ಸಿದ್ಧಲಿಂಗ ಸ್ವಾಮಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು
ತುಮಕೂರು, ಜುಲೈ 22: ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಸೋಲೂರು ಹೋಬಳಿಯ ಕುಂಚಗಲ್ ಬಂಡೇಮಠದ ಸದಾಶಿವಯ್ಯ ಮತ್ತು ಶಿವರುದ್ರಮ್ಮನವರ ಎಂಟು ಜನ ಮಕ್ಕಳಲ್ಲಿ (ಐವರು ಅಣ್ಣಂದಿರು ಮತ್ತು ಇಬ್ಬರು ಅಕ್ಕಂದಿರು) ಕಿರಿಯ ಮಗನಾಗಿ ದಿನಾಂಕ 22-07-1963 ರಲ್ಲಿ ಜನಿಸಿದ ಆ ಮಗುವೇ ಇಂದಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮಿಗಳು. ಶ್ರೀಗಳ ಪೂರ್ವಾಶ್ರಮದ ಹೆಸರು ಬಿ.ಎಸ್. ವಿಶ್ವನಾಥ್.
ಶ್ರೀಗಳ ಬಾಲ್ಯ, ಶಿಕ್ಷಣ
ಶ್ರೀಗಳು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕುಂಚಗಲ್ ಬಂಡೆಮಠದಲ್ಲಿ ಚರಮೂರ್ತಿ ಶಿವರುದ್ರಸ್ವಾಮಿಗಳ ಪಾಲನೆ ಹಾಗೂ ಪೋಷಣೆಯಲ್ಲಿ ಪಡೆದರು. ನಂತರ ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸಕ್ಕಾಗಿ ಕುಂಚಗಲ್ ಸಮೀಪದ ಬಾಣವಾಡಿಗೆ ತೆರಳಿದರು. ಪ್ರೌಢಶಾಲೆ ಕಲಿಯಲು ಕನಕಪುರದ ದೇಗುಲಮಠದ ಮಹಾಲಿಂಗಸ್ವಾಮಿಗಳ ಆಶ್ರಯಕ್ಕೆ ಸೇರಿದರು.
ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ತುಮಕೂರಿನ ಸಿದ್ಧಗಂಗಾ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಆಶ್ರಯದಲ್ಲಿ ಪಡೆದರು. ನಂತರ ಸಂಸ್ಕೃತ ವಿದ್ವತ್ ಪದವಿ, ಶಕ್ತಿ ವಿಶಿಷ್ಟಾದ್ವೈತ ವೇದಾಂತ ಶಾಸ್ತ್ರವನ್ನು ಸಿದ್ಧಲಿಂಗೇಶ್ವರ ವೇದ- ಸಂಸ್ಕೃತ ಮಹಾವಿದ್ಯಾಲಯದಲ್ಲಿ ಪಡೆದರು.
29-01-1988 ರಂದು ಷಟ್ಸ್ಥಲ ಬ್ರಹ್ಮೋಪದೇಶ ಪೂರ್ವಕ ಚರಜಂಗಮ ಪಟ್ಟಾಧಿಕಾರ ಮತ್ತು ವಿರಕ್ತಾಶ್ರಮ ಸ್ವೀಕರಿಸಿ ಸಿದ್ಧಲಿಂಗ ಸ್ವಾಮಿಗಳೆಂಬ ನಾಮಧೇಯದಲ್ಲಿ ಶ್ರೀಮಠದ ಸೇವೆಯಲ್ಲಿ ತೊಡಗಿದರು. 31-03-1988 ರಂದು ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ಜವಾಬ್ಧಾರಿಯನ್ನು ಸ್ವೀಕರಿಸಿದರು. ದಿನಾಂಕ 4-8-2012 ರಂದು ಶ್ರೀ ಶಿವಕುಮಾರಸ್ವಾಮಿಗಳಿಂದ ಶ್ರೀಮಠದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಪೂಜ್ಯ ಶಿವಕುಮಾರಸ್ವಾಮಿಗಳ ಸನ್ನಿಧಿಯಲ್ಲೇ ಬೆಳೆದ ಸಿದ್ಧಲಿಂಗ ಸ್ವಾಮಿಗಳಿಗೆ ಹಿರಿಯ ಶ್ರೀಗಳ ದಿವ್ಯ ಚೇತನ ದಾರಿದೀಪವಾಗಿ ಮುನ್ನಡೆಸುತ್ತಿದೆ. ಇಂದು ಶ್ರೀಗಳ ಜನ್ಮದಿನ.
ಜಾತಿ, ಮತ, ಪಂಥಗಳ ಬೇಧವಿಲ್ಲದೆ ಎಲ್ಲರನ್ನೂ ತ್ರಿವಿಧ ದಾಸೋಹದಿಂದ ಸಲಹಿದ ಶ್ರೀಮಠದ ಎಲ್ಲಾ ಹಳೆಯ ವಿದ್ಯಾರ್ಥಿಗಳು ಹಾಗೂ ಮಠದ ಭಕ್ತರ ಪರವಾಗಿ ಸಿದ್ಧಲಿಂಗ ಸ್ವಾಮಿಗಳಿಗೆ ನಮ್ಮ ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತಾ ಶ್ರೀಗಳ ಜನ್ಮದಿನಂದು ಭಕ್ತಿಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇವೆ.