ರಮೇಶ್ ಜಾರಕಿಹೊಳಿ ಮನವೊಲಿಸುತ್ತೇನೆ: ಪರಮೇಶ್ವರ್
ತುಮಕೂರು, ಏಪ್ರಿಲ್ 24: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲು ಸಜ್ಜಾಗಿರುವ ಶಾಸಕ ರಮೇಶ್ ಜಾರಕಿಹೊಳಿ ಅವರ ಮನವೊಲಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾಡಿದ ಅವರು, ರಮೇಶ್ ಅವರನ್ನು ಸಚಿವರನ್ನಾಗಿ ಮಾಡಿದ್ದೆವು, ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದೆವು, ಈಗಲೂ ಪಕ್ಷದಲ್ಲಿ ಅವರಿಗೆ ವಿವಿಧ ಜವಾಬ್ದಾರಿಗಳನ್ನು ಕೊಡುವ ಅವಕಾಶಗಳಿವೆ ಎಂದು ಪರಮೇಶ್ವರ್ ಅವರು ಹೇಳಿದರು.
ರಮೇಶ್ ಜಾರಕಿಹೊಳಿ ರಾಜೀನಾಮೆ ಧಮ್ಕಿ: ಡಿಕೆಶಿ ಡೋಂಟ್ ಕೇರ್
ಮೈತ್ರಿ ಸರ್ಕಾರ ಸುಭದ್ರವಾಗಿದೆ, ಯಾರು ಏನೇ ಪ್ರಯತ್ನ ಪಟ್ಟರು ಸರ್ಕಾರ ಬೀಳುವುದಿಲ್ಲ ಎಂದ ಪರಮೇಶ್ವರ್, ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅದು ಸಾಧ್ಯವಿಲ್ಲ ಎಂದರು.
ನಮ್ಮ ಶಾಸಕರನ್ನು ಸಂಪರ್ಕಿಸುವ ಬಿಜೆಪಿಯವರಿಗೆ, ಅವರ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಅರಿವಿರಬೇಕು, ನಾನು ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ ಯಾವಾಗ ಏನು ಮಾಡಬೇಕು, ಯಾರನ್ನು ಪಕ್ಷಕ್ಕೆ ಸೆಳೆಯಬೇಕು ಎಂಬ ತಂತ್ರ ಗೊತ್ತಿದೆ ಎಂದು ಪರಮೇಶ್ವರ್ ಹೇಳಿದರು.
ಸಹೋದರರ ಆರೋಪ-ಪ್ರತ್ಯಾರೋಪ: ಇಂದೇ ರಮೇಶ್ ಜಾರಕಿಹೊಳಿ ರಾಜೀನಾಮೆ?
ಲೋಕಸಭೆ ಚುನಾವಣೆ ಬಳಿಕ ಪರಮೇಶ್ವರ್ ಅವರನ್ನು ಮೂಲೆಗುಂಪು ಮಾಡಲಾಗುತ್ತದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು, ಲೋಕಸಭೆ ಟಿಕೆಟ್ ಹಂಚಿಕೆ ಸಂದರ್ಭ ಸಹ ನಮ್ಮನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು ಎಂದ ಪರಮೇಶ್ವರ್, ತುಮಕೂರು ಹಾಲಿ ಸಂಸದರಿಗೆ ಟಿಕೆಟ್ ತಪ್ಪುವುದಕ್ಕೆ ಬೇರೆ ಕಾರಣಗಳಿದ್ದವು ಎಂದಿದ್ದಾರೆ.