ತುಮಕೂರು ರೈತನಿಗೆ ಭಾರಿ ಅದೃಷ್ಟ ತಂದು ಕೊಟ್ಟ ಅಪ್ಪ ನೆಟ್ಟ ಹಲಸಿನ ಗಿಡ
ತುಮಕೂರು, ಡಿಸೆಂಬರ್ 06 : ತುಮಕೂರು ಜಿಲ್ಲೆಯ ಚೇಳೂರು ಗ್ರಾಮದ ಈ ರೈತ ಎಸ್.ಎಸ್.ಪರಮೇಶ್ವರ ಅವರ ಹೊಲದಲ್ಲಿನ ಹಳೆಯ ಹಲಸಿನ ಮರ ರೈತ ಪರಮೇಶ್ವರ ಅವರಿಗೆ ಪುರಾತನ ಸಸ್ಯಪ್ರಭೇದ ರಕ್ಷಕನ ಪಟ್ಟ ದೊರಕಿಸಿಕೊಟ್ಟಿದೆ. ಅಷ್ಟೆ ಅಲ್ಲ ಕೂತಲ್ಲೆ ಲಕ್ಷಾಂತರ ರೂಪಾಯಿ ಹಣ ಮಾಡುವ ಅದೃಷ್ಟವನ್ನು ತಂದುಕೊಟ್ಟಿದೆ.
ಹಾಸನ: ತೋಟಗಾರಿಕೆ ಮೇಳಕ್ಕೆ ಉತ್ತಮ ರೈತ ಆಯ್ಕೆಗೆ ಅರ್ಜಿ ಆಹ್ವಾನ
ಚೇಳೂರಿನ ರೈತ ಎಸ್.ಎಸ್.ಪರಮೇಶರ ಅವರ ತೋಟದಲ್ಲಿ ಬೆಳೆದ ವಿಶಿಷ್ಟ ರೀತಿಯ ಹಲಸಿನ ಮರ ಅವರಿಗೆ ಸಸ್ಯಪ್ರಭೇದ ರಕ್ಷಕನ ಪಟ್ಟ ದೊರಕಿಸಿಕೊಟ್ಟಿದೆ. ಇವರು ಬೆಳೆದ ಹಲಸು ದೇಶದಾದ್ಯಂತ ಇರುವ ಸಸ್ಯ ತಜ್ಞರ ಗಮನ ಸೆಳೆದಿದೆ. ಸಸ್ಯ ಪ್ರಭೇದ ರಕ್ಷಿಸಿದ್ದಕ್ಕಾಗಿ ಪರಮೇಶ್ವರ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ.
ಪರಮೇಶ್ವರ ಅವರ ಹೊಲದಲ್ಲಿ ಬೆಳೆದ ಹಲಸಿನ ಮರದಲ್ಲಿ ಬೆಳೆದ ಹಣ್ಣಿನಲ್ಲಿ ತೊಳೆಗಳು ತಾಮ್ರಕೆಂಪು ಬಣ್ಣದಲ್ಲಿವೆ. ಈ ಹಲಸಿನ ತೊಳೆಗಳು ಅತಿ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿದೆ ಎಂದು ತಜ್ಞರು ಹೇಳಿದ್ದಾರೆ. ದೇಹಕ್ಕೆ ಅತಿ ಅವಶ್ಯಕವಾದ ಆ್ಯಂಟಿ ಆಕ್ಸಿಡೆಂಟ್ಗಳು ಈ ಹಲಸಿನಲ್ಲಿ ಯಥೇಚ್ಛವಾಗಿವೆ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಪರಮೇಶ್ವರ್ ಅವರ ತಂದೆ 35 ವರ್ಷಗಳ ಹಿಂದೆ ಈ ಹಲಸಿನ ಗಿಡವನ್ನು ನೆಟ್ಟಿದ್ದರು.
ಈ ವಿಶಿಷ್ಟ ಹಲಸಿನ ಪ್ರಭೇದವನ್ನು ಹೆಚ್ಚು ಮಾಡುವುದು ಹೇಗೆ ಎಂಬುದು ಪರಮೇಶ್ ಅವರಿಗೆ ತಿಳಿದಿಲ್ಲ ಹಾಗಾಗಿ ಈ ಪ್ರಭೇದವನ್ನು ರಕ್ಷಿಸಲೆಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ ರಿಸರ್ಚ್ (ಐಐಎಚ್ಆರ್) ವಿಜ್ಞಾನಿಗಳು ಪರಮೇಶ್ವರ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಒಪ್ಪಂದದನ್ವಯ ಪರಮೇಶ್ವರ್ ಅವರ ಹಲಸಿನ ಮರದಿಂದ ತೆಗೆದ ಸಸಿಗಳನ್ನು ಐಐಎಚ್ಆರ್ ತನ್ನ ಹೆಸರಿನಲ್ಲಿ ಮಾರಾಟ ಮಾಡುತ್ತದೆ ಹಾಗೂ ಅದರಿಂದ ಬಂದ ಲಾಭದ ಶೇ75 ಪ್ರತಿಶತ ಹಣವನ್ನು ರೈತ ಪರಮೇಶ್ವರ್ಗೆ ನೀಡುತ್ತದೆ.
ಕೇವಲ ಎರಡು ತಿಂಗಳಲ್ಲಿ 10000 ಸಸಿಗಳಿಗೆ ಐಐಎಚ್ಆರ್ಗೆ ಬೇಡಿಕೆ ಬಂದಿದ್ದವು ಎಂದು ಐಐಎಚ್ಆರ್ ನಿರ್ದೇಶಕ ಎಚ್.ಆರ್.ದಿನೇಶ್ ಹೇಳಿದ್ದಾರೆ. ಇದರಿಂದಾಗಿ ರೈತ ಪರಮೇಶ್ವರ ಎರಡೇ ತಿಂಗಳಲ್ಲಿ 10 ಲಕ್ಷ ಆದಾಯ ಗಳಿಸಿದ್ದಾರೆ.
ತನ್ನ ತೋಟದ ಹಲಸಿನ ಮರ ತನಗೆ ಭಾರಿ ಅದೃಷ್ಟ ತಂದ ಕಾರಣ ಖುಷಿಯಾಗಿರುವ ರೈತ ಪರಮೇಶ್ವರ, ತಂದೆ ನೆಟ್ಟ ಈ ಪ್ರಭೇದದ ಹಲಸಿಗೆ ತನ್ನ ತಂದೆ ಸಿದ್ದರಾಮರ ಹೆಸರಿನಿಂದ ಪ್ರೇರಿತಗೊಂಡು 'ಸಿದ್ದು' ಎಂದು ಹೆಸರಿಟ್ಟಿದ್ದಾರೆ.