ತುಮಕೂರು; ಅಪಘಾತದ ಕಥೆ ಹೇಳಿ ಈರುಳ್ಳಿ ಕದ್ದ ಲಾರಿ ಚಾಲಕ!
ತುಮಕೂರು, ಡಿಸೆಂಬರ್ 8 : ಈರುಳ್ಳಿ ಬೆಲೆ ಹೆಚ್ಚಾದಂತೆ ಅದನ್ನು ಕದಿಯುವ ಅನೇಕ ಪ್ರಕರಣಗಳು ಸಹ ನಡೆಯುತ್ತಿವೆ. ಲಾರಿ ಅಪಘಾತವಾಗಿದೆ ಎಂದು ಹೇಳಿ ಈರುಳ್ಳಿ ಕದ್ದಿದ್ದ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆಯ ಯುರಗುಂಟೇಶ್ವರ ನಗರದ ಬಳಿ ಲಾರಿ ಅಪಘಾತವಾಗಿದೆ ಎಂದು 7.16 ಲಕ್ಷ ಮೌಲ್ಯದ ಈರುಳ್ಳಿ ಕದ್ದ ಲಾರಿಯ ಚಾಲಕ ಚೇತನ್ ಮತ್ತು ಇತರ ನಾಲ್ವರು ಸಿಕ್ಕಿಬಿದ್ದಿದ್ದಾರೆ.
ದಾವಣಗೆರೆಯ ಜಿಲ್ಲೆಯ ಜಗಳೂರು ತಾಲೂಕಿನ ಉಚ್ಚವನಹಳ್ಳಿಯಿಂದ ಆನಂದ್ ಕುಮಾರ್ ಎಂಬುವವರು ಸುಮಾರು 10 ಕ್ವಿಂಟಾಲ್ ಈರುಳ್ಳಿಯನ್ನು ಚೆನ್ನೈನ ಮೋರ್ ವೆಲ್ ಕಂಪನಿಗೆ ಲಾರಿಯಲ್ಲಿ ಕಳಿಸಿದ್ದರು. 183 ಚೀಲಗಳಲ್ಲಿ ಈರುಳ್ಳಿ ತುಂಬಿ ಲಾರಿಗೆ ಹಾಕಲಾಗಿತ್ತು.
ಲಾರಿ ಚಾಲಕ ಚೇತನ್ ಆನಂದ್ ಕುಮಾರ್ಗೆ ಕರೆ ಮಾಡಿ, ಯುರಗುಂಟೇಶ್ವರ ನಗರದ ಬಳಿ ಲಾರಿ ಪಲ್ಟಿಯಾಗಿದೆ. ಈರುಳ್ಳಿಯನ್ನು ಜನರು ಹೊತ್ತುಕೊಂಡು ಹೋದರು. ನನಗೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ಬೇಗ ಬನ್ನಿ ಎಂದು ಮಾಹಿತಿ ನೀಡಿದ್ದ.

80 ಚೀಲ ಈರುಳ್ಳಿ ಮಾರಾಟ ಮಾಡಿದ್ದ
ಲಾರಿ ಚಾಲಕ ಜಗಳೂರು ತಾಲೂಕಿನ ಉಚ್ಚವನಹಳ್ಳಿಯಿಂದ ಆನಂದ್ ಕುಮಾರ್ಗೆ ಸೇರಿದ 183 ಚೀಲ ಈರುಳ್ಳಿಯನ್ನು ತುಂಬಿಸಿಕೊಂಡು ಹೊರಟಿದ್ದ. ಹಿರಿಯೂರು ತಾಲೂಕಿನ ಕಸ್ತೂರಿರಂಗನ್ ಬಳಿಯ ಗೊಲ್ಲಡಕು ಬಳಿ 80 ಚೀಲ ಈರುಳ್ಳಿಯನ್ನು ಮಾರಾಟ ಮಾಡಿದ್ದ.

ಐದು ಜನರು ಸೇರಿ ಸಂಚು ಮಾಡಿದ್ದರು
ಲಾರಿಯಲ್ಲಿದ್ದ ಈರುಳ್ಳಿಯನ್ನು ಮಾರಾಟ ಮಾಡಲು ಲಾರಿ ಚಾಲಕ ಚೇತನ್, ಕ್ಲೀನರ್ ಸಂತೋಷ್, ಬುಡೆನ್ ಸಾಬ್, ದಾದಾಫೀರ್ ಹಾಗೂ ಶೇಖ್ ಅಲಿಖಾನ್ ಸೇರಿ ಸಂಚು ರೂಪಿಸಿದ್ದರು. ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಾಲೀಕನಿಗೆ ಅನುಮಾನ
ಲಾರಿ ಅಪಘಾತವಾಗಿದೆ ಜನರು ಈರುಳ್ಳಿ ಹೊತ್ತರು ಎಂದು ಚೇತನ್ ಆನಂದ್ ಕುಮಾರ್ಗೆ ಕರೆ ಮಾಡಿದ್ದ. ಯುರಗುಂಟೇಶ್ವರ ನಗರದ ಬಳಿ ಬಂದು ನೋಡಿದ ಅವರಿಗೆ ಅನುಮಾನ ಬಂದಿದೆ. ತಕ್ಷಣ ಅವರು ತಾವರೆಕೆರೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಚಾಲಕನನ್ನು ವಿಚಾರಣೆ ಮಾಡಿದಾಗ ಸತ್ಯ ಹೊರಬಂದಿದೆ.

165 ರೂ. ಈರುಳ್ಳಿ ದರ
ದೇಶದ ವಿವಿಧ ರಾಜ್ಯಗಳಲ್ಲಿ ಈರುಳ್ಳಿ ದರ 165 ರೂ. ಗಡಿ ದಾಟಿದೆ. ಕೇಂದ್ರ ಸರ್ಕಾರ 1.2 ಲಕ್ಷ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. ಜನವರಿ 20ರ ವೇಳೆಗೆ ವಿದೇಶಗಳಿಂದ ಈರುಳ್ಳಿ ದೇಶಿಯ ಮಾರುಕಟ್ಟೆಗೆ ಬರಲಿದೆ.












Click it and Unblock the Notifications