ಮತ್ತೆ ಮಾತಿನಿಂದಲೇ ಸುದ್ದಿಯಾದ ಮಾಧುಸ್ವಾಮಿ!
ತುಮಕೂರು, ಜನವರಿ 07: "ಜಾಡ್ಸಿ ಒದ್ದುಬಿಟ್ರೆ ಎಲ್ಲಿಗೆ ಹೋಗಿ ಬೀಳ್ತಿಯಾ ಗೊತ್ತಾ ನೀನೀಗಾ?, ರಾಸ್ಕಲ್ ಕತ್ತೆ ಕಾಯೋಕೆ ಹೇಳಿದ್ನಾ ಇಲ್ಲಿ?, ಯಾವ ಸೋಪು ನಿನ್ನ ಹೆಂಡತಿ ಸೀರೆ ತೊಳೆಯೋಕೆ ತಗೋಂಡು ಹೋಗೋದು?" ಇವೆಲ್ಲ ಸಚಿವ ಮಾಧುಸ್ವಾಮಿ ಅವರ ಮಾತುಗಳು.
ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ಇಲಾಖೆ ಸಚಿವ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ. ಸಿ. ಮಾಧುಸ್ವಾಮಿ ಮತ್ತೆ ಸುದ್ದಿಯಾಗಿದ್ದಾರೆ. ಅಧಿಕಾರಿಗಳ ವಿರುದ್ಧ ಅವರು ಬಳಕೆ ಮಾಡಿ ಪದಗಳ ಕಾರಣಕ್ಕಾಗಿಯೇ ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾರೆ.
ಗುರುವಾರ ತುಮಕೂರು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಎಇಇ ಕೆಲಸ ಮಾಡಿಲ್ಲ ಎಂದು ಸಚಿವರು ಕೋಪಗೊಂಡರು. "ರಾಸ್ಕಲ್ಸ್ ಏನ್ ತಿಳಿದುಕೊಂಡಿದ್ದೀರಾ?, ರೆಸಲ್ಯೂಷನ್ ಮಾಡ್ಸಿ ಸಸ್ಪೆಂಡ್ ಮಾಡ್ಸಿ ಈ ನನ್ಮಕ್ಕಳನ್ನ" ಎಂದು ಕೂಗಾಡಿದರು.

ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸಗಳು ಆಗಿಲ್ಲ. ಸಚಿವರು ಸೂಚನೆ ನೀಡಿ ಎಷ್ಟು ದಿನಗಳಾದರೂ ಕೆಲಸಗಳು ಆಗಿಲ್ಲ ಎಂದು ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಸಂಸದ ಬಸವರಾಜ್ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
"ಜಾಡ್ಸಿ ಒದ್ದುಬಿಟ್ರೆ ಎಲ್ಲಿಗೆ ಹೋಗಿ ಬೀಳ್ತಿಯಾ ಗೊತ್ತಾ ನೀನೀಗಾ?, ಯಾವ ಸೋಪು ನಿನ್ನ ಹೆಂಡತಿ ಸೀರೆ ತೊಳೆಯೋಕೆ ತಗೋಂಡು ಹೋಗೋದು?" ಎಂಬ ಸಚಿವರ ನುಡಿಮುತ್ತುಗಳನ್ನು ಕೇಳಿ ಅಧಿಕಾರಿಗಳು ಒಂದು ಕ್ಷಣ ಗಾಬರಿಗೊಂಡರು. ಆದರೆ, ಏನೂ ಮಾಡುವಂತಿಲ್ಲದೇ ಅಸಹಾಯಕರಾದರು.
ಕೆಲವು ತಿಂಗಳ ಹಿಂದೆ ಸಚಿವ ಜೆ. ಸಿ. ಮಾಧುಸ್ವಾಮಿ ಅವರು ಕೋಲಾರದಲ್ಲಿ ರೈತ ಮಹಿಳೆಯನ್ನು ನಿಂದಿಸಿ ಸುದ್ದಿ ಮಾಡಿದ್ದರು. ಇಂದು ಅಧಿಕಾರಿಗಳ ವಿರುದ್ಧ ಬಳಕೆ ಮಾಡಿರುವ ಶಬ್ದಗಳಿಗೆ ಸುದ್ದಿಯಾಗಿದ್ದಾರೆ.
ಅಗೌರವ ತೋರಿಸಿದಂತೆ: ಸಚಿವ ಜೆ. ಸಿ. ಮಾಧುಸ್ವಾಮಿ ಮಾತಿಗೆ ಕಾಂಗ್ರೆಸ್ ನಾಯಕ ಡಾ. ಎಚ್. ಸಿ. ಮಹದೇವಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.
"ಶಾಸನಬದ್ಧವಾಗಿ ಆಯ್ಕೆಯಾದ ಜನಪ್ರತಿನಿಧಿಗಳು ವಿಶ್ವಾಸನೀಯವಾದ ಭಾಷೆಯನ್ನು ಬಳಸದೇ ಇದ್ದರೆ ಅದು ಸಂವಿಧಾನಕ್ಕೆ ಅಗೌರವ ತೋರಿದಂತೆ. ಕಾನೂನು ಸಚಿವರಾದ ಮಾಧುಸ್ವಾಮಿಯವರು ಹೀಗೆ ದರ್ಪದಿಂದ ಮಾತನಾಡುತ್ತಿರುವುದು ಮೊದಲ ಬಾರಿ ಏನಲ್ಲ. ಆದರೂ ಇವರು ಹೇಗೆ ಮಾತನಾಡಿದರೂ ನಡೆಯುತ್ತದೆ ಆದರೆ ಅಹಿಂದ ವರ್ಗಗಳು ಮತ್ತು ತಳ ವರ್ಗದವರು ಮಾತನಾಡಿದಾಗ ಮಾತ್ರ ಅದು ಅಹಂಕಾರ, ದರ್ಪ ಇತ್ಯಾದಿ ಎನಿಸಿಕೊಳ್ಳುತ್ತದೆ" ಎಂದು ಹೇಳಿದ್ದಾರೆ.












Click it and Unblock the Notifications