಯವಸ್ಥಾಪಕ ಕೆ.ನಾಗರಾಜ ಅವರು ವೃದ್ದೆಗೆ ದೇವರ ಪ್ರಸಾದ ನೀಡಿ ಗೌರವಿಸಿದರು.
ಈ ಹಿಂದೆ ಅಶ್ವಥ್ಥಮ್ಮ ಅವರು ಗಂಗೊಳ್ಳಿ ಸಮೀಪದ ಕಂಚಗೋಡು ದೇವಸ್ಥಾನಕ್ಕೆ 1.5 ಲಕ್ಷ ರೂ, ಪಂಪ ದೇವಸ್ಥಾನಕ್ಕೆ ಒಂದು ಲಕ್ಷ ರೂಪಾಯಿ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ 1.5 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದರು.
ಅಶ್ವಥ್ಥಮ್ಮ ದೇಶಾದ್ಯಂತ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದು, ಈ ವರ್ಷ ಅಯ್ಯಪ್ಪ ಮಾಲಾ ಧರಿಸಿದ್ದು, ಸಾಲಿಗ್ರಾಮ ದೇವಾಲಯದಲ್ಲಿ ಇರುಮುಡಿಯನ್ನು ಕಟ್ಟಿಕೊಂಡಿದ್ದಾರೆ. (ಚಿತ್ರ, ಮಾಹಿತಿ ಕೃಪೆ: ನಮ್ಮ ಕುಂದಾಪುರ ಫೇಸ್ ಬುಕ್)












Click it and Unblock the Notifications