ಲೋಕ ಜಂಗಮ: ಸಿದ್ದಗಂಗಾಶ್ರೀಗಳ ಸಮಗ್ರ ಸಾಕ್ಷ್ಯಚಿತ್ರ
"ಈ ಭೂಮಿ ಮತ್ತು ಅದರ ಮೇಲಿರುವ ನನ್ನ ಬದುಕಿನಲ್ಲಿ ನಾನು ಎಷ್ಟು ಮುಳುಗಿದ್ದೇನೆಂದರೆ, ಸ್ವರ್ಗ ಮತ್ತು ದೇವತೆಗಳ ಬಗೆಗೆ ಯೋಚನೆ ಮಾಡಲೂ ಸಾಧ್ಯವಿಲ್ಲದಷ್ಟು" ಎಂದು ಕ್ರಿಯಾಶೀಲ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಈ ಮಾತಿನಂತೆ ಲೋಕದ ಬಡಮಕ್ಕಳಿಗೊಂದು ಭರವಸೆಯ ಭವಿಷ್ಯವನ್ನು ಒದಗಿಸುವ ಮಹಾಮಣಿಹದಲ್ಲಿ ಸಂಪೂರ್ಣವಾಗಿ ಲೀನವಾಗಿರುವ ಒಂದು ದಿವ್ಯ ಚೇತನ ಸಿದ್ದಗಂಗಾ ಮಠದ ಕ್ಷೇತ್ರಾಧ್ಯಕ್ಷರಾದ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಗಳು. ತ್ರಿವಿಧ ದಾಸೋಹಿ ಸಿದ್ದಗಾಂಗಾಶ್ರೀ ಪರಮಪೂಜ್ಯ ಶಿವಕುಮಾರ ಸ್ವಾಮೀಜಿಯವರ ಬದುಕಿನ ಹಾದಿಯ ಕುರಿತ ಸಮಗ್ರ ಸಾಕ್ಷ್ಯಚಿತ್ರ ಸಿದ್ಧವಾಗಿದೆ.
ಪರಮಪೂಜ್ಯರಾದ ಡಾ.ಶಿವಕುಮಾರ ಸ್ವಾಮೀಜಿಯವರು ಜಗತ್ತು ಕಂಡ ಒಂದು ಅಚ್ಚರಿ. ತಮ್ಮ ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳ ಕಾಲ ನಿರಂತರವಾಗಿ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತ, ಅಂತಸ್ತುಗಳನ್ನೆಣಿಸದೇ ಅನ್ನ ದಾಸೋಹದ ಜೊತೆಗೆ ಅಕ್ಷರವನ್ನು ಕಲಿಸಿ ಅವರ ಬಾಳು ಉತ್ತಮ ಮಾರ್ಗದಲ್ಲಿ ಸಾಗಲು ಅಡಿಗಲ್ಲು ಹಾಕಿಕೊಟ್ಟ ಸಿದ್ದಗಂಗೆಯ ಸಿದ್ದಿಪುರುಷರು ಪೂಜ್ಯ ಸ್ವಾಮೀಜಿಯವರು. [ಸಿದ್ದಗಂಗಾಶ್ರೀಗಳಿಗೆ 'ಭಾರತ ರತ್ನ' ನೀಡಿ ಒಕ್ಕೊರಲ ದನಿ]
ಲೋಕವೇ ವಿಸ್ಮಯಗೊಳ್ಳುವಂಥ ಸೇವಾಕಾರ್ಯಗಳಲ್ಲಿ ಹಗಲಿರುಳೆನ್ನದೇ ತಮ್ಮನ್ನು ತೊಡಗಿಸಿಕೊಂಡಿರುವ ಇಂಥ ಪುಣ್ಯಪುರುಷರ ಬದುಕಿನ ಹಾದಿಯ ಕುರಿತು ಸಿದ್ದಗೊಳ್ಳುತ್ತಿರುವ ಸಮಗ್ರ ಸಾಕ್ಷ್ಯಚಿತ್ರವೇ ಪರಮೇಶ್ವರ್ ಮತ್ತವರ ತಂಡ ರೂಪಿಸುತ್ತಿರುವ "ಲೋಕ ಜಂಗಮ".
"ಲೋಕ ಜಂಗಮ" ಸಾಕ್ಷ್ಯಚಿತ್ರದಲ್ಲಿ 107 ವಸಂತಗಳನ್ನು ಕಂಡು 108ರ ಹೊಸ್ತಿನಲ್ಲಿ ಮುನ್ನಡೆಯುತ್ತಿರುವ, ಪೂಜ್ಯರಾದ ಡಾ. ಶಿವಕುಮಾರ ಸ್ವಾಮಿಜಿಯವರು ನಡೆದು ಬಂದ ದಾರಿ, ಸಿದ್ದಗಂಗೆ ಪುಣ್ಯ ಕ್ಷೇತ್ರದ ಮಹಾತ್ಮೆ ಹಾಗೂ ಇತಿಹಾಸ ಇವುಗಳನ್ನು ಪರಿಣಾಮಕಾರಿಯಾಗಿ ತರುವ ಪ್ರಯತ್ನವಾಗಿ ಮೂಡಿ ಬರುತ್ತಿದೆ. ಸಿದ್ದಗಂಗಾಶ್ರೀಗಳ ಕುರಿತ ಸಾಕ್ಷ್ಯಚಿತ್ರದ ಬಗೆಗಿನ ಇನ್ನಷ್ಟು ಮಾಹಿತಿ ಚಿತ್ರ ಸಂಪುಟದಲ್ಲಿದೆ ಶರಣು ಬನ್ನಿ...

ಶರಣ ಧರ್ಮದ ಮಠಗಳು ನಡೆದು ಬಂದ ದಾರಿ
ಇವೆಲ್ಲದರ ಜೊತೆಗೆ ಕರ್ನಾಟಕದ ಶೈಕ್ಷಣಿಕ ಹಾಗೂ ಸಾಮಾಜಿಕ ಸುಧಾರಣೆಯಲ್ಲಿ ಮಹತ್ವದ ಪಾತ್ರವಹಿಸಿದ ಶರಣ ಧರ್ಮದ ಮಠಗಳು ನಡೆದು ಬಂದ ದಾರಿ, ಅವುಗಳ ಇತಿಹಾಸ, ಸಮಾಜ ನಿರ್ಮಾಣ ಕಾರ್ಯದಲ್ಲಿನ ಶರಣ ಮಠಗಳ ಪಾತ್ರ, ಹನ್ನೆರಡನೇಯ ಶತಮಾನದ ಬಸವ ಕ್ರಾಂತಿಯ ತತ್ವ ಸಿದ್ದಾಂತಗಳು, 'ದಾಸೋಹ' ತತ್ವ, ಆದರ್ಶಗಳೇ ಮೊದಲಾದ ಶರಣ ಸಂಪ್ರದಾಯದ ಕುರಿತ ಹಲವು ವಿವರಗಳನ್ನು ಈ ಸಾಕ್ಷ್ಯಚಿತ್ರದಲ್ಲಿ ಕಟ್ಟುವ ಕೆಲಸವನ್ನು ಸಾಕ್ಷ್ಯಚಿತ್ರದ ತಂಡ ಮಾಡಿದೆ.

ಪರಮೇಶ್ವರ ಅವರ ಸಮರ್ಥ ನಿರ್ದೇಶನ
ಜೆ.ಕೆ ಮೂವೀಸ್ ಸಂಸ್ಥೆಯಡಿ ಜರಗನಹಳ್ಳಿ ಕಾಂತರಾಜುರವರು ನಿರ್ಮಿಸುತ್ತಿರುವ ಈ ಸಾಕ್ಷ್ಯಚಿತ್ರವನ್ನು ಯುವ ನಿರ್ದೇಶಕರಾದ ಪರಮೇಶ್ವರ ಮತ್ತವರ ತಂಡ ಸೇರಿ ಅತ್ಯಂತ ಶ್ರದ್ಧೆ, ಪರಿಶ್ರಮದಿಂದ ರೂಪಿಸುತ್ತಿದ್ದಾರೆ. ಈ ಹಿಂದೆ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಕುರಿತ 'ಮತ್ತೆ ಮತ್ತೆ ತೇಜಸ್ವಿ' ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ ಅನುಭವ ಪರಮೇಶ್ವರ್ ಅವರಿಗಿದೆ.

ಶ್ರೀಗಳು, ಶ್ರೀಮಠದ ಬಗ್ಗೆ ಸಮಗ್ರ ಮಾಹಿತಿ
ಈಗಾಗಲೇ ಪೂಜ್ಯರ ಹಾಗೂ ಶ್ರೀಮಠದ ಕುರಿತು ಹಲವು ಸಾಕ್ಷ್ಯಚಿತ್ರಗಳು ಬಂದಿವೆ. ಆದರೆ 'ಲೋಕ ಜಂಗಮ' ಸಾಕ್ಷ್ಯಚಿತ್ರವು ತನ್ನ ಆಳವಾದ ವಿಷಯ ಸಂಗ್ರಹ, ಆಸಕ್ತಿದಾಯಕವಾಗಿ ನೋಡಿಸಿಕೊಂಡು ಹೋಗುವ ನಿರೂಪಣಾ ಶೈಲಿಗಳಿಂದಾಗಿ ತುಂಬಾ ವಿಭಿನ್ನವಾದ, ವಿನೂತನವಾದ ಸಾಕ್ಷ್ಯಚಿತ್ರವಾಗಲಿದೆ. ಶ್ರೀಗಳು, ಶ್ರೀಮಠದ ಬಗ್ಗೆ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ

ನಾಡಿನ ಹಲವೆಡೆ ಚಿತ್ರೀಕರಣ ನಡೆಸಲಾಗಿದೆ
ಸುಮಾರು ಒಂದು ವರ್ಷಗಳ ಕಾಲ ತುಮಕೂರು, ಮೈಸೂರು, ಬೆಂಗಳೂರು, ಚಾಮರಾಜನಗರ, ಮಾಗಡಿ ತಾಲ್ಲೂಕು, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ನೆಲೆಸಿರುವ ಮಠದ ಹಾಗೂ ಪರಮಪೂಜ್ಯರ ಹಲವು ಅಪರೂಪದ ಸುಮಾರು 90 ಜನ ಒಡನಾಡಿಗಳನ್ನು, ಭಕ್ತರನ್ನು, ಹಳೆಯ ವಿದ್ಯಾರ್ಥಿಗಳನ್ನು, ಹಲವು ಧರ್ಮಗಳ ಮಠಾಧೀಶರನ್ನು, ಶರಣ ಪರಂಪರೆಯ ಕುರಿತು ಆಳವಾಗಿ ಸಂಶೋಧನೆ ಮಾಡಿರುವ ವಿದ್ವಾಂಸರನ್ನೂ ಮಾತನಾಡಿಸಿ ಸಾಕ್ಷ್ಯಚಿತ್ರಕ್ಕಾಗಿ ಮಾಹಿತಿ ಸಂಗ್ರಹ ಹಾಗೂ ಚಿತ್ರೀಕರಣ ಮಾಡಿಕೊಳ್ಳಲಾಗಿದೆ.

ಹಿರಿಯ ಮಾರ್ಗದರ್ಶನವಿರುವ ಅಪೂರ್ವ ಕೃತಿ ಇದು
ಈ ಸಾಕ್ಷ್ಯಚಿತ್ರವನ್ನು ಪರಮಪೂಜ್ಯ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ, ದಿವಂಗತ ರಾಷ್ಟ್ರಕವಿ ಡಾ||ಜಿ.ಎಸ್ ಶಿವರುದ್ರಪ್ಪ,ಹಿರಿಯ ಸಂಶೋಧಕರಾದ ಡಾ|| ಎಮ್.ಎಮ್ ಕಲ್ಬುರ್ಗಿ,ಪ್ರೊ.ಹೆಚ್.ವಿ ವೀರಭದ್ರಯ್ಯ,ಡಾ||ಎಂ.ಜಿ ನಾಗರಾಜ್ ಮೊದಲಾದ ಹಿರಿಯರು ಹಾಗೂ ಸಂಶೋಧಕರ ಮಾರ್ಗದರ್ಶನ ರೂಪಿಸಲಾಗಿದೆ.

ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆ
ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಸಿದ್ದವಾಗುತ್ತಿರುವ "ಲೋಕ ಜಂಗಮ" ಸಾಕ್ಷ್ಯಚಿತ್ರವು ಡಿವಿಡಿ ರೂಪದಲ್ಲಿ ಬಿಡುಗಡೆಗೊಳಿಸಲು ಅಂತಿಮ ಸಿದ್ದತೆ ನಡೆದಿದೆ.
ಸಾಕ್ಷ್ಯಚಿತ್ರದ ಟ್ರೈಲರ್ ಇಲ್ಲಿದೆ ನೋಡಿ
ಸಾಕ್ಷ್ಯಚಿತ್ರದ ಟ್ರೈಲರ್ ಇಲ್ಲಿದೆ ನೋಡಿ ಇಲ್ಲಿ ಲಿಂಕ್ ಓಪನ್ ಆಗದಿದ್ದರೆ ಯೂಟ್ಯೂಬ್ ವೆಬ್ ತಾಣಕ್ಕೆ ಭೇಟಿ ನೀಡಿ Loka Jangama ಎಂದು ಸರ್ಚ್ ಬಾರ್ ನಲ್ಲಿ ಟೈಪ್ ಮಾಡಿದರೆ ಸಾಕ್ಷ್ಯಚಿತ್ರದ ಮುನ್ನೋಟ ನಿಮ್ಮ ಕಣ್ಮುಂದೆ ಸಿಗಲಿದೆ.

ನಿರ್ದೇಶಕ ಪರಮೇಶ್ವರ. ಕೆ ಕಿರುಪರಿಚಯ
* ಬೆಂಗಳೂರು ವಿಶ್ವವಿದ್ಯಾನಿಲಯದ ಎಂ.ಕಾಂ ಪದವಿ. ಮೂಲತಃ ರಂಗಭೂಮಿ ಹಿನ್ನೆಲೆ.
* 2010-2011ನೇ ಸಾಲಿನಲ್ಲಿ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಅಧ್ಯಾಯದಿಂದ ರಂಗಭೂಮಿ ಡಿಪ್ಲೊಮ.
* ಸುಮಾರು 8 ವರ್ಷಗಳಿಂದ ನಟನೆ,ನಿರ್ದೇಶನ, ಬೆಳಕಿನ ವಿನ್ಯಾಸ, ರಂಗಸಜ್ಜಿಕೆ, ವಸ್ತ್ರವಿನ್ಯಾಸ, ಸಂಘಟನೆ ಹೀಗೆ ರಂಗಭೂಮಿಯ ಹಲವಾರು ವಿಭಾಗಗಳಲ್ಲಿ ಕಾರ್ಯನಿರ್ವಹಣೆ.
* ಕಾನೂರು ಹೆಗ್ಗಡತಿ, ಸಿರಿಸಂಪಿಗೆ, ಕಥನ, ಮಿಸ್. ಸದಾರಮೆ, ಕಥೆ ಹೇಳ್ತೀವಿ, ಶಾಂಡಿಲ್ಯ ಪ್ರಹಸನ, ಚೆರಿ ಆರ್ಚರ್ಡ್, ಉತ್ತರರಾಮ ಚರಿತ, ಪ್ರಮೀಳಾರ್ಜುನೀಯಂ, ನಾಯಿಕಥೆ, ಸೇವಂತಿ ಪ್ರಸಂಗ, ಚಿರಕುಮಾರ ಸಭಾ, ವಿಶಾಕೇ ಮೊದಲಾದ ನಾಟಕಗಳಲ್ಲಿ ನಟನೆ, ರಂಗಸಜ್ಜಿಕೆ, ಬೆಳಕಿನ ವಿನ್ಯಾಸ, ಸಂಘಟನೆ ಮೊದಲಾದ ವಿಭಾಗಗಳಲ್ಲಿ ಸಕ್ರಿಯ ದುಡಿಮೆ.
* 2012ರಲ್ಲಿ "ಕರ್ನಾಟಕ ಚಲನಚಿತ್ರ ಅಕಾಡೆಮಿ" ಯಿಂದ ನಡೆಯುವ ಚಿತ್ರಕಥ ರಚನಾ ಶಿಬಿರದಲ್ಲಿ ಪಾಲ್ಗೊಂಡು ಚಿತ್ರಕಥೆ ರಚನ ವಿಧಾನದ ಅಭ್ಯಾಸ.
* ಕನ್ನಡದ ಕೆಲವು ಚಲನಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ.
* ಟೋನಿ, ಸವಾರಿ 2, ದಕ್ಷ, ಜುಗಾರಿ, ವೀರಗಾಥೆ ಚಲನಚಿತ್ರಗಳಲ್ಲಿ ನಟನೆ.
* ಈ ಹಿಂದೆ ನಿರ್ದೇಶಿಸಿದ್ದ "ಮತ್ತೆ ಮತ್ತೆ ತೇಜಸ್ವಿ" ಅತ್ಯಂತ ಜನಪ್ರಿಯ ಸಾಕ್ಷ್ಯಚಿತ್ರ.












Click it and Unblock the Notifications