ಸುಸ್ತನ್ನೂ ಲೆಕ್ಕಿಸದೆ ಸಿದ್ದಗಂಗಾ ಮಠದಲ್ಲಿ ಭಕ್ತರ ಭೇಟಿ ಮಾಡಿದ ಶಿವಕುಮಾರ ಸ್ವಾಮೀಜಿ
ಸಿದ್ದಗಂಗಾ ಶ್ರೀಗಳದು ತಾಯಿ ಕರುಳು ಎಂಬುದು ಮತ್ತೊಮ್ಮೆ ಸಾಬಿತಾಗಿದೆ. ಬೆಂಗಳೂರಿನ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಶನಿವಾರ ಮಠಕ್ಕೆ ತಲುಪಿದ ತಕ್ಷಣವೇ ಭಕ್ತರನ್ನು ಭೇಟಿ ಮಾಡಿದ್ದಾರೆ. ಅನಾರೋಗ್ಯದ ಮಧ್ಯೆಯೂ ಭಕ್ತರನ್ನು ನಿರಾಸೆಗೊಳಿಸಿಲ್ಲ
ತುಮಕೂರು, ಮೇ 13: ಅನಾರೋಗ್ಯದ ಕಾರಣಕ್ಕೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಅಲ್ಲಿಂದ ಡಿಸ್ ಚಾರ್ಜ್ ಆದ ನಂತರ ಶನಿವಾರ ಮಧ್ಯಾಹ್ನ 1.40ಕ್ಕೆ ಮಠವನ್ನು ತಲುಪಿದರು. ಹಳೆ ಮಠದ ಪ್ರವೇಶ ದ್ವಾರದಿಂದ ವ್ಹೀಲ್ ಛೇರ್ ಮೂಲಕ ಕೋಣೆಗೆ ಕರೆದೊಯ್ಯಲಾಯಿತು.
ಸ್ವಾಮೀಜಿ ಮಠಕ್ಕೆ ಹಿಂತಿರುಗಿದ ಸುದ್ದಿ ಕ್ಷಣ ಮಾತ್ರದಲ್ಲಿ ಎಲ್ಲೆಡೆ ಹಬ್ಬಿದ್ದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಕಾರಿನಿಂದ ಇಳಿಯುವ ಹೊತ್ತಿಗಾಗಲೇ ಬಹಳ ಜನ ಇದ್ದರು. ತಮ್ಮ ಆಶೀರ್ವಾದ ಪಡೆಯಲೆಂದೇ ಬಂದಿದ್ದವರಿಗೆ ಸ್ವಾಮೀಜಿ ಕೂಡ ನಿರಾಶೆಯನ್ನು ಮಾಡಲಿಲ್ಲ.[ಸಿದ್ಧಗಂಗಾ ಶ್ರೀ ಡಿಸ್ ಜಾರ್ಜ್: ಮಠದತ್ತ ಪ್ರಯಾಣ ಬೆಳೆಸಿದ ಶ್ರೀ]
ಹಳೆ ಮಠದಲ್ಲೇ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಿಸುವಂತೆ ಆಡಳಿತ ಮಂಡಳಿಗೆ ಸ್ವಾಮೀಜಿ ಹೇಳಿದರು. ಆ ನಂತರ ಸರತಿಯಲ್ಲಿ ಬಂದ ಭಕ್ತರು ದರ್ಶನ ಪಡೆದರು. ಈ ಮಧ್ಯೆ ಕಿರಿಯ ಸ್ವಾಮೀಜಿ ಸಿದ್ದಲಿಂಗಸ್ವಾಮಿ ಅವರು ಹೇಳಿಕೆ ನೀಡಿ, ಶಿವಕುಮಾರ ಸ್ವಾಮೀಜಿ ಸಂಪೂರ್ಣ ಗುಣಮುಖರಾಗಿದ್ದಾರೆ. ಆದರೂ ಒಂದು ವಾರ ವಿಶ್ರಾಂತಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.[ಸಿದ್ದಗಂಗಾಶ್ರೀಗಳಿಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ]
ಜತೆಗೆ ಅವರಿಗೆ ಯಾವುದೇ ಸೋಂಕು ತಗುಲದಂತೆ ಎಚ್ಚರ ವಹಿಸುವ ಅಗತ್ಯವಿದೆ. ಬಿಜಿಎಸ್ ಆಸ್ಪತ್ರೆ ವೈದ್ಯರ ಮಾರ್ಗದರ್ಶನದ ಪ್ರಕಾರ ಡಾ.ಪರಮೇಶ್ವರ, ಡಾ.ಶಾಲಿನಿ ಅವರು ಸ್ವಾಮೀಜಿ ಆರೋಗ್ಯ ತಪಾಸಣೆ ನಡೆಸುತ್ತಾರೆ. ಆದ್ದರಿಂದ ಒಂದು ವಾರ ಭಕ್ತರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.