ಶಿರಾ ಅಸೆಂಬ್ಲಿ ಉಪಚುನಾವಣೆ: ಸಂಭಾವ್ಯ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
ತುಮಕೂರು, ಸೆ 3: ಬಿ. ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಜಿಲ್ಲೆಯ ಶಿರಾ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಗಾಗಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಆಗಸ್ಟ್ ನಾಲ್ಕರಂದು ಸತ್ಯನಾರಾಯಣ ನಿಧನರಾಗಿದ್ದರು.
ಪ್ರಮುಖವಾಗಿ, ಜೆಡಿಎಸ್ ನಲ್ಲಿ ಟಿಕೆಟ್ ಗಾಗಿ ಲಾಬಿಗಳು ಜೋರಾಗಿ ನಡೆಯುತ್ತಿದ್ದು, ಪ್ರಮುಖರ ಮುಖಾಂತರ ದೇವೇಗೌಡರಿಗೆ ಒತ್ತಡ ಹೇರುವ ಕೆಲಸ ನಡೆಯುತ್ತಿದೆ. ಕಳೆದ ಚುನಾವಣೆಯಲ್ಲಿ, ಸತ್ಯನಾರಾಯಣ, ಕಾಂಗ್ರೆಸ್ಸಿನ ಟಿ.ಬಿ.ಜಯಚಂದ್ರ ವಿರುದ್ದ 10,365 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಅನುಕಂಪದ ಆಧಾರದ ಮೇಲೆ ದೇವೇಗೌಡ್ರು, ಸತ್ಯನಾರಾಯಣ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಿದ್ದಾರೋ ಅಥವಾ ಬೇರೆ ಅಭ್ಯರ್ಥಿಗೆ ಮಣೆ ಹಾಕಲಿದ್ದಾರೋ ಎಂದು ಕಾದು ನೋಡಬೇಕಿದೆ.
ಸದ್ಯದ ಮಾಹಿತಿಯ ಪ್ರಕಾರ, ಮೂವರು ಮುಖಂಡರು, ಜೆಡಿಎಸ್ ಟಿಕೆಟ್ ಗಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಸ್ಥಳೀಯವಾಗಿ, ಮತದಾರರಿಗೆ ಚಿರಪರಿಚಿತರಾಗಿರುವ ಈ ಮೂವರಿಗೆ, ಗೌಡ್ರ ಆಶೀರ್ವಾದ ಸಿಗಲಿದೆಯಾ ಎನ್ನುವುದಕ್ಕೆ ಕೆಲವು ದಿನಗಳಲ್ಲಿ ಉತ್ತರ ಸಿಗಲಿದೆ.

ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಶಿರಾದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ನಿಖಿಲ್ ಸ್ಪಷ್ಟನೆಯನ್ನು ನೀಡಿ, "ಇಂತಹ ಕಪೋಲಕಲ್ಪಿತ ಸುದ್ದಿ- ವದಂತಿಗಳನ್ನು ಯಾರು ಹಬ್ಬಿಸುತ್ತಾರೋ? ಯಾಕೆ ಹಬ್ಬಿಸುತ್ತಾರೋ? ಉಪಚುನಾವಣೆಗೆ ಯೋಗ್ಯ, ಸಮರ್ಥ ಅಭ್ಯರ್ಥಿಯನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡಲಿದ್ದಾರೆ. ಅವರ ಪರವಾಗಿಯೂ ಪಕ್ಷದ ಅಭ್ಯರ್ಥಿ ಪರ ಟೊಂಕಕಟ್ಟಿ ನಿಂತು ಪ್ರಚಾರ ಮಾಡಲಿದ್ದೇನೆ. ಇದರಲ್ಲಿ ಯಾರಿಗೂ ಎಳ್ಳಷ್ಟು ಸಂಶಯ ಬೇಡ" ಎಂದು ಹೇಳಿದ್ದರು.

ಸತ್ಯನಾರಾಯಣ ಅವರ ಪುತ್ರ ಸತ್ಯಪ್ರಕಾಶ್
ದಿವಂಗತ ಸತ್ಯನಾರಾಯಣ ಅವರ ಪುತ್ರ ಬಿ.ಎಸ್. ಸತ್ಯಪ್ರಕಾಶ್ ಅವರ ಹೆಸರು ಮಂಚೂಣಿಯಲ್ಲಿ ಕೇಳಿ ಬರುತ್ತಿದೆ. ದೇವೇಗೌಡ್ರು ಮತ್ತು ಕುಮಾರಸ್ವಾಮಿಯವರು, ಸತ್ಯನಾರಾಯಣನವರ ಕುಟುಂಬವನ್ನು ಕೈಬಿಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ರಾಜಕೀಯದಲ್ಲಿ ಅನುಭವವನ್ನು ಹೊಂದಿರುವ ಇವರಿಗೆ ಜೆಡಿಎಸ್ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.

ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ
ಸತ್ಯಪ್ರಕಾಶ್ ಅಲ್ಲದೇ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ಅವರ ಪತಿ ಕಲ್ಕೆರೆ ರವಿಕುಮಾರ್ ಮತ್ತು ಸ್ಥಳೀಯ ಮುಖಂಡ ಸಿ.ಆರ್. ಉಮೇಶ್ ಅವರ ಹೆಸರೂ, ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಇವರು ಕೂಡಾ ಟಿಕೆಟ್ ಗಾಗಿ ಒತ್ತಡವನ್ನು ಹೇರುತ್ತಿದ್ದಾರೆ.

ಸತ್ಯನಾರಾಯಣ ಕುಟುಂಬದವರನ್ನು ಕೈಬಿಟ್ಟರು ಎನ್ನುವ ಆಪಾದನೆ
ಆದರೆ, ಸದ್ಯದ ರಾಜಕೀಯ ಚಿತ್ರಣದ ಪ್ರಕಾರ ಅನುಕಂಪ, ರಾಜಕೀಯ ಅನುಭವ ಮತ್ತು ಯುವ ನಾಯಕ ಎನ್ನುವ ಕಾರಣಕ್ಕಾಗಿ ಸತ್ಯಪ್ರಕಾಶ್ ಅವರಿಗೆ ಟಿಕೆಟ್ ಒಲಿದರೂ ಒಲಿಯಬಹುದು. ರಾಜಕೀಯ ಕುಟುಂಬದ ಹಿನ್ನಲೆ ಮತ್ತು ಟಿಕೆಟ್ ನೀಡದೇ ಇದ್ದರೆ, ಸತ್ಯನಾರಾಯಣ ಕುಟುಂಬದವರನ್ನು ಕೈಬಿಟ್ಟರು ಎನ್ನುವ ಆಪಾದನೆ ಎದುರಾಗಬಹುದು ಎನ್ನುವ ಕಾರಣಕ್ಕಾಗಿ ಟಿಕೆಟ್ ಸತ್ಯಪ್ರಕಾಶ್ ಗೆ ಒಲಿಯಬಹುದು.












Click it and Unblock the Notifications