ಗೊಲ್ಲರಹಟ್ಟಿಯೊಳಗೆ ಬರದಂತೆ ದಲಿತ ಸಂಸದನ ತಡೆದ ಗ್ರಾಮಸ್ಥರು
ತುಮಕೂರು, ಸೆಪ್ಟೆಂಬರ್ 17: ಗುಡಿಸಲು ಮುಕ್ತ ಯೋಜನೆ ಸಲುವಾಗಿ ನಿರ್ವಸತಿಗರಿಗೆ ಸೂರು ಕಲ್ಪಿಸಲು ಊರಿಗೆ ಬಂದ ಸಂಸದರನ್ನು ದಲಿತ ಎಂಬ ಕಾರಣಕ್ಕೆ ಗ್ರಾಮದೊಳಗೆ ಬಿಡದೇ ಗ್ರಾಮಸ್ಥರು ತಡೆ ಹಿಡಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ಬಿಜೆಪಿ ಸಂಸದ ನಾರಾಯಣಸ್ವಾಮಿ ಅವರನ್ನು ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಊರಿನೊಳಗೆ ಬಿಡದೇ ನಿರ್ಬಂಧ ಹಾಕಲಾಗಿದೆ.
ಯುವತಿ ವಿಚಾರಕ್ಕೆ ದಲಿತ ಯುವಕನಿಗೆ ಬೆಂಕಿ ಹೊತ್ತಿಸಿ ಹತ್ಯೆ
ಖಾಸಗಿ ಕಂಪನಿಗಳ ತಂಡದೊಂದಿಗೆ ಊರಿಗೆ ಬಂದಿದ್ದ ಸಂಸದ ನಾರಾಯಣಸ್ವಾಮಿ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೂ ಭೇಟಿ ನೀಡಿದ್ದರು. ಈ ವೇಳೆ ಎದುರಾದ ಗೊಲ್ಲರಹಟ್ಟಿ ನಿವಾಸಿಯ ಮುಖಂಡರು ಹಟ್ಟಿಯ ಪ್ರವೇಶ ದ್ವಾರದಲ್ಲೇ ಸಂಸದರನ್ನು ತಡೆದು ನಿಲ್ಲಿಸಿ, ಅಲ್ಲಿಯೇ ಕುರ್ಚಿ ಹಾಕಿ ಅಲ್ಲೇ ಕೂರುವಂತೆ ಕೇಳಿಕೊಂಡಿದ್ದಾರೆ. ನಿಮ್ಮ ಜನಾಂಗದವರು ಹಟ್ಟಿ ಒಳಗೆ ಬರಬಾರದು ಎಂದು ತಂಡದಲ್ಲಿದ್ದ ಇನ್ನಿತರರನ್ನು ಹಟ್ಟಿ ಒಳಕ್ಕೆ ಬಿಟ್ಟುಕೊಂಡು, ಇವರನ್ನು ಅಲ್ಲೇ ಕೂರಿಸಿದ್ದಾರೆ. ಅವರನ್ನು ಮನವೊಲಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ.
"ನಾನು ಗೊಲ್ಲರ ಮತದಿಂದ ಗೆದ್ದು ಬಂದಿದ್ದೆನೆ. ಅವರ ಸಮುದಾಯಕ್ಕೆ ಒಳ್ಳೆಯದು ಮಾಡಬೇಕೆಂದು ಬಂದಿದ್ದೇನೆ. ಈ ಒಂದು ಕಾರಣಕ್ಕೆ ನೀವು ಅವಮಾನ ಮಾಡಿದರೂ ಸುಮ್ಮನಿದ್ದೇನೆ" ಎಂದು ಹೇಳಿದರು. ಗೊಲ್ಲರಹಟ್ಟಿ ಒಳಗೆ ಹೋದ ತಂಡದ ಸದಸ್ಯರು ಹೊರಗೆ ಬರುವವರೆಗೂ ಸಂಸದರು ಕಾರಿನಲ್ಲಿ ಕುಳಿತು, ಬಳಿಕ ತಂಡದ ಜತೆ ಮರಳಿದ್ದಾರೆ.