ತುಮಕೂರು ನಗರದ ರಸ್ತೆಗಳನ್ನು ಏಕೆ ಅಗೆದಿದ್ದಾರೋ? ಬಲ್ಲವರು ತಿಳಿಸಿ
ತುಮಕೂರು, ಜನವರಿ 31: ನಗರ ವ್ಯಾಪ್ತಿಯಲ್ಲಿ ಒಟ್ಟಿಗೆ ಅದೆಂಥ ಕಾಮಗಾರಿ ನಡೆಯುತ್ತಿದೆ ಎಂಬುದೇ ಅರ್ಥವಾಗದೆ ಜನರು ಕಷ್ಟ ಪಡುವಂತಾಗಿದೆ. ಒಂದು ಬಡಾವಣೆಯಲ್ಲಿ ಒಂದೊಂದಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸುತ್ತಾ ಬರುವುದು ಒಂದು ಬಗೆ ಅಥವಾ ಕೆಲಸ ಮಾಡುವ ವಿಧಾನ ಅದೇ ತಾನೆ? ಆದರೆ ಎಲ್ಲ ರಸ್ತೆಗಳನ್ನು ಏಕಾಏಕಿ ಅಗೆದಿಟ್ಟರೆ ಪರಿಸ್ಥಿತಿ ಏನಾಗಬೇಕು?
ತುಮಕೂರು ಲೋಕಸಭೆ: ಕಾಂಗ್ರೆಸ್ ಕೋಟೆಯಲ್ಲಿ ಬಿಜೆಪಿಗೊಂದು ಭರವಸೆಯ ಚುಕ್ಕಿ
ಸೋಮೇಶ್ವರ ಪುರಂ (ಎಸ್.ಎಸ್.ಪುರಂ), ಎಸ್ ಐಟಿ, ಜಯನಗರ ಹೀಗೆ ನಾನಾ ಬಡಾವಣೆಗಳಲ್ಲಿ ಅಗೆಯಲಾಗಿದ್ದು, ಏಕೆ ಎಂಬ ಪ್ರಶ್ನೆ ಮಾಡಿದರೆ, ಸಿಲಿಂಡರ್ ಸಂಪರ್ಕ ತೆಗೆದು, ನೇರವಾಗಿ ಮನೆಗೆ ಅಡುಗೆ ಅನಿಲ ಪೂರೈಸಲು ಎಂಬ ಉತ್ತರ ನೀಡುತ್ತಾರೆ. ಆದರೆ ಹಲವು ಕಡೆ ಆ ಕಾಮಗಾರಿ ಕೂಡ ಪೂರ್ತಿಗೊಂಡಿದೆ. ಮತ್ತಿನ್ಯಾವ ಕಾರಣಕ್ಕೆ ಎಂಬುದಕ್ಕೆ ಉತ್ತರವೇ ಸಿಗುವುದಿಲ್ಲ.
ಕಾರುಗಳಿರಲಿ, ಮನೆಯಿಂದ ದ್ವಿಚಕ್ರ ವಾಹನ ತೆಗೆಯುವುದಕ್ಕೂ ಸಮಸ್ಯೆಯಾಗಿದೆ. ಇನ್ನು ಆಗ ತಾನೇ ನೀರಿನಿಂದ ತೊಳೆದು, ಸ್ವಚ್ಛ ಮಾಡಿ ನಿಲ್ಲಿಸಿದರೆ ಒಂದು ಗಂಟೆಯೊಳಗೆ ಪೂರ್ತಿಯಾಗಿ ಧೂಳು ತುಂಬಿಕೊಂಡಿರುತ್ತದೆ. ಪಾಲಿಕೆಗಾದರೂ ಈ ಸಮಸ್ಯೆ ಬಗ್ಗೆ ಮಾಹಿತಿ ಇದೆಯೋ ಇಲ್ಲವೋ ತಿಳಿದಿಲ್ಲ. ಆದರೆ ತುಮಕೂರು ನಗರ ವ್ಯಾಪ್ತಿಯಲ್ಲಿ ಜನರು ತೊಂದರೆ ಅನುಭವಿಸುತ್ತಿರುವುದು ಸುಳ್ಳಲ್ಲ.
ಇನ್ನು ರಾತ್ರಿ ವೇಲೆ ವಿದ್ಯುತ್ ಕಡಿತ ಆಗಿಬಿಟ್ಟರಂತೂ ಮತ್ತೂ ಸಮಸ್ಯೆ. ಎಲ್ಲಿ ಹಳ್ಳ-ಕೊಳ್ಳ ಇದೆ ಎಂಬುದೇ ತಿಳಿಯುವುದಿಲ್ಲ. ಕಾರು-ಬೈಕ್ ಗಳಲ್ಲಿ ಬರುವಾಗ ಜೀವ ಕೈಲಿ ಹಿಡಿದು ಬರಬೇಕು. ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿ, ರಸ್ತೆಯಲ್ಲಿ ಅಗೆದ ಗುಂಡಿಗಳನ್ನು ಮುಚ್ಚುವುದು ಉತ್ತಮ. ಏನೋ ಅನಾಹುತ ಆದ ನಂತರ ಇಲ್ಲದ ಸಬೂಬು ಹೇಳಿದರೆ ಪ್ರಯೋಜನ ಇಲ್ಲ.