ಮಧುಗಿರಿಯಲ್ಲಿ ದಶಕದ ನಂತರ ಎಡಬಿಡದ ಕುಂಭದ್ರೋಣ ಮಳೆ
ತುಮಕೂರು, ಅಕ್ಟೋಬರ್ 06 : ಮಧುಗಿರಿ ತಾಲೂಕಿನಲ್ಲಿ ದಶಕದ ನಂತರ ಸುರಿಯುತ್ತಿರುವ ಎಡಬಿಡದ ಕುಂಭದ್ರೋಣ ಮಳೆಗೆ ಬಹುತೇಕ ಕೆರೆ-ಕಟ್ಟೆಗಳು ಭರ್ತಿಯಾವೆ. ಭಾನುವಾರ ರಾತ್ರಿ ಐದು ತಾಸಿಗೂ ಹೆಚ್ಚು ಕಾಲ ಸುರಿದ ಮಳೆಗೆ 25ಕ್ಕೂ ಹೆಚ್ಚು ಕೆರೆಗಳ ಕೋಡಿ ಬಿದ್ದಿವೆ. ಭಾರೀ ಮಳೆಯಿಂದಾಗಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆ ಮುಳುಗಡೆಯಾಗಿದೆ. ಸೇತುವೆ, ರಸ್ತೆಗಳು ಕೊಚ್ಚಿಹೋಗಿವೆ.
ಸುಮಾರು 12 ವರ್ಷಗಳ ನಂತರ ತಾಲೂಕಿನ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರಲ್ಲಿ ಮಂದಹಾ ಮೂಡಿದ್ದರೆ. ಬೆಳೆದು ನಿಂತಿದ್ದ ಬೆಳೆ ಜಲಾವೃತವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ತಾಲೂಕಿನ ವ್ಯಾಪ್ತಿಯಲ್ಲಿ ಸರಾಸರಿ 70 ಮಿ.ಮೀ. ಮಳೆಯಾಗಿದೆ. [ಭಾನುವಾರ ರಜೆ ಪಡೆಯದ ವರುಣ ತಂದ ಅವಾಂತರಗಳು]
ವರುಣನ ಆರ್ಭಟಕ್ಕೆ ತಾಲೂಕಿನ 50 ಕೆರೆಗಳಿಗೆ ನೀರು ಬಂದಿದ್ದು, ಬಹುತೇಕ ಕೆರೆಗಳು ಭರ್ತಿಯಾಗಿವೆ. ಹಲವು ಕೆರೆಗಳು ಕೋಡಿ ಬೀಳುವ ಹಂತ ತಲುಪಿವೆ. ಕಸಬಾ ಹೋಬಳಿ ವ್ಯಾಪ್ತಿಯ ಸಿದ್ದಾಪುರ, ಮರವೇಕೆರೆ, ಮರಿತಿಮ್ಮನಹಳ್ಳಿ, ಶೆಟ್ಲುಕೆರೆಗಳು ತುಂಬಿವೆ.
ಮಿಡಿಗೇಶಿ ಹೋಬಳಿಯ ಹಾಗೂ ತಾಲೂಕಿನ ಅತಿ ದೊಡ್ಡ ಹನುಮಂತಪುರ ಕೆರೆ ಕೋಡಿ ಬಿದ್ದಿದೆ. ಹೊಸಕೆರೆ, ಬಿದರಕೆರೆ ಕೆರೆಗಳು ಭರ್ತಿಯಾಗಿವೆ. ಐ.ಡಿ.ಹಳ್ಳಿ ಹೋಬಳಿಯ ಗರಣಿ ಕೆರೆ, ದೊಡ್ಡೇರಿ ಹೋಬಳಿಯ ರಂಗಾಪುರ, ಗೂಬಲಗುಟ್ಟೆ ಕೆರೆಗಳು ತುಂಬಿ ಭಾರೀ ಪ್ರಮಾಣದ ನೀರು ಕೋಡಿ ಮೂಲಕ ಹೊರ ಹರಿಯುತ್ತಿದೆ. ಮಳೆಯ ಅವಾಂತರಗಳನ್ನು ಚಿತ್ರಗಳಲ್ಲಿ ನೋಡಿ.....
ಮಳೆಯಿಂದಾಗಿ ಮನೆಗಳಿಗೆ ಹಾನಿ
ಮಧುಗಿರಿ ಪಟ್ಟಣದ ರಾಘವೇಂದ್ರ ಬಡಾವಣೆ ಹಾಗೂ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿ ಹಾನಿ ಉಂಟಾಗಿದೆ. ರಾಘವೇಂದ್ರ ಬಡಾವಣೆ ಕೆರೆಯಂತಾಗಿದೆ. ಕಸಬಾ ವ್ಯಾಪ್ತಿಯಲ್ಲಿ 18, ದೊಡ್ಡೇರಿಯಲ್ಲಿ 8, ಪುರವರದಲ್ಲಿ 4, ಐ.ಡಿ.ಹಳ್ಳಿಯಲ್ಲಿ 18 ಮನೆಗಳು ಕುಸಿದಿವೆ.
ಕೊಚ್ಚಿ ಹೋದ ರಸ್ತೆಗಳು
ಮಧುಗಿರಿ ಹೊರವಲಯದ ಕೆರೆಗಳಪಾಳ್ಯ, ಮಿಡಿಗೇಶಿ ಹೋಬಳಿಯ ಚಿನ್ನೇನಹಳ್ಳಿ, ಭಕ್ತರಹಳ್ಳಿ ಸಮೀಪ ಸೇತುವೆಗಳು ಕುಸಿದು ಬಿದ್ದಿದ್ದು, ರಸ್ತೆ ಕಾಮಗಾರಿಗೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆಗಳು ಕೊಚ್ಚಿಹೋಗಿವೆ. ಇದರಿಂದ ಸೋಮವಾರ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ನೂರಾರು ಎಕರೆ ಬೆಳೆ ಮುಳುಗಡೆ
ಭಾರೀ ಮಳೆಯಿಂದಾಗಿ ಕೆರೆಗಳು ಕೋಡಿ ಬಿದ್ದ ಪರಿಣಾಮ ನೂರಾರು ಎಕರೆಯಲ್ಲಿ ಬೆಳೆದಿದ್ದ ಫಸಲು ಮುಳುಗಡೆಯಾಗಿ ಕೋಟ್ಯಾಂತರ ರೂ. ನಷ್ಟ ಸಂಭವಿಸಿದೆ. ಮಿಡಿಗೇಶಿ ಹೋಬಳಿಯ ನೀರಕಲ್ಲು ಗ್ರಾಮದ ಬಳಿ 160 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಶೇಂಗಾ, ರಾಗಿ, ಜೋಳದ ಫಸಲು ಮುಳುಗಡೆಯಾಗಿದ್ದು, ಭಾರೀ ಪ್ರಮಾಣದ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಕೆರೆಗಳಿಗೆ ಬಾಗಿನ ಬಿಟ್ಟ ಜನರು
ಭರ್ತಿಯಾದ ಕೆರೆಗಳಿಗೆ ಆಯಾ ಭಾಗದ ಸ್ಥಳೀಯ ಮುಖಂಡರು, ಗ್ರಾಮಸ್ಥರು ಬಾಗಿನ ಬಿಡುತ್ತಿದ್ದ ದೃಶ್ಯ ಸೋಮವಾರ ಕಂಡುಬಂದವು.
ಪರಿಹಾರಕ್ಕಾಗಿ ಜನರ ಆಗ್ರಹ
ನೀರಕಲ್ಲು ಗ್ರಾಮಕ್ಕೆ ಸೇರಿದ 160 ಎಕರೆಯಲ್ಲಿ ಬೆಳೆದಿದ್ದ ಶೇಂಗಾ, ರಾಗಿ, ಜೋಳದ ಫಸಲು ನಾಶವಾಗಿದ್ದು, ಬರದಿಂದ ತತ್ತರಿಸಿದ್ದ ರೈತರು ಈಗ ನೆರೆಯಿಂದ ನಷ್ಟಕ್ಕೆ ಗುರಿಯಾಗಿದ್ದಾರೆ. ಜಿಲ್ಲಾಡಳಿತ ಕೂಡಲೇ ಪರಿಹಾರ ಘೋಷಿಸಿ ನೆರವಿಗೆ ಧಾವಿಸಿ ಬರಬೇಕು ಎಂದು ರೈತರು ಆಗ್ರಹಿಸಿದ್ದಾರೆ.