ಉಪ ಚುನಾವಣೆ: ಕೊರೊನಾ ವೈರಸ್ಗೆ ಸೆಡ್ಡು ಹೊಡೆದ ರಾಜಕೀಯ ಪಕ್ಷಗಳು!
ಬೆಂಗಳೂರು, ಅ. 08: ನಮ್ಮ ರಾಜಕಾರಣಿಗಳೆ ಹಾಗೆ. ಯಾವುದೇ ನಕಾರಾತ್ಮಕ ಪರಿಸ್ಥಿತಿಯನ್ನು ಸಕಾರಾತ್ಮಕವಾಗಿಯೇ ಸ್ವೀಕಾರ ಮಾಡುತ್ತಾರೆ. ಪರಿಸ್ಥಿತಿ ಎಂಥದ್ದೆ ಇರಲಿ ಅದನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವ ಕಲೆ ರಾಜಕೀಯ ನಾಯಕರಿಗೆ ಕರತಲಾಮಲಕ. ಇದೀಗ ಅದು ಕೊರೊನಾ ವೈರಸ್ ಸಂಕಷ್ಟ ಕಾಲದ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗುತ್ತಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಎರಡು ಕ್ಷೇತ್ರಗಳ ಉಪ ಚುನಾವಣೆ ಮೂರು ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿವೆ. ಎಲ್ಲ ಪಕ್ಷಗಳಿಗೂ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ಮತ್ತೊಂದೆಡೆ ಕೊರೊನಾ ವೈರಸ್ ಹಾವಳಿಯಿಂದ ಮತ್ತೊಂದು ಸಂಕಷ್ಟವನ್ನು ರಾಜಕೀಯ ಪಕ್ಷಗಳು ಎದುರಿಸುತ್ತಿವೆ. ಇದೀಗ ಕೊರೊನಾ ವೈರಸ್ಗೆ ಸೆಡ್ಡು ಹೊಡೆಯುವಂತೆ ಪ್ರಚಾರದ ಸಿದ್ಧತೆಯನ್ನು ರಾಜಕೀಯ ಪಕ್ಷಗಳು ಮಾಡಿಕೊಳ್ಳುತ್ತಿವೆ.
ಚುನಾವಣಾ ಆಯೋಗದ ಮಾರ್ಗಸೂಚಿಯನ್ನೇ ಪ್ರಚಾರಕ್ಕಾಗಿ ಬಳಸಿಕೊಳ್ಳುವ ತಂತ್ರಗಾರಿಕೆಯನ್ನು ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಹೌದು, ಚುನಾವಣಾ ನೀತಿ ಸಂಹಿತೆಯಲ್ಲಿ ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಿದ್ದು, ಇದೀಗ ಆ ಮಾಸ್ಕ್ನ್ನೆ ಪ್ರಚಾರ ಮಾಡಲು ಬಳಸಲಾಗುತ್ತಿದೆ.
ಪ್ರಚಾರ ಸಾಮಗ್ರಿಯಾಗಿ ಪರಿವರ್ತನೆಗೊಂಡಿರುವ ವಿವಿಧ ರೀತಿಯ ಮಾಸ್ಕ್ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಮಾಸ್ಕ್ಗಳ ಮೇಲೆ ಅಭ್ಯರ್ಥಿಯ ಭಾವಚಿತ್ರ ಹಾಗೂ ಪಕ್ಷದ ಚಿಹ್ನೆಯನ್ನು ಮುದ್ರಿಸಿ ಕಾರ್ಯಕರ್ತರಿಗೆ ವಿತರಿಸಲಾಗುತ್ತಿದೆ. ಅಲ್ಲದೆ ಮತದಾರರಿಗೂ ಕೂಡ ಈ ಮಾಸ್ಕ್ ವಿತರಿಸಲಾಗುತ್ತಿದೆ. ಶಿರಾ ಕ್ಷೇತ್ರದಲ್ಲಿ ಮೊದಲಿಗೆ ಕಾಣಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ಮಾಸ್ಕ್ಗಳ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಹಾಗೂ ಪಕ್ಷದ ಚಿಹ್ನೆ ಹಸ್ತದ ಗುರುತನ್ನು ಪ್ರಿಂಟ್ ಮಾಡಲಾಗಿದೆ. ಈ ಮಾಸ್ಕ್ಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಧರಿಸಿಕೊಂಡು ಕ್ಷೇತ್ರದಲ್ಲಿ ಓಡಾಡುತ್ತಿರುವುದು ಕಂಡುಬರುತ್ತಿದೆ.
ಚುನಾವಣಾ ಪ್ರಚಾರದ ಸಾಮಗ್ರಿಯಾಗಿ ಮಾಸ್ಕ್ ಬಳಕೆ ಮಾಡಲಾಗುತ್ತಿದೆ. ಮಾಸ್ಕ್ ಮೇಲೆ ಅಭ್ಯರ್ಥಿಯ ಭಾವಚಿತ್ರ ಹಾಗೂ ಪಕ್ಷದ ಚಿಹ್ನೆಯನ್ನು ಮುದ್ರಿಸಿ ಕಾರ್ಯಕರ್ತರಿಗೆ ವಿತರಿಸಲಾಗುತ್ತಿದೆ.