ತುಮಕೂರಿನಲ್ಲಿ ಈಜಲು ಹೋಗಿದ್ದ ಬಾಲಕರ ಸಾವು; ಪಿಡಬ್ಲ್ಯೂಡಿ ವಿರುದ್ಧ ಆಕ್ರೋಶ
ತುಮಕೂರು, ನವೆಂಬರ್ 07: ಈಜಲು ಹೋಗಿದ್ದ ವೇಳೆ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ತುಮಕೂರಿನ ಕೊರಟಗೆರೆಯಲ್ಲಿ ನಡೆದಿದೆ. ಶುಕ್ರವಾರ ಸಂಜೆ ಈ ದುರ್ಘಟನೆ ನಡೆದಿದ್ದು, ತುಮಕೂರಿನ ಕೊರಟಗೆರೆಯ ಸತೀಶ್ (15) ಹಾಗೂ ನಂದನ್ ಕುಮಾರ್ (16) ಎಂಬ ಬಾಲಕರು ಮೃತಪಟ್ಟಿದ್ದಾರೆ.
ಒಟ್ಟು ಐದು ಜನ ಸ್ನೇಹಿತರು ಈಜಲು ತೆರಳಿದ್ದು, ಮೊದಲು ಸರಿಯಾಗಿ ಈಜಲು ಬಾರದ ಸತೀಶ ನೀರಿನಲ್ಲಿ ಮುಳುಗಿದ್ದಾನೆ. ಆತನನ್ನು ಉಳಿಸಲು ಬಂದ ನಂದನ್ ಕುಮಾರ್ ಸಹ ಆಳವಾದ ಗುಂಡಿಯಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ.
ಈ ಇಬ್ಬರೂ ಸ್ನೇಹಿತರು ಹೋಗುವುದನ್ನು ಗಮನಿಸಿದ ಮತ್ತೋರ್ವ ಸ್ನೇಹಿತ ಆಕಾಶ್ ಈ ಇಬ್ಬರ ನೆರವಿಗೆ ಧಾವಿಸಲು ಮುಂದಾಗಿದ್ದಾನೆ. ಆಗ ಅಪಾಯದ ಸೂಚನೆ ಅರಿತ, ಜೊತೆಯಲ್ಲಿದ್ದ ಮತ್ತೋರ್ವ ಯುವಕ ಮಧುಸೂದನ್ ಎಂಬಾತ ಆಕಾಶ್ ನನ್ನು ಹಿಂದಕ್ಕೆ ಎಳೆದು ಪಾರು ಮಾಡಿದ್ದಾನೆ. ಘಟನೆಯಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದು, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಂದಕುಮಾರ್ ಮೃತ ದೇಹವನ್ನು ಮೇಲೆತ್ತಲಾಗಿದ್ದು ಸತೀಶ್ ಮೃತದೇಹದ ಶೋಧ ಕಾರ್ಯ ನಡೆಯುತ್ತಿದೆ. ಈ ಘಟನೆಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಕಾರಣ ಎಂದು ಸ್ಥಳದಲ್ಲಿ ಸೇರಿದ್ದ ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅಕ್ಕಿರಾಂಪುರ ಕೆರೆಯ ಏರಿ ಕಾಮಗಾರಿ ವೇಳೆ ಗುತ್ತಿಗೆದಾರರು ಅನಧಿಕೃತವಾಗಿ ಕೆರೆಯಲ್ಲಿ ಆಳವಾದ ಗುಂಡಿಗಳನ್ನು ತೆಗೆದಿದ್ದ ಕಾರಣ ಈಜಲು ಹೋಗಿದ್ದ ಬಾಲಕರು ಅದರಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಸ್ಥಳೀಯ ಕೊರಟಗೆರೆ ಪೊಲೀಸರು ಮತ್ತು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.












Click it and Unblock the Notifications