ಉಡುಪಿ : ಪ್ರಗತಿಪರ ನಿರ್ಣಯಗಳನ್ನು ಅಂಗೀಕರಿಸಿದ 'ಧರ್ಮ ಸಂಸದ್'
ಉಡುಪಿ, ನವೆಂಬರ್ 25 : ಸಾವಿರಾರು ಸಂತರು ಸೇರಿದ್ದ ಧರ್ಮ ಸಂಸದ್ ನಲ್ಲಿ ಎರಡನೇ ದಿನವಾದ ಶನಿವಾರ (ನವೆಂಬರ್ 25) ರಂದು 10 ನಿರ್ಣಯಗಳನ್ನು ಅಂಗೀಕರಿಸಲಾಯಿತು.
In Pics:ಉಡುಪಿಯಲ್ಲಿ ಜರುಗುತ್ತಿರುವ ಧರ್ಮ ಸಂಸದ್ ಸಮ್ಮೇಳನದ ಚಿತ್ರಸಂಪುಟ
ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆ ಯ ಬಗೆಗಿನ ಕ್ರಾಂತಿಕಾರಕ ಎನ್ನಬಹುದಾದ ನಿರ್ಣಯವನ್ನು ಧರ್ಮ ಸಂಸದ್ ತೆಗೆದುಕೊಂಡಿದ್ದು, ಘರ್ ವಾಪಸಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬ ನಿರ್ಣವನ್ನೂ ಅಂಗೀಕರಿಸಿದೆ. ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಉಂಟಾಗಲು ಪೃಥ್ವಿರಾಜ್ ಮತ್ತು ಘೋರಿ ನಡುವಣ ಯುದ್ಧ ಎಂಬ ನಿರ್ಣಯಕ್ಕೆ ಬಂದಿರುವುದು ಹೊಸ ಚರ್ಚೆ ಹುಟ್ಟುಹಾಕುವ ಸಾಧ್ಯತೆ ಇದೆ.
ಹತ್ತೂ ನಿರ್ಣಯಗಳನ್ನು ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಮಂಡಿಸಿದರು. ಧರ್ಮ ಸಂಸದ್ ನಲ್ಲಿ ಅಂಗೀಕೃತಗೊಂಡ ನಿರ್ಣಯಗಳು ಇಂತಿವೆ...
1) ಹಿಂದೂ ಧರ್ಮದಲ್ಲಿ ಆರಂಭದಲ್ಲಿ ಅಸ್ಪೃಶ್ಯತೆ ಇರಲಿಲ್ಲ. ಹತ್ತನೇ ಶತಮಾನದಲ್ಲಿ ಪೃಥ್ವಿರಾಜ್ ಮತ್ತು ಘೋರಿ ನಡುವಣ ಯುದ್ಧದ ಬಳಿಕ ಮುಸ್ಲಿಮರು ಹಿಂದೂ ಧರ್ಮದ ಮೇಲೆ ಅಸ್ಪೃಶ್ಯತೆ ಹೇರಿದರು. ಅದು ಹಿಂದೂ ಧರ್ಮದ ಒಗ್ಗಟ್ಟಿಗೆ, ಏಕತೆಗೆ ತೊಡಕಾಗಿದೆ.
2) ಭಗವಂತನ ದೃಷ್ಟಿಯಲ್ಲಿ ಎಲ್ಲರೂ ಶ್ರೇಷ್ಠ. ಶ್ರೇಷ್ಠತೆ ಮತ್ತು ಜ್ಯೇಷ್ಠತೆ ಜಾತಿಯಿಂದ ಬರುವುದಿಲ್ಲ, ಭಕ್ತಿಯಿಂದ ಬರುತ್ತದೆ.
3) ಅಸ್ಪೃಶ್ಯತೆ ನಿವಾರಣೆಗಾಗಿ ದೇವಾಲಯಗಳಲ್ಲಿ ಹಿಂದೂ ಧರ್ಮದ ಎಲ್ಲರಿಗೂ ಪ್ರವೇಶ ನೀಡಬೇಕು. ಹಿಂದೂಗಳ ಮನೆಗಳಲ್ಲಿ ಎಲ್ಲರಿಗೂ ಪ್ರವೇಶ ನೀಡಬೇಕು.
4) ಹಿಂದೂ ಧರ್ಮದ ಎಲ್ಲ ಜಾತಿಯ ಜನರಿಗೂ ಒಂದೇ ಸ್ಮಶಾನ ಇರಬೇಕು. ಜಾತಿಗೊಂದು ಸ್ಮಶಾನ ಬೇಡ.
5) ಭಾರತದ ನೆಲದಲ್ಲಿ ಹುಟ್ಟಿದ ಧಾರ್ಮಿಕ ಮುಖಂಡರಿಂದ ಪ್ರವರ್ತಿತವಾದ ಎಲ್ಲ ಧರ್ಮಗಳೂ ಹಿಂದೂ ಧರ್ಮದ ಭಾಗ.
6) ವಿದೇಶಗಳಿಂದ ಬಂದವು ಮಾತ್ರ ಹಿಂದೂಯೇತರ ಧರ್ಮಗಳು.
7) ಪರಿಶಿಷ್ಟ ಜಾತಿಯ ಜನರನ್ನು ಮೇಲು ವರ್ಗದ ಜನರು ದತ್ತು ಪಡೆದು ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
8) ಧಾರ್ಮಿಕ ವಿಧಿ ವಿಧಾನಗಳಲ್ಲಿ ಎಲ್ಲ ಜಾತಿಯ ಜನರಿಗೂ ಅವಕಾಶ ನೀಡಬೇಕು.
9) ಸಂತರು, ಮಠಾಧೀಶರು, ಧಾರ್ಮಿಕ ನಾಯಕರುಗಳು ಪರಿಶಿಷ್ಟ ಜಾತಿಯ ಜನರು ವಾಸಿಸುವ ಪ್ರದೇಶದಲ್ಲಿ ಸಂಚಾರ ಮಾಡಬೇಕು.
10) ಪ್ರಲೋಭನೆ, ಆಮಿಷಗಳಿಗೆ ಒಳಗಾಗಿ ಮತಾಂತರ ಹೊಂದಿರುವ ಹಿಂದೂಗಳನ್ನು ಮರಳಿ ಕರೆತರಲು ಘರ್ ವಾಪಸಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.