ತುಮಕೂರು ಜಿಲ್ಲೆ ಬದಲಾವಣೆಯಲ್ಲೆ ಅದೆಂಥ 'ಕೈ' ಚಳಕ!
ತುಮಕೂರು, ಡಿಸೆಂಬರ್ 28 : ಹತ್ತಾರು ರಾಜ್ಯಗಳ ಪಾಲಿಗೆ ಹೆಬ್ಬಾಗಿಲಿನಂಥ ಜಿಲ್ಲೆ ತುಮಕೂರು. ಬೆಂಗಳೂರಿನಿಂದ ಬರೀ ಎಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ತುಮಕೂರು ನಗರ ಅಭಿವೃದ್ಧಿ ಕಾರಣಕ್ಕೇನೂ ಹಿಂದುಳಿದಿಲ್ಲ. ಶೈಕ್ಷಣಿಕ ಕಾಶಿ ಎಂದು ಕರೆಸಿಕೊಳ್ಳುವ ತುಮಕೂರು ನಗರದಲ್ಲಿ ಅದೆಷ್ಟು ಎಂಜಿನಿಯರಿಂಗ್, ಅದೆಷ್ಟು ಮೆಡಿಕಲ್ ಕಾಲೇಜು!
ತುಮಕೂರು ಜಿಲ್ಲೆಯ ಪ್ರಗತಿಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ಕೊಡುಗೆ ಅಲ್ಲಗಳೆಯುವಂತೆಯೇ ಇಲ್ಲ. ಜಿಲ್ಲೆಗಾಗಿ ಕೈಗೊಂಡ ಪ್ರಗತಿಗೆ ಪೂರಕವಾದ ಕಾರ್ಯಕ್ರಮಗಳ ಪಟ್ಟಿ ಇಂತಿವೆ.
ಹೇಮಾವತಿ ಜಲಾಶಯದಿಂದ ಜಿಲ್ಲೆಗೆ ಹಂಚಿಕೆಯಾಗಿದ್ದ 24.83 ಟಿಎಂಸಿ ಅಡಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಹೇಮಾವತಿ ಎಡದಂಡೆ ನಾಲೆ 0-73ರ ವಿಸ್ತರಣೆ ಕಾಮಗಾರಿಯನ್ನು 562 ಕೋಟಿ ರುಪಾಯಿ ವೆಚ್ಚದಲ್ಲಿ ಕೈಗೊಂಡಿದ್ದು, ಇದರಿಂದ ಜಿಲ್ಲೆಯ ಎಲ್ಲ ಭಾಗದ ಜನ ಸಾಮಾನ್ಯರು ಮತ್ತು ಜಾನುವಾರುಗಳಿಗೆ ಕುಡಿಯಲು ಹಾಗೂ ಕೆರೆ-ಕುಂಟೆಗಳಿಗೆ ನೀರು ಹರಿಸಲಾಗಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ನಲ್ಲಿ 615 ಎಕರೆ ಪ್ರದೇಶದಲ್ಲಿ ಎಚ್.ಎ.ಎಲ್. ಹೆಲಿಕಾಪ್ಟರ್ ತಯಾರಿಕಾ ಘಟಕ ನಿರ್ಮಾಣವಾಗುತ್ತಿದ್ದು, ಕರ್ನಾಟಕ ಸರಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದಂತೆ 4 ಸಾವಿರ ಕೋಟಿ ರುಪಾಯಿ ಬಂಡವಾಳವನ್ನು ಎಚ್ಎಎಲ್ ಹೂಡಿಕೆ ಮಾಡಲಿದೆ. ಇದರಿಂದ 4 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಯಾಗಲಿವೆ.

ದೇಶದ ಗಮನ ಸೆಳೆದಿರುವ ಫುಡ್ ಪಾರ್ಕ್
ಶಿರಾ ತಾಲೂಕಿನ ಕಳ್ಳಂಬೆಳ್ಳ ಕೆರೆಯಿಂದ ಹೇಮಾವತಿ ನೀರನ್ನು ಮದಲೂರು ಕೆರೆಗೆ ಹರಿಸುವ 32 ಕಿ.ಮೀ. ಉದ್ದದ ನಾಲೆಯನ್ನು 59.85 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರಿಂದ ನಾಲೆಯುದ್ದಕ್ಕೂ ಸಿಗುವ 11 ಕೆರೆಗಳಿಗೆ ನೀರು ಲಭ್ಯವಾಗಿದೆ. ಜಿಲ್ಲೆಯಲ್ಲಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶ 1 ರಿಂದ 6 ನೇ ಹಂತದವರೆಗೆ ಇರುವ ಪ್ರದೇಶವನ್ನು ಕೇಂದ್ರ ಸರಕಾರದಿಂದ ರಾಷ್ಟ್ರೀಯ ಹೂಡಿಕೆ ಮತ್ತು ತಯಾರಿಕಾ ವಲಯ ಎಂದು ಗುರುತಿಸಲಾಗಿದೆ. ಈ ಕೈಗಾರಿಕಾ ಪ್ರದೇಶದಲ್ಲಿ 1614 ಕೋಟಿ ಬಂಡವಾಳ ಹೂಡಿಕೆಯಾಗಿದ್ದು, ಇಲ್ಲಿನ ಫುಡ್ ಪಾರ್ಕ್ ದೇಶದ ಗಮನ ಸೆಳೆದಿದೆ.

ಪ್ರತಿ ವರ್ಷ 25 ಕೋಟಿ ರುಪಾಯಿ ಗುತ್ತಿಗೆ ಹಣ
ತುಮಕೂರು ಜಿಲ್ಲೆಯ ಬರ ಪ್ರದೇಶವಾದ ಪಾವಗಡ ತಾಲೂಕಿನಲ್ಲಿ ವಿಶ್ವದ ಅತಿದೊಡ್ಡ 2000 ಮೆಗಾವ್ಯಾಟ್ ಸಾಮರ್ಥ್ಯದ ಸೌರಪಾರ್ಕ್ ಅನ್ನು ಸುಮಾರು 13,000 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. 2000 ರೈತರು ಪ್ರತಿ ವರ್ಷ 25 ಕೋಟಿ ರುಪಾಯಿಗಳಷ್ಟು ಗುತ್ತಿಗೆ ಹಣವನ್ನು ಪಡೆಯಲಿದ್ದಾರೆ.

ಕೆಎಸ್ ಆರ್ ಪಿ ತರಬೇತಿ ಶಾಲೆ ನಿರ್ಮಾಣ
ಕೊರಟಗೆರೆ ತಾಲೂಕಿನ ತುಂಬಗಾನಹಳ್ಳಿ ಬಳಿ 42 ಎಕರೆ ಪ್ರದೇಶದಲ್ಲಿ ಕೆಎಸ್ ಆರ್ ಪಿ ತರಬೇತಿ ಶಾಲೆ ನಿರ್ಮಾಣ ಕಾರ್ಯ ಸಾಗುತ್ತಿದೆ. ಜಿಲ್ಲೆಯಲ್ಲಿ 425 ಪೊಲೀಸ್ ಕಾನ್ ಸ್ಟೇಬಲ್ ಹಾಗೂ 80 ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಗಳ ನೇಮಕಕ್ಕೆ ಹಾಗೂ ಪೊಲೀಸ್ ಠಾಣೆಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗಿದೆ.

ರೈತರಿಗೆ 371 ಕೋಟಿ ರುಪಾಯಿ ಸಾಲ ಮನ್ನಾ
ಮೂರ್ನಾಲ್ಕು ವರ್ಷಗಳಿಂದ ಬರದಿಂದಾಗಿ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದರು. ಸರಕಾರದ ಸಾಲ ಮನ್ನಾ ಯೋಜನೆಯಿಂದಾಗಿ ಜಿಲ್ಲೆಯಲ್ಲಿ 1,09,888 ರೈತರಿಗೆ 371.42 ಕೋಟಿ ರುಪಾಯಿ ಸಾಲ ಮನ್ನಾ ಸೌಲಭ್ಯ ದೊರೆತಿದ್ದು, ರೈತರಿಗೆ ನೆಮ್ಮದಿ ಸಿಕ್ಕಿದೆ. 'ಅನ್ನಭಾಗ್ಯ' ಯೋಜನೆಯಡಿ ಜಿಲ್ಲೆಯಲ್ಲಿ 5,41,042 ಬಿಪಿಎಲ್ ಕುಟುಂಬಗಳು ಹಾಗೂ 30,031 ಅಂತ್ಯೋದಯ ಕಾರ್ಡ್ದಾರರಿಗೆ ಉಚಿತವಾಗಿ ಅಕ್ಕಿ ವಿತರಿಸಲಾಗುತ್ತಿದೆ. ತುಮಕೂರು ತಾಲೂಕಿನ ದಿಬ್ಬೂರಿನಲ್ಲಿ ಒಂದೆಡೆ 1200 ಮನೆಗಳನ್ನು ಕೊಳೆಗೇರಿ ನಿವಾಸಿಗಳಿಗೆ ಒದಗಿಸಲಾಗಿದೆ.

ಶೇ 50:50ರಷ್ಟು ಅನುದಾನ ಭರಿಸಲಿರುವ ಸರಕಾರ
ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯು ತುಮಕೂರು-ಕೊರಟಗೆರೆ-ಮಧುಗಿರಿ-ಪಾವಗಡ ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ-ಕಲ್ಯಾಣದುರ್ಗ-ರಾಯದುರ್ಗ ತಾಲೂಕುಗಳ ಮೂಲಕ ಹಾದು ಹೋಗುವ ಯೋಜನೆಯಾಗಿದ್ದು, ಇದಕ್ಕಾಗಿ ಕರ್ನಾಟಕ ರಾಜ್ಯ ಸರಕಾರವು ಭೂಸ್ವಾಧೀನ ವೆಚ್ಚ ಹಾಗೂ ರೈಲ್ವೆ ಕಾಮಗಾರಿ ವೆಚ್ಚ ಎರಡರಲ್ಲೂ ಶೇ 50:50ರಷ್ಟು ಅನುದಾನವನ್ನು ಭರಿಸಲಿದೆ.

68.98 ಕೋಟಿ ರುಪಾಯಿ ಭೂಸ್ವಾಧೀನ ವೆಚ್ಚ
ಕರ್ನಾಟಕ ರಾಜ್ಯ ಸರಕಾರವು ಈ ಯೋಜನೆಗೆ ಇದುವರೆಗೆ 68.98 ಕೋಟಿ ರುಪಾಯಿಗಳನ್ನು ಭೂಸ್ವಾಧೀನ ವೆಚ್ಚಕ್ಕಾಗಿ ಬಿಡುಗಡೆ ಮಾಡಿದೆ. ತುಮಕೂರು ಜಿಲ್ಲೆಯಲ್ಲಿ ಈ ರೈಲ್ವೆ ಯೋಜನೆಯ ಉದ್ದ 58.69 ಕಿ.ಮೀ. ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯ ಒಟ್ಟು ವೆಚ್ಚ ಅಂದಾಜು 1800 ಕೋಟಿ ರುಪಾಯಿ.

ಭದ್ರಾ ಮೇಲ್ದಂಡೆ ಪರಿಷ್ಕೃತ ಯೋಜನೆಗೆ ಅನುಮೋದನೆ
ಭದ್ರಾ ಮೇಲ್ದಂಡೆ ಯೋಜನೆಯಡಿ ಕೃಷ್ಣಾ ಕಣಿವೆಯ ಸ್ಕಿಂ ಎ ಮತ್ತು ಸ್ಕಿಂ ಬಿ ನ ಸದ್ಬಳಕೆ ಮಾಡುವ ದೃಷ್ಟಿಯಿಂದ ಒಟ್ಟು 29.90 ಟಿಎಂಸಿ ಅಡಿ ನೀರಿನ ಬಳಕೆಗೆ ಅಂದಾಜು 12,340 ಕೋಟಿಗಳ ಭದ್ರಾ ಮೇಲ್ದಂಡೆ ಪರಿಷ್ಕೃತ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈಗಾಗಲೇ ಈ ಕಾರ್ಯವು ಪ್ರಗತಿಯಲ್ಲಿದೆ.












Click it and Unblock the Notifications