ಸಿದ್ದಗಂಗಾ ಮಠಕ್ಕೆ ಸಚಿವ ಎಂ.ಬಿ. ಪಾಟೀಲ್ ದಿಢೀರ್ ಭೇಟಿ
ಜನ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರಿಂದ ಸಿದ್ದಗಂಗಾ ಮಠಕ್ಕೆ ದಿಢೀರ್ ಭೇಟಿ. ಗುರುವಾರ ಸಂಜೆ ಖಾಸಗಿ ವಾಹನದಲ್ಲಿ ಮಠಕ್ಕೆ ಬಂದು ಶ್ರೀಗಳ ಜತೆ ಚರ್ಚೆ.
ತುಮಕೂರು, ಸೆಪ್ಟೆಂಬರ್ 14: ಸಿದ್ದಗಂಗಾ ಮಠಕ್ಕೆ ಜನಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಗುರುವಾರ ಸಂಜೆ ದಿಢೀರ್ ಭೇಟಿ ನೀಡಿ ಹಿರಿಯ ಹಾಗೂ ಕಿರಿಯ ಸ್ವಾಮೀಜಿಗಳ ಜತೆ ಗೌಪ್ಯವಾಗಿ ಸಮಾಲೋಚನೆ ನಡೆಸಿ ಹೋಗಿದ್ದಾರೆಂದು ಮಠದ ಮೂಲಗಳು ತಿಳಿಸಿವೆ.
ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಿದ್ಧಗಂಗಾ ಶ್ರೀಗಳು ಬೆಂಬಲ : ಎಂಬಿ ಪಾಟೀಲ್
ನಿವೃತ್ತ ಡಿಜಿಪಿ ಶಂಕರ ಬಿದರಿ ಅವರೊಡನೆ ಖಾಸಗಿ ಕಾರಿನಲ್ಲಿ ಬಂದಿದ್ದ ಅವರು, ಮೊದಲು ಕಿರಿಯ ಸ್ವಾಮೀಜಿಗಳನ್ನು ಭೇಟಿ ಮಾಡಿ, ಆನಂತರ ಹಿರಿಯ ಶ್ರೀಗಳನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆಂದು ಹೇಳಲಾಗಿದೆ.
ಸ್ವಾಮೀಜಿಗಳ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ''ಇದು ನಮ್ಮ ಮಠ. ಈಗ ಯಾವುದೇ ವಿವಾದವಿಲ್ಲ. ಶ್ರೀಗಳ ದರ್ಶನ ಪಡೆಯಬೇಕೆಂದೆನಿಸಿ ಇಲ್ಲಿಗೆ ಆಗಮಿಸಿದ್ದೇನಷ್ಟೇ'' ಎಂದರು.
ಆನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಮಠದ ಕಿರಿಯ ಶ್ರೀಗಳು, ''ಕಳೆದ ಮೂರು ನಾಲ್ಕು ದಿನಗಳಿಂದ ನಡೆದ ವಿದ್ಯಮಾನಗಳಿಂದಾಗಿ ಬೇಸತ್ತಿದ್ದ ಪಾಟೀಲರು, ಮಠಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆದರು'' ಎಂದು ತಿಳಿಸಿದರು.
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಭುಗಿಲೆದ್ದಿರುವ ಹೋರಾಟದ ಹಿನ್ನೆಲೆಯಲ್ಲಿ ಇತ್ತೀಚೆಗೆ, ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಪಾಟೀಲ್, ಸಿದ್ದಗಂಗಾ ಮಠದ ಹಿರಿಯ ಸ್ವಾಮಿಗಳಾದ ಶ್ರೀ ಶಿವಕುಮಾರ ಸ್ವಾಮಿಗಳು ಲಿಂಗಾಯತ ಪ್ರತ್ಯೇಕ ಧರ್ಮವಾಗುವ ಬಗ್ಗೆ ತಮ್ಮಲ್ಲಿ ಹೇಳಿಕೊಂಡಿದ್ದಾರೆಂದು ತಿಳಿಸಿದ್ದರು.
ಎಂ.ಬಿ.ಪಾಟೀಲರ ಜೀವನದಲ್ಲೇ ಇದು ಹೀನ ಕೃತ್ಯ: ಎಚ್ ಡಿಕೆ ತರಾಟೆ
ಸಚಿವರ ಈ ಹೇಳಿಕೆ ಬೆನ್ನಲ್ಲೇ ಮಠದಿಂದ ಅಧಿಕೃತ ಪ್ರಕಟಣೆಯೊಂದು ಹೊರಬಿದ್ದು, ಅದರಲ್ಲಿ ''ಹಿರಿಯ ಶ್ರೀಗಳು ಸಚಿವ ಎಂ.ಬಿ. ಪಾಟೀಲ್ ಅವರೊಡನೆ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಇಚ್ಛೆ ವ್ಯಕ್ತಪಡಿಸಿಲ್ಲ. ಪಾಟೀಲರು ಶ್ರೀಗಳೊಂದಿಗೆ ಇತ್ತೀಚೆಗೆ ಮಠದಲ್ಲಿ ಭೇಟಿಯಾಗಿ ಮಾತುಕತೆ ನಡೆದಿದ್ದಾಗ ಹಿರಿಯ ಶ್ರೀಗಳು ಲಿಂಗಾಯತ ಪ್ರತ್ಯೇಕ ಧರ್ಮ ಆಗುವುದು ಬೇಡ. ಲಿಂಗಾಯತ, ವೀರಶೈವ ಎರಡೂ ಒಂದೇ ಎಂದು ತಿಳಿಸಿದ್ದರು. ಇದನ್ನು ಪಾಟೀಲ್ ಅವರು ತಪ್ಪಾಗಿ ಅರ್ಥೈಸಿ, ಅದನ್ನೇ ಹೇಳಿಕೆಯಾಗಿ ನೀಡಿದ್ದಾರೆ'' ಎಂದು ಹೇಳಿತ್ತು.
ಮಾತೆ ಮಹಾದೇವಿ ವಿರುದ್ಧ ಒನ್ ಇಂಡಿಯಾ ಓದುಗರ ಆಕ್ರೋಶ
ಮಠದ ಈ ಪ್ರಕಟಣೆ ಹೊರಬಿದ್ದ ಕೂಡಲೇ ಪಾಟೀಲರ ಮೇಲೆ, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಶ್ರೀಗಳನ್ನು ಎಳೆದು ತಂದು ರಾಜಕೀಯ ಮಾಡಿದ್ದಾರೆಂದು ಭಾರೀ ಟೀಕೆಗಳು ಹರಿದುಬಂದಿದ್ದವು.
ಆದರೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಪಾಟೀಲರು, ''ಶ್ರೀಗಳು ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕೆಂದು ನನ್ನ ಬಳಿ ಹೇಳಿದ್ದು ನಿಜ. ನಾನು ತಪ್ಪಾಗಿ ಅರ್ಥೈಸಿಲ್ಲ. ನಾನು ಸುಳ್ಳು ಹೇಳಿದ್ದರೆ ನನ್ನ ಕುಟುಂಬ ಸರ್ವನಾಶವಾಗಲಿ'' ಎಂದಿದ್ದರು.
ಹೀಗೆ, ಇದು ದೊಡ್ಡ ವಿವಾದವಾಗಿ ಬೆಳೆದು ನಿಂತ ಬೆನ್ನಲ್ಲೇ, ಗುರುವಾರ (ಸೆ. 14) ಸಂಜೆ ಸಿದ್ದಗಂಗಾ ಮಠಕ್ಕೆ ಪಾಟೀಲರು ದಿಢೀರ್ ಭೇಟಿ ನೀಡಿ, ಹಿರಿಯ ಹಾಗೂ ಕಿರಿಯ ಶ್ರೀಗಳೊಂದಿಗೆ ಗೌಪ್ಯವಾಗಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.