HD Devegowda: ಕುಮಾರಸ್ವಾಮಿ ಹೇಳಿದ ಕಡೆ ಪ್ರಚಾರ ಮಾಡ್ತೇನೆ : ಮುಸ್ಲಿಮರನ್ನ ಬಿಟ್ಟುಕೊಡಲ್ಲ ಎಂದ ದೇವೇಗೌಡ
ಹೆಚ್.ಡಿ. ಕುಮಾರಸ್ವಾಮಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಬೆನ್ನಲ್ಲೇ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಸೋಮವಾರ ಅವರು ತುಮಕೂರು ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಭಾಗಿಯಾದರು. ಈ ವೇಳೆ ಮಾತನಾಡಿದ ಅವರು ಹೆಚ್ಡಿ ಕುಮಾರಸ್ವಾಮಿ ಹೇಳಿದ ಕಡೆ ಪ್ರಚಾರ ಮಾಡ್ತೀನಿ ಎಂದು ಹೇಳಿದರು.
ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, "ಕೆಲವು ಅಭಿಮಾನಿಗಳು ನನ್ನ ಹೆಗಲ ಮೇಲೆ ಕುರಿ ಹೊರಿಸಿದ್ದರೂ, ನನಗೆ ಈಗ 92 ವರ್ಷ ವಯಸ್ಸಾದರೂ ಅದನ್ನು ಹೊತ್ತುಕೊಂಡಿದ್ದೆ. ಕುಮಾರಸ್ವಾಮಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೆಲ್ಲ ದೇವರ ಇಚ್ಛೆ" ಎಂದು ಹೇಳಿದರು.

"ಕುಮಾರಸ್ವಾಮಿ ಶೀಘ್ರದಲ್ಲೇ ಗುಣಮುಖರಾಗಲಿದ್ದು ಅವರು ಮತ್ತೆ ಪ್ರಚಾರ ಮಾಡುತ್ತಾರೆ. ರಾಜ್ಯದಲ್ಲಿ ಪಂಚರತ್ನ ಯೋಜನೆ ಜಾರಿ ಮಾಡಲು ಹೋರಾಟ ಮಾಡುತ್ತಿದ್ದೇವೆ. ಮುಸ್ಲಿಂ ಮುಖಂಡರು ಜೆಡಿಎಸ್ಗೆ ಸೇರ್ಪಡೆಯಾಗಿದ್ದಾರೆ. ನಾವು ಮುಸ್ಲಿಂ ಸಮಾಜವನ್ನು ಬಿಟ್ಟುಕೊಟ್ಟಿಲ್ಲ, ಮುಂದೆಯೂ ಬಿಟ್ಟುಕೊಡುವುದಿಲ್ಲ, ಬಿಸಿಲಿನಲ್ಲಿ ನಿಲ್ಲಿಸಿದ್ದಕ್ಕೆ ತಾಯಂದಿರ ಬಳಿ ಕ್ಷಮೆ ಕೇಳುತ್ತೇನೆ" ಎಂದು ಹೇಳಿದರು.
"ಹೆಚ್ಡಿ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಅವರು ಈಗ ಹೋರಾಟ ಮಾಡುತ್ತಿರುವುದು ಪಂಚರತ್ನ ಯೋಜನೆಯನ್ನು ಜಾರಿ ಮಾಡುವ ಸಲುವಾಗಿ, ಈ ಬಾರಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು" ಎಂದು ಹೆಚ್ಡಿ ದೇವೇಗೌಡ ಹೇಳಿದರು.
ಶಿರಾ, ಮಧುಗಿರಿ, ಕೊರಟಗೆರೆಯಲ್ಲಿ ಪ್ರಚಾರ
ಹೆಚ್ಡಿ ದೇವೇಗೌಡ ತಮ್ಮ ಇಳಿ ವಯಸ್ಸಿನಲ್ಲೂ ರಾಜಕೀಯ ಮೇಲಿನ ಉತ್ಸಾಹವನ್ನು ಒಂಚೂರು ಕಳೆದುಕೊಂಡಿಲ್ಲ, ಮಗ ಆಸ್ಪತ್ರೆಯಲ್ಲಿದ್ದಾಗಲೂ ತಾವು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ತುಮಕೂರು ಜಿಲ್ಲೆಯ ಶಿರಾ, ಮಧುಗಿರಿ ಮತ್ತು ಕೊರಟಗೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಅವರು ಪಕ್ಷದ ಪರವಾಗಿ ಪ್ರಚಾರ ಮಾಡಿದರು.
ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಲು ನನಗೆ ಇಷ್ಟವಿರಲಿಲ್ಲ ಆದರೂ ಕೆಲವು ನಾಯಕರು ಬಲವಂತ ಮಾಡಿದ್ದರಿಂದ ಸ್ಪರ್ಧೆಗೆ ನಿಂತೆ ಎಂದು ದೇವೇಗೌಡ ನೆನಪು ಮಾಡಿಕೊಂಡರು. ಆ ನಾಯಕರಾರು ಎಂದು ಈಗ ಬಹಿರಂಗಪಡಿಸುವುದಿಲ್ಲ, ನನಗೆ ಸ್ಪರ್ಧೆ ಮಾಡುವುದು ಬೇಕಾಗಿರಲಿಲ್ಲ ಎಂದು ಹೇಳಿದರು.
ತುಮಕೂರು ಜಿಲ್ಲೆ ಜೆಡಿಎಸ್ನ ಭದ್ರ ಕೋಟೆ ಎನಿಸಿಕೊಂಡಿದ್ದರೂ ಸದ್ಯ ವರ್ಚಸ್ಸು ಕಳೆದುಕೊಂಡಿದೆ. ಶಿರಾದಲ್ಲಿ ಜೆಡಿಎಸ್ ಶಾಸಕ ಸತ್ಯನಾರಾಯಣ ನಿಧನರಾದ ಬಳಿಕ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ, ಗುಬ್ಬಿಯಲ್ಲಿ ಜೆಡಿಎಸ್ ಶಾಸಕರಾಗಿದ್ದ ಶ್ರೀನಿವಾಸ್ ಸದ್ಯ ಕಾಂಗ್ರೆಸ್ ಸೇರಿದ್ದು ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಸೋಮವಾರ ತುಮಕೂರಿನಲ್ಲಿ ಪ್ರಚಾರ ನಡೆಸಿರುವ ದೇವೇಗೌಡ ಮಂಗಳವಾರ ಮೈಸೂರು ಜಿಲ್ಲೆಗೆ ಆಗಮಿಸಿ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್. ನಗರ ಪಟ್ಟಣಗಳಲ್ಲಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಪ್ರಚಾರಕ್ಕೆ ತೆರಳದಂತೆ ವೈದ್ಯರು ಸಲಹೆ ನೀಡಿದ್ದರೂ ಹೆಚ್ಡಿ ದೇವೇಗೌಡ ಪ್ರಚಾರ ಮಾಡುತ್ತಿದ್ದು, ವೈದ್ಯರ ತಂಡ ಕೂಡ ಅವರ ಜೊತೆ ಪ್ರಯಾಣ ಮಾಡುತ್ತಿದ್ದು, ಆರೋಗ್ಯದ ಮೇಲ್ವಿಚಾರಣೆ ಮಾಡುತ್ತಿದ್ದಾರೆ.












Click it and Unblock the Notifications