ಆಪ್ ವಕ್ತಾರೆಗೆ ಉಪ ತಹಸೀಲ್ದಾರ್ನಿಂದ ಕಿರುಕುಳ
ತುಮಕೂರು, ಸೆ. 17 : ಮಹಿಳೆ ಮೈಮೇಲೆ ಬಿದ್ದು, ಚೀಟಿಯಲ್ಲಿ ತನ್ನ ಮೊಬೈಲ್ ನಂಬರ್ ಬರೆದುಕೊಟ್ಟವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಬಸ್ಸಿನಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಡಿ ತುಮಕೂರು ಉಪತಹಸೀಲ್ದಾರ್ ಮುರಳಿಯನ್ನು ಬಂಧಿಸಲಾಗಿದೆ.
ಮುರಳಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆ ಪ್ರತಿಮಾ ತುಮಕೂರು ಹೊಸ ಬಡಾವಣೆ ಠಾಣೆಯಲ್ಲಿ ಅತ್ಯಾಚಾರ ಯತ್ನ ದೂರು ದಾಖಲಿಸಿದ್ದಾರೆ.(ಶಾಂತಿನಿಕೇತನಕ್ಕೂ ತಟ್ಟಿತೇ ಲೈಂಗಿಕ ದೌರ್ಜನ್ಯ ಕಳಂಕ)
ಬೆಂಗಳೂರಿನ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಆಮ್ ಆದ್ಮಿ ಕಾರ್ಯಕರ್ತೆ ಮಂಗಳವಾರ ತುಮಕೂರಿಗೆ ಬಸ್ನಲ್ಲಿ ಹಿಂದಿರುಗುತ್ತಿದ್ದರು. ಈ ವೇಳೆ ಪಕ್ಕದಲ್ಲೇ ಕುಳಿತಿದ್ದ ಮುರುಳಿ ಪದೇ ಪದೇ ಬೇಕಂತಲೇ ಪ್ರತಿಮಾ ಮೈಮೇಲೆ ಬೀಳುತ್ತಿದ್ದ. ಬಸ್ ತುಮಕೂರು ಪ್ರವೇಶಿಸಿದ ನಂತರ ಬಾ ಎಂದು ಕೈ ಸನ್ನೆ ಮಾಡಿದ್ದ. ಅಲ್ಲದೇ ಚೀಟಿಯಲ್ಲಿ ತನ್ನ ಮೊಬೈಲ್ ನಂಬರ್ ಬರೆದುಕೊಟ್ಟು ಮಧ್ಯಾಹ್ನ ಕರೆ ಮಾಡುವಂತೆ ತಿಳಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆದರೆ, ಮುರುಳಿ ಬಗ್ಗೆ ಆತನ ಸಹೋದ್ಯೋಗಿಗಳು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ರೀತಿಯ ವರ್ತನೆ ತೋರಲು ಸಾಧ್ಯವಿಲ್ಲ. ಇಲಾಖೆಯಲ್ಲಿ ಉತ್ತಮ ಆಡಳಿತಗಾರ ಎಂದು ಹೆಸರು ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.(ದೌರ್ಜನ್ಯದ ವಿರುದ್ಧ ಸಜ್ಜಾಗುತ್ತಿದೆ ಅಮ್ಮಂದಿರ ಪಡೆ)
ಈ ಬಗ್ಗೆ ಮಾತನಾಡಿದ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ವರುಣ್ ಗುಪ್ತಾ, ಮುರಳಿ ಮೇಲೆ ಹಿಂದೆ ಈ ರೀತಿಯ ಪ್ರಕರಣ ದಾಖಲೆಯಾದ ಉದಾಹರಣೆಗಳಿಲ್ಲ. ಮಹಿಳೆಗೆ ದೌರ್ಜನ್ಯ ನೀಡಿದ್ದು ಮೇಲ್ನೋಟಕ್ಕೆ ಸಾಬೀತಾಗುತ್ತಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ನಾನು ಈಗಾಗಲೇ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದು ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ತಡೆಗೆ ಮತ್ತು ಕಾಮಾಂಧರಿಗೆ ತಕ್ಕ ಶಿಕ್ಷೆ ಕಲ್ಪಿಸಲು ದೂರು ನೀಡಿದ್ದೇನೆ ಎಂದು ಪ್ರತಿಮಾ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.