Video: ರಸ್ತೆ ಕೇಳಿದ್ದಕ್ಕೆ ಯುವಕನಿಗೆ ಕಪಾಳಮೋಕ್ಷ ಮಾಡಿದ ಶಾಸಕ ವೆಂಕಟರಮಣಪ್ಪ
ತುಮಕೂರು, ಏಪ್ರಿಲ್ 20: ಪಾವಗಡ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪರಿಂದ ಅವರು ರಸ್ತೆ ದುರಸ್ತಿಯ ಬಗ್ಗೆ ಪ್ರಶ್ನಿಸಿದ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಬುಧವಾರ ಬೆಳಗ್ಗೆ ತಾಲ್ಲೂಕು ಆಡಳಿತ ಕಛೇರಿ ಆವರಣದಲ್ಲಿ ಈ ಘಟನೆ ನಡೆದಿದ್ದು, ಶಾಸಕರು ಕಪಾಳಮೋಕ್ಷ ಆಗಿರೋ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ನಾಗಲಮಡಿಕೆ ಹೋಬಳಿಯ ಹುಸೇನ್ ಪುರದ ನಾಗೇನಹಳ್ಳಿ ನಿವಾಸಿ ನರಸಿಂಹ ಮೂರ್ತಿ, ''ನಮ್ಮೂರಿಗೆ ರಸ್ತೆ ಇಲ್ಲ, ಹದಗೆಟ್ಟೋಗಿದೆ ಸ್ವಾಮಿ, ನಮ್ಮ ಕಡೆ ಕೆಲ ನಾಯಕರು ಕಿವಿಗೊಡುತಿಲ್ಲ ತಾವಾದರೂ ರಸ್ತೆ ಹಾಕಿಸಿ, ಸಾರಿಗೆ ಒದಗಿಸಿ,'' ಎಂದು ಮನವಿ ಮಾಡಿದ. ಹೀಗೆ ಮನವಿ ಮಾಡಿದ್ದೆ ತಡ ಕೆರಳಿದ ಶಾಸಕ ವೆಂಕಟರಮಣಪ್ಪ ಯುವಕ ಕೆನ್ನೆಗೆ ಬಾರಿಸಿ ದರ್ಪ ತೋರಿದ್ದಾರೆ.
ಶಾಸಕರ ಬಳಿ ಮೂಲಭೂತ ಸೌಕರ್ಯ ಕೇಳೋದೆ ತಪ್ಪಾ..
ಶಾಸಕರನ್ನ ಪ್ರಶ್ನೆ ಮಾಡಲೇಬಾರದ? ಪ್ರಶ್ನೆ ಮಾಡುವ ಹಕ್ಕು ಕೂಡ ಮತದಾರರಿಗೆ ಇಲ್ವಾ? ಓಟು ಪಡೆಯುವಾಗ ಕೈಕಾಲಿಗೆ ಬೀಳೋ ಶಾಸಕರು ಗ್ರಾಮಕ್ಕೆ ರಸ್ತೆ ಕೇಳದ್ದನ್ನೆ ದೊಡ್ಡು ತಪ್ಪು ಎಂಬಂತೆ ಹಲ್ಲೆ ನಡೆಸಿರೋದು ಎಷ್ಟರ ಮಟ್ಟಿಗೆ ಸರಿ? ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಯಥಾ ರಾಜ ತಥಾ ಪ್ರಜಾ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೊಡೆದು ಸುದ್ಧಿಯಾಗಿದ್ದರು. ಇದೀಗ ಅವರದ್ದೇ ಪಕ್ಷದ ಪಾವಗಡದ ಎಂಎಲ್ಎ ವೆಂಕಟರಮಣಪ್ಪ ಯುವಕನಿಗೆ ಕಪಾಳ ಮೋಕ್ಷಮಾಡಿ ಸುದ್ದಿಯಾಗುತ್ತಿದ್ದಾರೆ. ಇನ್ನು ವಿಪಕ್ಷ ನಾಯಕರಾಗಿರೋ ಸಿದ್ದರಾಮಯ್ಯರ ಹೊಡಿರೀ ಕಪಾಳಕ್ಕೆ ಅನ್ನೋ ಮಾತು ಕೂಡ ಟ್ರೋಲ್ ಪೇಜ್ ಗಳಲ್ಲಿ ಟ್ರೋಲ್ ಆಗುತ್ತಿದೆ.
ಯುವಕ ಯಾರು.. ಯುವಕನ ಹಿನ್ನೆಲೆ ಏನು?
ನಾಗೇನಹಳ್ಳಿಯ ನಿವಾಸಿಯಾಗಿರುವ ನರಸಿಂಹಮೂರ್ತಿ ತಮ್ಮ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕೊರತೆಯಿದೆ. ರಸ್ತೆ ಸಮರ್ಪಕವಾಗಿಲ್ಲದ ಕಾರಣ ಸಾರಿಗೆ ಸಂಚಾರಕ್ಕೆ ಕಷ್ಟವಾಗ್ತಿದೆ. ನಮ್ಮ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸಿಕೊಡಿ ರಸ್ತೆಯನ್ನು ಸರಿ ಪಡಿಸಿಕೊಡಿ ಎಂದು ಮಾಜಿ ಸಚಿವ, ಹಾಲಿ ಪಾವಗಡ ಶಾಸಕ ವೆಂಕಟರಮಣಪ್ಪ ಕೇಳಿದ್ದೇ ತಡ ರೌದ್ರರಾಗಿ ನರಸಿಂಹ ಮೂರ್ತಿಗೆ ಕಪಾಳ ಮೋಕ್ಷ ಮಾಡಿದ್ದರೆ. ಇದೇ ವೇಳೆ ಅಲ್ಲಿದ್ದ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಕಾಪಾಳ ಮೋಕ್ಷದ ದೃಶ್ಯವನ್ನು ಸೆರೆಹಿಡಿದಿದ್ದು ಇದೀಗ ಆ ವಿಡಿಯೋ ಕೂಡ ಭಾರೀ ವೈರಲ್ ಆಗುತ್ತಿದೆ.
ಘಟನೆ ನಡೆದಿದ್ದು ಎಲ್ಲಿ..
ತಹಸೀಲ್ದಾರ್ ಕಚೇರಿಗೆ ಶಾಸಕ ವೆಂಕಟರಮಣಪ್ಪ ಆಗಮಿಸುವ ವಿಚಾರ ತಿಳಿದ ಯುವಕ ನರಸಿಂಹ ಮೂರ್ತಿ ಶಾಸಕರನ್ನು ಬೇಟಿಯಾಗಿ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಸನ್ನದ್ದವಾಗಿದ್ದ. ತಹಸೀಲ್ದಾರ್ ಕಚೇರಿಯಲ್ಲಿ ಬಗರ್ ಹುಕಂ ಕಮಿಟಿ ಸಭೆಯನ್ನು ಮುಗಿಸಿ ಹೊರ ಬಂದ ಶಾಸಕರಿಗೆ ಎದುರಾಗಿ ನರಸಿಂಹ ಮೂರ್ತಿ ಎದುರಾಗಿದ್ದಾನೆ. ತಮ್ಮೂರಿನ ರಸ್ತೆ , ನೀರಿನ ಸಮಸ್ಯೆ ಹೇಳಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ತಾಳ್ಮೆಯಿಂದ ಸಮಸ್ಯೆಯನ್ನು ಆಲಿಸಬೇಕಾದ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ಕಾಪಾಳಮೋಕ್ಷ ಮಾಡಿ ಹೋಗಿದ್ದಾರೆ.