ಸರ್ಕಾರಿ ಶಾಲೆ, ಇಂದಿರಾ ಕ್ಯಾಂಟೀನ್ನಲ್ಲಿ ಸಿರಿಧಾನ್ಯ ನೀಡಲು ಚಿಂತನೆ: ಪರಮೇಶ್ವರ
ತುಮಕೂರು, ಜನವರಿ 5: ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನ ನೀಡುವ ಬಿಸಿಯೂಟ ಹಾಗೂ ಇಂದಿರಾ ಕ್ಯಾಂಟೀನ್ನಲ್ಲಿ ವಾರದಲ್ಲಿ ಒಂದು ದಿನ ಸಿರಿಧಾನ್ಯದ ಆಹಾರ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ತಿಳಿಸಿದ್ದಾರೆ.
ಶನಿವಾರ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡಬೇಕಿದೆ. ಈ ನಿಟ್ಟಿನಲ್ಲಿ ವಾರದಲ್ಲಿ ಒಂದು ದಿನ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯ ನೀಡುವ ಚಿಂತನೆ ನಡೆದಿದೆ. ಇದರಿಂದ ಸಾವಯವ ಬೆಳೆ ಬೆಳೆಯುವ ರೈತರಿಗೂ ಪ್ರೋತ್ಸಾಹ ನೀಡಿದಂತಾಗಲಿದೆ ಎಂದರು.
ಪ್ರತಿ ತಾಲೂಕಿನಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಅಗತ್ಯವಿದೆ. ಜಿಲ್ಲಾಧಿಕಾರಿಗಳು ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

ಕಳೆದ 40 ವರ್ಷಗಳಿಂದ ಹೆಚ್ಚು ರಾಸಾಯನಿಕ, ಕ್ರಿಮಿನಾಶಕ ಬಳಕೆ ಮಾಡಿರುವುದರಿಂದ ಫಲವತ್ತಾದ ಭೂಮಿ ಬಂಜರಾಗುತ್ತಿವೆ. ಮಣ್ಣು ಶಕ್ತಿ ಕಳೆದುಕೊಂಡಿವೆ. ಹೀಗಾಗಿ ಸರಕಾರ 2004 ರಲ್ಲಿ ಸಾವಯವ ಕೃಷಿ ನೀತಿ ಪ್ರಾರಂಭಿಸಿತು. ಕೊಟ್ಟಿಗೆ ಗೊಬ್ಬರ ಬಳಸಿ ಬೆಳೆಯುವ ಸಾವಯವ ಸಿರಿಧಾನ್ಯಗಳಿಗೆ ರೈತರನ್ನು ಪ್ರೋತ್ಸಾಹಿಸಲು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಸಾವಯವ ಕೃಷಿಯ ನೀತಿ ಇಡೀ ದೇಶಕ್ಕೆ ಮಾದರಿಯಾಗಿದೆ.ಹಿಂದೆಲ್ಲಾ ನವಣೆ, ಸಜ್ಜೆ ಇತರೆ ಸಾವಯವ ಬೆಳೆಗಳನ್ನು ತಿನ್ನುವುದೇ ಕಡಿಮೆ ಇತ್ತು. ಮೊದಲು ಈ ಬೆಳೆಯನ್ನು ಬಡವರು ತಿನ್ನುತ್ತಿದ್ದರು.

ಇಂದು ಈ ಧಾನ್ಯಗಳು ಪ್ರೋಟಿನ್ಯುಕ್ತ ಆಹಾರ ಎಂದು ವೈಜ್ಞಾನಿಕವಾಗಿ ಧೃಡಪಟ್ಟಿದೆ. ಹೀಗಾಗಿ ಈ ಧಾನ್ಯಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸಿಕೊಡಲು ಜನವರಿ ತಿಂಗಳಲ್ಲಿ ದೊಡ್ಡ ಮಟ್ಟದ ಸಿರಿಧಾನ್ಯ ಮೇಳ ಮಾಡಲಾಗುತ್ತಿದೆ ಎಂದರು.












Click it and Unblock the Notifications