ತುಮಕೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಎರಡು ಪ್ರತ್ಯೇಕ ಪ್ರಕರಣದಲ್ಲಿ 7ಮಂದಿ ಸಾವು
ತುಮಕೂರು, ಡಿಸೆಂಬರ್ 14: ತುಮಕೂರು ಜಿಲ್ಲೆಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ-4 ಬೀಕರ ರಸ್ತೆ ಅಪಘಾತ ಝೋನ್ ಆಗಿ ಪರಿರ್ತನೆ ಆಗಿದೆ ಎಂಬ ಅನುಮಾನ ಮೂಡುತ್ತಿದೆ. ಕಾರಣ ಈ ಭಾಗದಲ್ಲಿ ಸಾಕಷ್ಟು ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಬುಧವಾರ ಕಾರೊಂದು ಅಪಘಾತಕ್ಕೀಡಾಗಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲೆಯ ಶಿರಾ ತಾಲೂಕಿನ ದೊಡ್ಡಾಲದ ಮರದ ಬಳಿ ಈ ರಸ್ತೆ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಚಿತ್ರದುರ್ಗ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ನಿಯಂತ್ರಣ ತಪ್ಪಿದ ಕಾರು ಸೇತುವೆಯ ತಡೆಗೋಡೆಗೆ ಡಿಕ್ಕಿಹೊಡೆದು ಕೆಳಗೆ ಬಿದ್ದಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ಮೃತಪಟ್ಟವರನ್ನು ಬೆಂಗಳೂರಿನವರು ಎಂದು ಗುರುತಿಸಲಾಗಿದೆ. ಪ್ರಕರಣ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬೆಳಗ್ಗೆಯಷ್ಟೇ ಹೆದ್ದಾರಿಯಲ್ಲೇ ಭೀಕರ ಅಪಘಾತ
ತುಮಕೂರು ಜಿಲ್ಲೆ ಸಮೀಪವೇ ಬುಧವಾರ ಬೆಳಗ್ಗೆ ಕಾರು ಮತ್ತು ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿತ್ತು. ಗುಬ್ಬಿ ತಾಲೂಕಿನ ಕೂಡ್ಲಿ ಕ್ರಾಸ್ ಬಳಿ ಈ ಬೀಕರ ರಸ್ತೆ ಅಪಘಾತ ನಡೆದಿದೆ. ವೇಗವಾಗಿ ಬಂದ ಕಾರು ಮತ್ತು ಕ್ಯಾಂಟರ್ ಮಧ್ಯೆ ಉಂಟಾದ ಡಿಕ್ಕಿಯ ಹೊಡೆತಕ್ಕೆ ಕಾರು ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಒಟ್ಟು ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಈ ಅಪಘಾತದ ವೇಳೆ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿದ್ದರು. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದರಿಂದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಸಹ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ. ಮೃತರು ಒಂದೇ ಕುಟುಂಬದವರು ಎನ್ನಲಾಗಿದೆ. ಚಿಕ್ಕನಾಯಕನಹಳ್ಳಿ ನಿವಾಸಿಗಳಾದ ತಂದೆ ನಾರಾಯಣಪ್ಪ (50), ತಾಯಿ ನಾಗರತ್ನ (45), ಮಗ ಸಾಗರ್ (21) ಮತ್ತು ರಾಮಣ್ಣ (61) ಎಂಬುವವರೇ ಮೃತ ದುರ್ದೈವಿಗಳು. ಅವರೊಂದಿಗೆ ಕಾರಿನಲ್ಲಿ ನಾಯಿ ಸಹ ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ.
ಮೃತರು ತೆಗೆದುಕೊಂಡು ಹೊರಟಿದ್ದ ಕಾರ್ ಹೆದ್ದಾರಿಯಲ್ಲಿನ ಕೆ.ಬಿ ಕ್ರಾಸ್ ಕಡೆಗಿಂದ ತುಮಕೂರು ಜಿಲ್ಲೆಯತ್ತ ಸಾಗಿತ್ತು. ಈವೇಳೆ ಕ್ಯಾಂಟರ್ ನಡುವೆ ಡಿಕ್ಕಿ ಸಂಭವಿಸಿದೆ. ಕ್ಯಾಂಟರ್ ಅನ್ನು ಓವರ್ ಮಾಡುವಾಗ ಅವಘಡ ಸಂಭವಿಸಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.