Lok Sabha Election 2024: ಸೊಗಡು ಶಿವಣ್ಣಗೆ ಬಿಜೆಪಿ ಟಿಕೆಟ್ ನೀಡುವಂತೆ ಆಗ್ರಹ
ತುಮಕೂರು ಮಾರ್ಚ್ 11: ಜನಪರ ಹೋರಾಟಗಾರ ಸೊಗಡು ಶಿವಣ್ಣಗೆ ಬಿಜೆಪಿ ಟಿಕೆಟ್ ನೀಡುವಂತೆ ಆಗ್ರಹಿಸಿ ಅಭಿಮಾನಿಗಳಿಂದ ಒತ್ತಾಯ ಕೇಳಿ ಬಂದಿದೆ. ಜಿಲ್ಲೆಗೆ ಅವರು ನೀಡಿದ ಅಪಾರ ಕೊಡುಗೆಯನ್ನು ಆಧರಿಸಿ ಮುಂಬರುವ ಲೋಕಸಭಾ ಚುನಾವಣೆಗೆ ಸೊಗಡು ಶಿವಣ್ಣ ಅವರಿಗೆ ಟಿಕೆಟ್ ನೀಡುವಂತೆ ಅವರ ಅಭಿಮಾನಿಗಳು ಸುದ್ಧಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ. ಶಿವಣ್ಣನಿಗೆ ಟಿಕೆಟ್ ನೀಡಿದರೆ ಎರಡು ಲಕ್ಷ ಮತಗಳಿಂದ ಅವರ ಗೆಲವು ಖಚಿತ ಎಂದು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯವಾದಿ, ಹಿರಿಯ ಮುಖಂಡ, ಮೀಸಾಬಂದಿ, ಕರಸೇವಕ, ಹಿಂದೂ ಫೈರ್ ಬ್ರಾಂಡ್, ಅಜಾತಶತ್ರು, ಜನಪರ ಹೋರಾಟಗಾರ ಸೊಗಡು ಶಿವಣ್ಣ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಬಿಜೆಪಿ ವರಿಷ್ಠರರು ತೀರ್ಮಾನಿಸಬೇಕೆಂದು ಸೊಗಡು ಶಿವಣ್ಣ ಅಭಿಮಾನಿಗಳು ಮತ್ತು ಸ್ವಾಭಿಮಾನಿ ಸಮಾನ ಮನಸುಳ್ಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ತುಮಕೂರಿನ ಸಮೃದ್ಧಿ ಗ್ರಾಂಡ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ನಂತರ ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ಸೊಗಡುಶಿವಣ್ಣ ಅವರ ಬೆಂಬಲಿಗರ ಸಭೆಯಲ್ಲಿ ಬಿಜೆಪಿಯಿಂದ ತುಮಕೂರು ಲೋಕಸಭಾ ಟಿಕೆಟ್ ನೀಡುವಂತೆ ಆಗ್ರಹ ಕೇಳಿ ಬಂತು.
ಕುಣಿಗಲ್ನ ಹಿರಿಯ ಕಾರ್ಯಕರ್ತ ಮತ್ತು ಪ್ರಬುದ್ಧ ಪ್ರಕೋಷ್ಠದ ತುಮಕೂರು ಜಿಲ್ಲಾ ಸಂಚಾಲಕ ನಟರಾಜ್ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿರುವ ಸೊಗಡು ಶಿವಣ್ಣ ಅವರು ಜಿಲ್ಲೆಯ ಒಂದು ಶಕ್ತಿ ಕೇಂದ್ರವಾಗಿದ್ದಾರೆ. ಅವರ ಮೌನವನ್ನು ಅವರ ದೌರ್ಬಲ್ಯ ಎಂದು ಭಾವಿಸಬೇಡಿ, ಅವರು ಬಹಳ ಸಮರ್ಥರಿದ್ದಾರೆ ಎಂದರು.

ಹಿಂದುತ್ವದ ಬಲವಾದ ಪ್ರತಿಪಾದಕರು ಜೊತೆಗೆ ತುಮಕೂರು ಜಿಲ್ಲೆಯ ಜನತೆ ಹಿಂದೂ-ಮುಸ್ಲಿಂ ಗಲಾಟೆ ಇಲ್ಲದೆ ನೆಮ್ಮದಿಯಿಂದಿರಲು ಶಿವಣ್ಣ ಅವರ ಕೊಡುಗೆ ಅಪಾರವಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಪಕ್ಷಕ್ಕೆ ಇದೊಂದು ಅವಕಾಶ ಇದೆ. ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಶಿವಣ್ಣನವರಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಮಧುಗಿರಿ ಪಿ.ಎನ್, ನರಸಿಂಹಮೂರ್ತಿ ಮಾತನಾಡಿ, ಸೊಗಡು ಶಿವಣ್ಣ ಅವರು ಜಿಲ್ಲೆಯ ಪ್ರಶ್ನಾತೀತ ನಾಯಕರಾಗಿದ್ದಾರೆ ಎಂದರು. ಜೊತೆಗೆ ಹಿಂದುಳಿದ ಒಕ್ಕೂಟದ ಪ್ರಮುಖ ಧನಿಯ ಕುಮಾರ್ ಮಾತನಾಡಿ, ಪಕ್ಷದ ಸಿದ್ಧಾಂತವನ್ನು ಹೊಂದಿರುವ ಸಮರ್ಥ ನಾಯಕ ಶಿವಣ್ಣ. ಹಾಗಾಗಿ ಈ ಬಾರಿ ಅವರಿಗೆ ಟಿಕೆಟ್ ನೀಡಬೇಕು ಎಂದು ವರಿಷ್ಠರಿಗೆ ಒತ್ತಾಯಿಸಿದರು.
ಬೆಳಗುಂಬ ಪ್ರಭಾಕರ್ ಮಾತನಾಡಿ, ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸಮರ್ಥವಾಗಿ ಎದುರಿಸಬಲ್ಲ ನಾಯಕನೆಂದರೆ ಅದು ಸೊಗಡು ಶಿವಣ್ಣ ಮಾತ್ರ ಎಂದ ಅವರು, ಅವರಿಗೆ ಟಿಕೆಟ್ ನೀಡಿದರೆ ಎರಡು ಲಕ್ಷ ಮತಗಳ ಅಂತರದಲ್ಲಿ ಸೊಗಡು ಶಿವಣ್ಣ ಗೆಲ್ಲುತ್ತಾರೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಸವಕುಮಾರ್, ಸೊಗಡು ವೆಂಕಟೇಶ್, ಬಡ್ಡಿಹಳ್ಳಿ ಚಂದ್ರಣ್ಣ, ಬೆಸ್ಟ್ ರಾಮರಾಜು, ಗೋಕುಲ್ ಮಂಜುನಾಥ್, ಗುಬ್ಬಿಪ್ರಮೋದ್, ರೈತಮುಖಂಡ ಸುರೇಶ್ ಮುಂತಾದವರು ಮಾತನಾಡಿದರು. ಈ ಸಭೆಯಲ್ಲಿ ಜಿಲ್ಲೆಯಿಂದ ಬಂದಂತಹ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು.












Click it and Unblock the Notifications