ಕಾರು ಅಪಘಾತ ಪ್ರಕರಣ: ವಿಡಿಯೋ ಮೂಲಕ ಸಿಟಿ ರವಿ ಪ್ರತಿಕ್ರಿಯೆ
ತುಮಕೂರು, ಫೆಬ್ರವರಿ 19: ತುಮಕೂರಿನ ಬಳಿ ಬಿಜೆಪಿ ಶಾಸಕ ಸಿಟಿ ರವಿ ಅವರಿದ್ದ ಕಾರು ಅಪಘಾತಕ್ಕೀಡಾದ ಘಟನೆಗೆ ಸಂಬಂಧಿಸಿದಂತೆ ಶಾಸಕ ಸಿಟಿ ರವಿ ಅವರೇ ವಿಡಿಯೋ ಮುಖೇನ ಪ್ರತಿಕ್ರಿಯೆ ನೀಡಿದ್ದಾರೆ.
ಅಪಘಾತ ಸಂಭವಿಸುವ ಸಂದರ್ಭದಲ್ಲಿ ಶಾಸಕ ಸಿಟಿ ರವಿ ಅವರು ಚೆನ್ನೈಗೆ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿ ಡ್ರೈವರ್ ಆಕಾಶ್ ಮತ್ತು ಗನ್ ಮ್ಯಾನ್ ರಾಜಾ ನಾಯಕ್ ಸೇರಿ ಮೂವರಿದ್ದರು.
ಕೊಲ್ಲೂರಿನಿಂದ ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದ 12 ಯುವಕರು ಮೂತ್ರ ವಿಸರ್ಜನೆಗೆಂದು ಕುಣಿಗಲ್ ಬಳಿ ರಸ್ತೆ ಬದಲಿಯಲ್ಲಿ ತಮ್ಮ ಕಾರನ್ನು ಪಾರ್ಕ್ ಮಾಡಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಸಿಟಿ ರವಿ ಅವರಿದ್ದ ಕಾರು ಇಬ್ಬರು ಯುವಕರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಓರ್ವ ಗಂಭೀರವಾಗಿ ಗಾಯಗೊಂಡಿದ್ದರು. ಈ ಕುರಿತು ಸಿಟಿ ರವಿ ಅವರೇ ಖುದ್ದಾಗಿ ವಿಡಿಯೋ ಮುಖೇನ ನೀಡಿದ ಪ್ರತೀಕ್ರಿಯೆ ಇಲ್ಲಿದೆ.
ತೀರಾ ದುರದೃಷ್ಟಕರ
"ಈ ಘಟನೆ ತೀರಾ ದುರದೃಷ್ಟಕರ. ನಾವು ಚೆನ್ನೈಗೆ ಹೊರಟಿದ್ದ ಸಂದರ್ಭದಲ್ಲಿ ತುಮಕೂರಿನ ಬಳಿ ಅಪಘಾತ ಸಂಭವಿಸಿದೆ. ಕಾರನ್ನು ನನ್ನ ಡ್ರೈವರ್ ಆಕಾಶ್ ಎಂಬುವವರು ಚಲಾಯಿಸುತ್ತಿದ್ದರು. ಜೊತೆಗೆ ಗನ್ ಮ್ಯಾನ್ ರಾಜಾ ನಾಯಕ್ ಎಂಬುವವರು ನನ್ನೊಂದಿಗಿದ್ದರು."

ಅಂಬುಲೆನ್ಸ್ ಗೆ ನಾನೇ ಕರೆ ಮಾಡಿದ್ದೆ!
"ನಾನು ನಿದ್ದೆ ಮಾಡಿದ್ದೆ. ಇದ್ದಕ್ಕಿದ್ದಂತೆ ಏರ್ ಬ್ಯಾಗ್ ಓಪನ್ ಆದಾಗಲೇ ನನಗೆ ಎಚ್ಚರವಾಗಿದ್ದು. ಎಚ್ಚರವಾದಾಗ ನನ್ನ ಎದೆ ನೋಯುತ್ತಿತ್ತು. ಕೆಲವೆಡೆ ತರಚಿದ ಗಾಯಗಳಾಗಿದ್ದರಿಂದ ಉರಿಯುತ್ತಿತ್ತು. ನಂತರ ನಾನು ಕಾರಿನಿಂದ ಕೆಳಗಿಳಿದು ನೋಡಿದರೆ ಇಬ್ಬರು ನಿಧನರಾಗಿದ್ದರು. ತಕ್ಷಣ ನಾನೇ ಅಂಬುಲೆನ್ಸ್ ಗೆ ಫೋನ್ ಮಾಡಿದೆ. ಪೊಲೀಸರಿಗೂ ಫೋನ್ ಮಾಡಿದೆ. ಅಂಬುಲೆನ್ಸ್ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವವರೆಗೂ ಮತ್ತು ಪೊಲೀಸರು ಮೃತರನ್ನು ವಶಕ್ಕೆ ಪಡೆಯುವವರೆಗೂ ನಾನು ಅಲ್ಲಿಯೇ ಇದ್ದೆ. ನಂತರ ಪೊಲೀಸ್ ಅಧಿಕಾರಿಯೇ ನನಗೆ ಹೊರಡಲು ಅನುಮತಿ ನೀಡಿದ ಮೇಲೆ ಹೊರಟೆ."

ಸಂತ್ರಸ್ತರ ಕುಟುಂಬಸ್ಥರನ್ನು ಭೇಟಿಯಾಗುತ್ತೇನೆ!
"ಈ ಘಟನೆ ಬಗ್ಗೆ ನನಗೆ ನೋವಿದೆ. ನಾನು ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡುತ್ತೇನೆ. ನನಗೂ ಎದೆನೋವಿದ್ದಿದ್ದರಿಂದ ವಿಕ್ರಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದೇನೆ. ಚೆನ್ನೈ ಪ್ರವಾಸವನ್ನು ರದ್ದುಗೊಳಿಸಿದ್ದೇನೆ. ಈ ಘಟನೆ ಯಾರೂ ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಮೃತರ ಕುಟುಂಬದ ನೋವು ನನಗೆ ಅರ್ಥವಾಗುತ್ತದೆ. ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ"

ಘಟನೆ ಎಲ್ಲಿ? ಯಾವಾಗ ನಡೆಯಿತು?
ಮಂಗಳವಾರ ಬೆಳಗ್ಗಿನ ಜಾವ, ಕೊಲ್ಲೂರು ಪ್ರವಾಸಕ್ಕೆಂದು ತೆರಳಿದ್ದ 12 ಸ್ನೇಹಿತರಿದ್ದ ಎರಡು ಕಾರನ್ನು ತುಮಕೂರಿನ ಕುಣಿಗಲ್ ಬಳಿಯ ಊರ್ಕೇನಹಳ್ಳಿ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಕಾರಿನಲ್ಲಿದ್ದ ಯುವಕರು ಮೂತ್ರ ವಿಸರ್ಜನೆಗೆಂದು ರಸ್ತೆ ಬದಿ ನಿಂತಿದ್ದ ಸಮಯದಲ್ಲಿ ವೇಗವಾಗಿ ಬಂದ ಕಾರೊಂದು ಯುವಕರ ಮೇಲೆ ಹರಿದ ಪರಿಣಾಮ ಇಬ್ಬರು ಮೃತರಾಗಿದ್ದರೆ, ಓರ್ವ ಗಂಭೀರವಾಗಿ ಗಾಯಗೊಂಡರು. ಡಿಕ್ಕಿ ಹೊಡೆದ ಕಾರಿನಲ್ಲಿ ಬಿಜೆಪಿ ಶಾಸಕ ಸಿಟಿ ರವಿ ಅವರೂ ಇದ್ದರು.












Click it and Unblock the Notifications