ತುಮಕೂರಿನ ತ್ರಿವಳಿ ಕೊಲೆ ಪ್ರಕರಣ, ಸೈಕೋ ಜೈ ಶಂಕರ್ ಖುಲಾಸೆ
ತುಮಕೂರು, ಅಕ್ಟೋಬರ್ 30 : ತುಮಕೂರಿನ ತ್ರಿವಳಿ ಕೊಲೆ ಪ್ರಕರಣದಲ್ಲಿ ಸೈಕೋ ಜಯಶಂಕರ್ ಖುಲಾಸೆಗೊಂಡಿದ್ದಾನೆ. ಚಿತ್ರದುರ್ಗದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ ಜಯಶಂಕರ್ನನ್ನು 2017ರ ಸೆಪ್ಟೆಂಬರ್ನಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿತ್ತು.
ಸೋಮವಾರ ಬೆಂಗಳೂರು ಗ್ರಾಮಾಂತರ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೃಷ್ಣಭಟ್ ಸೈಕೋ ಜಯಶಂಕರ್ನನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ. 2011ರ ಮಾರ್ಚ್ 29ರಂದು ತುಮಕೂರಿನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದಲ್ಲಿ ಜೈಶಂಕರ್ ಆರೋಪಿಯಾಗಿದ್ದ.

ತುಮಕೂರಿನ ಗಿರಿಯನಹಳ್ಳಿಯಲ್ಲಿ ದೊಡ್ಡಯ್ಯ, ಪುಟ್ಟಮ್ಮ ದಂಪತಿಗಳು ಹಾಗೂ ಅವರ ಪುತ್ರಿ ರಾಜಮ್ಮ ಕೊಲೆ ಮಾಡಿದ ಆರೋಪ ಸೈಕೋ ಜಯಶಂಕರ್ ಮೇಲಿತ್ತು. ಸೂಕ್ತ ಸಾಕ್ಷಿಗಳು ದೊರೆಯದ ಹಿನ್ನಲೆಯಲ್ಲಿ ಖುಲಾಸೆಗೊಳಿಸಲಾಗಿದೆ.
ಜೋಡಿ ಕೊಲೆ ಪ್ರಕರಣದಲ್ಲಿಯೂ ಖುಲಾಸೆ : 2011ರ ಏಪ್ರಿಲ್ 27ರಂದು ಚಿತ್ರದುರ್ಗದ ಎಂ.ಕೆ.ಹಟ್ಟಿಯಲ್ಲಿ ಚಂದ್ರಮ್ಮ ಎಂಬುವವರ ಮೇಲೆ ಜೈಶಂಕರ್ ಅತ್ಯಾಚಾರ ನಡೆಸಿದ್ದ. ಬಳಿಕ ಅಲ್ಲಿಗೆ ಆಕೆಯ ಪತಿ ಹನುಮಂತಪ್ಪ ಬಂದಿದ್ದರು. ಇಬ್ಬರನ್ನು ಕೊಲೆ ಮಾಡಿದ ಆರೋಪ ಜೈಶಂಕರ್ ಮೇಲಿತ್ತು.
ಬೆಂಗಳೂರು ಗ್ರಾಮಾಂತರ ಸೆಷನ್ಸ್ ನ್ಯಾಯಾಲಯ 2017ರ ಸೆಪ್ಟೆಂಬರ್ನಲ್ಲಿ ಈ ಕೊಲೆ ಪ್ರಕರಣದಲ್ಲಿಯೂ ಜಯಶಂಕರ್ನನ್ನು ಖುಲಾಸೆಗೊಳಿಸಿತ್ತು. ಈಗ ತುಮಕೂರಿನ ತ್ರಿವಳಿ ಕೊಲೆ ಪ್ರಕರಣದಲ್ಲಿಯೂ ಆತ ಖುಲಾಸೆಗೊಂಡಿದ್ದಾನೆ.
ವಿಜಯಪುರದಲ್ಲಿ ಜೈ ಶಂಕರ್ನನ್ನು ಪೊಲೀಸರು ಬಂಧಿಸಿದಾಗ ಹಲವು ಕೊಲೆ ಪ್ರಕರಣಗಳು ಹೊರಬಂದಿದ್ದವು. ಕರ್ನಾಟಕದ ಮೂರು ಪ್ರಕರಣಗಳಲ್ಲಿ ಜೈ ಶಂಕರ್ ಈಗಾಗಲೇ ಖುಲಾಸೆಗೊಂಡಿದ್ದು, ಇನ್ನೂ 2 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ತಮಿಳುನಾಡಿನಲ್ಲಿಯೂ ಜೈ ಶಂಕರ್ ಮೇಲೆ ಹಲವು ಕೇಸುಗಳಿವೆ.
ಜೈಲಿನಿಂದ ಪರಾರಿಯಾಗಿದ್ದ : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸೈಕೋ ಜಯಶಂಕರ್ 2013ರ ಸೆಪ್ಟೆಂಬರ್ನಲ್ಲಿ ಪರಾರಿಯಾಗಿದ್ದ. ಕಾಲಿಗೆ ಗಾಯ ಮಾಡಿಕೊಂಡಿದ್ದ ಆತ, ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.












Click it and Unblock the Notifications